ಮೇಕೆ ಮೇಯಿಸುವ ನೆಪದಲ್ಲಿ ಉಡ ಬೇಟೆ: ಇಬ್ಬರ ಬಂಧನ
ಚಾಮರಾಜನಗರ, ಮೇ 05: ಲಾಕ್ ಡೌನ್ ಆದ ಬಳಿಕ ಚಾಮರಾಜನಗರ ಜಿಲ್ಲೆಯ ವಿವಿಧ ಅರಣ್ಯ ವಲಯದಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ಒಂದೆಡೆ ಜಿಂಕೆ, ಕಡವೆಯನ್ನು ಬೇಟೆಯಾಡಿದರೆ ಮತ್ತೊಂದೆಡೆ ಉಡಗಳನ್ನು ಬೇಟೆಯಾಡುವ ಜಾಲವೂ ಸಕ್ರಿಯವಾಗಿದೆ. ಈ ಜಾಲವನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೆಲವರಿಗೆ ಉಡ ಮಾಂಸ ಪ್ರಿಯವಾಗಿದ್ದು, ಅದಕ್ಕೆ ಬೇಡಿಕೆ ಇರುವ ಕಾರಣ ಬೇಟೆಗಾರರು ಅರಣ್ಯದಂಚಿನಲ್ಲಿ ಮೇಕೆಗಳನ್ನು ಕಾಯುವ ನೆಪದಲ್ಲಿ ತಮ್ಮೊಂದಿಗೆ ನಾಯಿಗಳನ್ನು ಕರೆದೊಯ್ದು ಅವುಗಳ ಮೂಲಕ ಉಡಗಳು ಇರುವ ಸ್ಥಳಗಳನ್ನು ಪತ್ತೆ ಹಚ್ಚಿ ಬೇಟೆಯಾಡುತ್ತಿದ್ದರು. ಇದು ಹಿಂದಿನಿಂದಲೂ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಗೆ ಸಂಶಯ ಬಂದಿರಲಿಲ್ಲ. ಮೇಕೆಗಳನ್ನು ಮೇಯಿಸಿಕೊಂಡು ಹೋಗುತ್ತಿದ್ದಾರೆ. ಅವರಿಗೇಕೆ ತೊಂದರೆ ನೀಡುವುದು ಎಂದು ಸುಮ್ಮನಿದ್ದರು.
ಕೊಡಗಿನಲ್ಲಿ ಜಿಂಕೆ ಬೇಟೆ: ಇಬ್ಬರ ಬಂಧನ
ಆದರೆ ಮೇಕೆಗಳನ್ನು ಮೇಯಿಸುವುದರೊಂದಿಗೆ ನಾಯಿಗಳ ಮೂಲಕ ಉಡಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ದಿನೇಶ್, ಅರಣ್ಯ ರಕ್ಷಕ ಸತೀಶ್ ಹಾಗೂ ಅಲಂಬಡಿ ಕಳ್ಳ ಬೇಟೆ ತಡೆ ಕ್ಯಾಂಪ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಉಡಗಳನ್ನು ಬೇಟೆಯಾಡುತ್ತಿದ್ದ ಆರ್ಮುಗಂ (36) ಮತ್ತು ಸೆಲ್ವಂ (51) ಎಂಬಿಬ್ಬರು ಸಿಕ್ಕಿ ಬಿದ್ದಿದ್ದರು.
ಅವರನ್ನು ತಪಾಸಣೆ ನಡೆಸಿದಾಗ ಅವರ ಬಳಿ ಎರಡು ಉಡಗಳು ಇರುವುದು ಪತ್ತೆಯಾಗಿತ್ತು. ಅಲ್ಲದೆ ಮೇಲ್ನೋಟಕ್ಕೆ ಇವರು ಮೇಕೆಗಳನ್ನು ಮೇಯಿಸುವಂತೆ ನಾಟಕವಾಡುತ್ತಾ ನಾಯಿಗಳನ್ನು ಬಳಸಿಕೊಂಡು ಅವುಗಳ ಮೂಲಕ ಉಡಗಳನ್ನು ಬೇಟೆಯಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಂಧಿತರಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಉಡಗಳನ್ನು ಬೇಟೆಯಾಡಿ ಇವರೇ ಮಾಂಸ ಮಾಡಿ ಸೇವಿಸುತ್ತಿದ್ದರಾ? ಅಥವಾ ಉಡ ಬೇಟೆ ಹಿಂದೆ ಬೇರೆಯವರ ಕೈವಾಡ ಇದೆಯಾ ಎಂಬುದು ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ.
ಸದ್ಯ ಲಾಕ್ ಡೌನ್ ಬಳಿಕ ಚಾಮರಾಜನಗರದಲ್ಲಿ ಬೇಟೆಗಾರರ ಮತ್ತು ಅರಣ್ಯ ಕಳ್ಳರ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.