ಚಾಮರಾಜನಗರ ಡಿಸಿಗೆ ಕರೆ ಮಾಡಿದ ಕೇಂದ್ರ ಆರೋಗ್ಯ ಸಚಿವ. ಕಾರಣ?
ಚಾಮರಾಜನಗರ, ಜೂನ್ 5: ಕೊರೊನಾ ವೈರಸ್ ಹಾಟ್ ಸ್ಪಾಟ್ ಗಳ ಮಧ್ಯೆ ಇದ್ದರೂ ಚಾಮರಾಜನಗರ ಜಿಲ್ಲೆಯಲ್ಲಿ ಈವರೆಗೂ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರಿಗೆ ದೂರವಾಣಿ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಭಾರತದ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಜಿಲ್ಲೆ ಪಾತ್ರವಾಗಿದೆ. ವಿಶೇಷವೆಂದರೆ ಜಿಲ್ಲೆಯು ಕೊರೊನಾ ವೈರಸ್ ಹಾಟ್ ಸ್ಪಾಟ್ ಜಿಲ್ಲೆ ಹಾಗೂ ರಾಜ್ಯಗಳೊಂದಿಗೆ ತನ್ನ ಗಡಿ ಹಂಚಿಕೊಂಡಿದೆ. ತಮಿಳುನಾಡು, ಕೇರಳ ರಾಜ್ಯಗಳು ಒಂದೆಡೆಯಾದರೆ ಮೈಸೂರು, ಮಂಡ್ಯ ಇನ್ನೊಂದೆಡೆ ಇವೆ. ಹೀಗಿದ್ದರೂ ಜಿಲ್ಲೆಯಲ್ಲಿ ಈವರೆಗೂ ಒಂದೂ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ.
ದಕ್ಷಿಣ ಭಾರತದ ಕೊರೊನಾ ಮುಕ್ತ ಏಕೈಕ ಜಿಲ್ಲೆಗೆ ತಮಿಳರೇ ಕಂಟಕವಾಗಿದ್ದಾರಾ?
ಚಾಮರಾಜನಗರ ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆ ಸ್ವತಃ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸುದ್ದಿಗಾರರ ಜೊತೆ ಹಂಚಿಕೊಂಡಿದ್ದಾರೆ.
""ಕೇಂದ್ರ ಆರೋಗ್ಯ ಸಚಿವರ ಕರೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಅವರು ಕರೆ ಮಾಡಿರುವುದರಿಂದ ಬಹಳ ಆಶ್ಚರ್ಯದ ಜೊತೆಗೆ ಹೆಮ್ಮೆಯಾಗಿದೆ. ಖುಷಿಯ ಜೊತೆಗೆ ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ. ಕೇಂದ್ರ ಸಚಿವರೇ ಕರೆ ಮಾಡಿ ಅಭಿನಂದನೆ ಮಾಡಿದ್ದಾರೆ. ನಮ್ಮ ಇಡೀ ತಂಡಕ್ಕೆ ಹಾಗೂ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸಿದರು'' ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ತಿಳಿಸಿದರು.
ಕೊರೊನಾ ದೂರವುಳಿಸಲು ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಆರಂಭ
""ಚಾಮರಾಜನಗರ ಜಿಲ್ಲೆಯು ಕೊರೊನಾ ವೈರಸ್ ಮುಕ್ತವಾಗಿರುವುದನ್ನು ಸ್ವತಃ ಆರೋಗ್ಯ ಸಚಿವರೇ ಖುದ್ದಾಗಿ ಗುರುತಿಸಿರುವುದು ಹೆಮ್ಮೆಯ ಸಂಗತಿ. ದೆಹಲಿಗೆ ಬಂದಾಗ ತಮ್ಮ ಕಚೇರಿಗೆ ಬಂದು ಹೋಗುವಂತೆ ಆರೋಗ್ಯ ಸಚಿವರಾದ ಡಾ.ಹರ್ಷವರ್ಧನ್ ಆವರು ತಿಳಿಸಿದ್ದಾರೆ" ಎಂದರು.
ಇದುವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲದೆ ದಕ್ಷಿಣ ಭಾರತದಲ್ಲಿಯೇ ಏಕೈಕ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಜಿಲ್ಲೆಗಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಹಸಿರು ವಲಯವಾಗಿ ಕೊರೊನಾ ಮುಕ್ತ ಜಿಲ್ಲೆಯಾಗಿಯೇ ಉಳಿದಿರುವುದು ಚಾಮರಾಜನಗರ ಎಂಬುದು Covid19india.org ನೀಡಿರುವ ಅಧಿಕೃತ ಅಂಕಿ ಅಂಶಗಳಿಂದ ಖಚಿತವಾಗಿದೆ.
ತೆಲಂಗಾಣದ ವಾರಂಗಲ್ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಕಂಡು ಬಂದಿರಲಿಲ್ಲ. ಆದರೆ ತೆಲಂಗಾಣದ ವಾರಂಗಲ್ ಗ್ರಾಮೀಣ ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಚಾಮರಾಜನಗರ ದಕ್ಷಿಣ ಭಾರತದ ಕೊರೊನಾ ಮುಕ್ತ ಏಕೈಕ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿದೆ.