ಅನ್ ಲಾಕ್ 1.0: ಇಂದಿನಿಂದ ಬಂಡೀಪುರದಲ್ಲಿ ಸಫಾರಿ ಆರಂಭ
ಚಾಮರಾಜನಗರ, ಜೂನ್ 8: ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕಳೆದ 85 ದಿನಗಳಿಂದ ಬಂದ್ ಆಗಿದ್ದ ಬಂಡೀಪುರ ಸಫಾರಿ ಇಂದಿನಿಂದ ಆರಂಭಗೊಂಡಿದೆ. ಸಪಾರಿ ಆರಂಭಿಸುವ ಬಗ್ಗೆ ಈಗಾಗಲೇ ರಾಷ್ಟ್ರೀಯ ಹುಲಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಇದರ ಅನ್ವಯ ಸಫಾರಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಹೀಗಾಗಿ ಪ್ರವಾಸಿಗರು ಸಫಾರಿಗೆ ತೆರಳಬಹುದಾಗಿದೆ.
ಜೂನ್ 8 ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಆರಂಭಕ್ಕೆ ಮಾರ್ಗಸೂಚಿ
ಇಂದಿನಿಂದಲೇ ಸಫಾರಿ ಆರಂಭಿಸಲಾಗಿದ್ದರೂ ಮುಂದಿನ ದಿನಗಳಲ್ಲಿ ಪ್ರವಾಸಿಗರು ಬರಬಹುದು. ಏಕೆಂದರೆ ಇಲ್ಲಿಗೆ ರಾಜ್ಯಕ್ಕಿಂತ ಹೆಚ್ಚಾಗಿ ಹೊರಗಿನ ಪ್ರವಾಸಿಗರೇ ಜಾಸ್ತಿಯಾಗಿ ಬರುತ್ತಿದ್ದು, ಆದರೆ ಕೊರೊನಾ ಕಾರಣದಿಂದ ದೂರದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅನುಮಾನ. ಆದರೆ ದಿನ ಕಳೆಯುತ್ತಿದ್ದಂತೆಯೇ ಪ್ರವಾಸಿಗರು ಇತ್ತ ಬರುವುದಂತು ಖಚಿತ.
ಬಂಡೀಪುರದ ಕಾಡಾನೆಗೆ ಸಫಾರಿ ವಾಹನವೇ ಟಾರ್ಗೆಟ್, ಯಾಕಿರಬಹುದು?
ಹಸಿರಿನಿಂದ ಬಂಡೀಪುರ ಕಂಗೊಳಿಸುತ್ತಿದೆ
ಈಗಾಗಲೇ ಹಸಿರಿನಿಂದ ಬಂಡೀಪುರ ಕಂಗೊಳಿಸುತ್ತಿದ್ದು, ವನ್ಯ ಪ್ರಾಣಿಗಳು ದರ್ಶನ ನೀಡಲಾರಂಭಿಸಿವೆ. ಆದ್ದರಿಂದ ನಿಸರ್ಗ ಪ್ರೇಮಿಗಳು, ಪ್ರಾಣಿಪ್ರಿಯರು ವನ್ಯ ಪ್ರಾಣಿಗಳನ್ನು ನೋಡುವ ಸಲುವಾಗಿಯೇ ಬರಲಿದ್ದಾರೆ.
ಇದಲ್ಲದೆ ಪ್ರತಿ ಟ್ರಿಪ್ ನಂತರ ಸಫಾರಿ ವಾಹನಗಳ ಟೈರ್ ಗಳನ್ನು ಸ್ಯಾನಿಟೈಸ್ ಮಾಡಲಾಗುವುದು. ಇದರ ಜೊತೆಗೆ 10 ವರ್ಷದ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಸಫಾರಿ ಹೋಗಲು ಅವಕಾಶವಿಲ್ಲ.
ಕೌಂಟರ್ ನಲ್ಲೇ ಸ್ಯಾನಿಟೈಸರ್ ನೀಡಲಾಗುತ್ತದೆ
ಇನ್ನು ಬಂಡೀಪುರಕ್ಕೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಫಾರಿ ತೆರಳುವ ಮೊದಲೇ ಅವರಿಗೆ ಕೌಂಟರ್ ನಲ್ಲೇ ಸ್ಯಾನಿಟೈಸರ್ ನೀಡಲಾಗುತ್ತದೆ. ಸಾಮಾಜಿಕ ಅಂತರ ಕಾಪಾಡುವ ಹಿನ್ನಲೆಯಲ್ಲಿ ಪ್ರತಿ ಸಫಾರಿ ವಾಹನದಲ್ಲೂ ಶೇ.50 ರಷ್ಟು ಸೀಟ್ ಗಳಲ್ಲಿ ಮಾತ್ರ ಪ್ರವಾಸಿಗರು ತೆರಳುವಂತೆ ಕ್ರಮ ಕೈಗೊಳ್ಳಲಾಗಿದೆ.
ಸಫಾರಿಯ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ
ಸಫಾರಿಗೆ ಬಂಡೀಪುರದಲ್ಲಿ ಎಂಟು ಬಸ್ ಗಳು ಹಾಗೂ ಐದು ಜಿಪ್ಸಿ ವಾಹನಗಳನ್ನು ಬಳಸಲಾಗುತ್ತಿದ್ದು, ಬೆಳಿಗ್ಗೆ 6.30 ರಿಂದ 8.30 ಹಾಗೂ ಸಂಜೆ 3 ರಿಂದ 5.30 ರವರಗೆ ಸಫಾರಿ ನಡೆಯಲಿದೆ. ಈ ಸಫಾರಿಯ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ. ಬಸ್ ನಲ್ಲಿ ಒಬ್ಬರಿಗೆ ಎಂದಿನಂತೆ 350 ರುಪಾಯಿ ಹಾಗೂ ಒಂದು ಜಿಪ್ಸಿ ವಾಹನಕ್ಕೆ 3,500 ರುಪಾಯಿ ದರವಿದೆ.
ಕಳೆದ ಎಂಬತೈದು ದಿನಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಫಾರಿ ಬಂದ್ ಮಾಡಿದ್ದರಿಂದ ಸುಮಾರು ಮೂರೂವರೆ ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಛಾಯಾಗ್ರಾಹಕ ಕೃಪಕಾರ್ ಸೇನಾನಿಯನ್ನು ವೀರಪ್ಪನ್ ಅಪಹರಿಸಿದ್ದನು
ಈ ಹಿಂದೆ ಅಂದರೆ 1997 ಅಕ್ಟೊಬರ್ 9 ರಂದು ಕಾಡುಗಳ್ಳ ವೀರಪ್ಪನ್ ನು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಕಾರ್ ಸೇನಾನಿ, ಡಾ.ಮೈತ್ರಿ ಹಾಗೂ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಬಂಡೀಪುರದ ಹುಲಿಕಟ್ಟೆ ಹತ್ತಿರ ಅಪಹರಣ ಮಾಡಿಕೊಂಡು ಹೋದ ವೇಳೆಯಲ್ಲಿ ಎರಡು ತಿಂಗಳ ಕಾಲ ಬಂಡೀಪುರ ಸಫಾರಿ ಬಂದ್ ಮಾಡಲಾಗಿತ್ತು. ಅದನ್ನು ಹೊರತು ಪಡಿಸಿ ಇದೀಗ ಮತ್ತೆ ದೀರ್ಘಕಾಲ ಬಂದ್ ಮಾಡಿರುವುದನ್ನು ಸ್ಮರಿಸಬಹುದಾಗಿದೆ.