ಗುಂಡ್ಲುಪೇಟೆ; ಅನ್ನ ನೀರಿಲ್ಲದೆ ರಸ್ತೆ ಬದಿಯಲ್ಲೇ ಮಲಗಿರುವ ಈ ಯುವಕ ಯಾರು?
ಚಾಮರಾಜನಗರ, ಜೂನ್ 20: ಅನ್ನ ನೀರಿಲ್ಲದೇ ಇಪ್ಪತ್ತು ದಿನಗಳಿಂದ ರಸ್ತೆ ಬದಿಯಲ್ಲಿ ಅಪರಿಚಿತ ಯುವಕನೊಬ್ಬ ಮಲಗಿರುವ ಸಂಗತಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯಾರಣ್ಯ ಕಚೇರಿಗೆ ಸಮೀಪ ಈಚೆಗೆ ಬೆಳಕಿಗೆ ಬಂದಿದೆ.
Recommended Video
ಈತ ಹೀಗೆ ಮಲಗಿದ್ದರೂ ಅಧಿಕಾರಿಗಳು ಯಾವುದೇ ರೀತಿಯ ಮಾನವೀಯ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈತ ಮದ್ದೂರು ವಲಯಾರಣ್ಯ ಕಚೇರಿಗೆ ಸಮೀಪವೇ ಕಳೆದ ಇಪ್ಪತ್ತು ದಿನಗಳಿಂದಲೂ ಮಲಗಿದ್ದು, ಇದನ್ನು ನೋಡಿದ ಕಾಡಂಚಿನ ಗ್ರಾಮಗಳ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾನಸಿಕ ಅಸ್ವಸ್ಥ ಗರ್ಭಿಣಿಯ ಸಹಾಯಕ್ಕೆ ನಿಂತ ಬಳ್ಳಾರಿ ಡಿಸಿ
ರಾಷ್ಟ್ರೀಯ ಹೆದ್ದಾರಿ 67ರ ಸುಲ್ತಾನ್ ಬತ್ತೇರಿ ರಸ್ತೆಯ ಮದ್ದೂರು ಕಗ್ಗಳದಹುಂಡಿ ಸಮೀಪ ಹಿಂದಿಯಲ್ಲಿ ಮಾತನಾಡುವ ಅಪರಿಚಿತ ಯುವಕ ಎರಡು ಭಾರೀ ಗಾತ್ರದ ಬ್ಯಾಗ್ಗಳನ್ನು ತಲೆದಿಂಬಾಗಿಸಿಕೊಂಡು ಮಲಗಿದ್ದಾನೆ. ಈತನಿಗೆ ಇದುವರೆಗೆ ಯಾರು ಕೂಡ ಆಹಾರ ನೀಡಿಲ್ಲ. ನಿತ್ರಾಣ ಸ್ಥಿತಿಯಲ್ಲಿರುವ ಈತ ಎತ್ತಲೂ ಹೋಗದೆ ಮಲಗಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಆತ ರಸ್ತೆಯ ಬದಿಯಲ್ಲಿರುವುದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ. ಮಳೆ ಗಾಳಿ ಚಳಿ ಬಿಸಿಲನ್ನೂ ಲೆಕ್ಕಿಸದೆ ಮಲಗಿರುವ ಯುವಕನ ಬಳಿ ಹೋಗಲು ಜನ ಭಯಪಡುತ್ತಿದ್ದಾರಲ್ಲದೆ, ಜಮೀನುಗಳಿಗೆ ಹೋಗುವ ರೈತರು ಬಳಸು ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಯುವಕನ ಬಗ್ಗೆ ವಿಚಾರಿಸಿ ಆತನ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕಗ್ಗಳದಹುಂಡಿ ಗ್ರಾಮಸ್ಥರಾದ ಗಂಗಾಧರ ಹಾಗೂ ಮಹದೇವಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಮೇರೆಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ನಂಜುಂಡಯ್ಯ ಅವರು, ರಸ್ತೆ ಬದಿಯಲ್ಲಿ ಮಲಗಿರುವ ಯುವಕನನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪೊಲೀಸರಿಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.