ಚಾಮರಾಜನಗರದಲ್ಲಿ ಅಕ್ರಮ ವಿದ್ಯುತ್ ಬೇಲಿಗೆ ಎರಡು ಕಾಡಾನೆಗಳು ಬಲಿ
ಚಾಮರಾಜನಗರ, ಫೆಬ್ರವರಿ 29: ವಿದ್ಯುತ್ ಬೇಲಿ ತುಳಿದು ಎರಡು ಆನೆಗಳು ಸಾವನ್ನಪ್ಪಿರುವ ದಾರುಣ ಘಟನೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಕರುಳವಾಡಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ರೈತ ಕುರುಪ್ಪು ಸ್ವಾಮಿ ಎಂಬಾತನು ಕಾಡು ಪ್ರಾಣಿಗಳ ಬರುವುದನ್ನು ತಡೆಗಟ್ಟಲು ಜಮೀನಿಗೆ ವಿದ್ಯುತ್ ವೈರ್ ಅನ್ನು ಬೇಲಿಗೆ ಸಂಪರ್ಕಿಸಿ ಹಾಕಿದ್ದ. ರಾತ್ರಿ ಎರಡು ಗಂಡಾನೆಗಳು ಆಹಾರ ಅರಸಿ ಕರುಳವಾಡಿ ಗ್ರಾಮ ಪ್ರವೇಶಿಸಿವೆ. ಹಸಿವಿನಿಂದ ಕಂಗೆಟ್ಟಿದ್ದ ಕಾಡಾನೆಗಳು ಬೇಲಿ ಸ್ಪರ್ಶಿಸುತಿದ್ದಂತೆಯೇ ವಿದ್ಯುತ್ ಆಘಾತದಿಂದ ಮೃತಪಟ್ಟಿವೆ.
ಅಚ್ಚರಿಯಾದರೂ ಸತ್ಯ, ಏಷ್ಯಾದ ಆನೆ ಕೂಡಾ ವಿನಾಶದ ಅಂಚಿನಲ್ಲಿದೆ!
ಈ ಎರಡೂ ಗಂಡಾನೆಗಳು 30-40ರ ವಯೋಮಾನದವು ಎಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ಗ್ರಾಮಸ್ಥರಿಗೆ ಎರಡೂ ಆನೆಗಳ ಮೃತ ದೇಹಗಳು ಕಂಡುಬಂದಿವೆ. ಇದರ ನಂತರ ರೈತ ಕುರುಪ್ಪು ಸ್ವಾಮಿ ನಾಪತ್ತೆ ಆಗಿದ್ದಾನೆ. ಘಟನಾ ಸ್ಥಳಕ್ಕೆ ತಮಿಳುನಾಡಿನ ಸತ್ಯಮಂಗಲಂ ಜಿಲ್ಲೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.