ಗಾಂಜಾ ಹಣಕ್ಕಾಗಿ ವ್ಯಕ್ತಿಯನ್ನು ಹತೈಗೈದಿದ್ದ ಹಂತಕರ ಬಂಧನ
ಚಾಮರಾಜನಗರ, ಜುಲೈ 2: ಗಾಂಜಾ ವಿಚಾರಕ್ಕಾಗಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದು ಪರಾರಿಯಾಗಿದ್ದ ಹಂತಕರಿಬ್ಬರನ್ನು ಹನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಣಗಳ್ಳಿ ಗ್ರಾಮದ ಶಫೀವುಲ್ಲಾ ಶರೀಫ್, ಬಂಡಳ್ಳಿ ಗ್ರಾಮದ ಫರ್ಹತ್ ಖಾನ್ ಬಂಧಿತ ಹಂತಕರು.
ಇವರಿಂದ ಮಣಗಳ್ಳಿ ಗ್ರಾಮದ ವೆಂಕಟಯ್ಯ ಎಂಬಾತ ಗಾಂಜಾ ಪಡೆದು ಅದರ ಐವತ್ತು ಸಾವಿರ ರೂಪಾಯಿಗಳನ್ನು ಕೊಟ್ಟಿರಲಿಲ್ಲ. ಕಳೆದ ಆರು ತಿಂಗಳಿನಿಂದ ಈ ಸಂಬಂಧ ಇವರ ನಡುವೆ ಜಗಳಗಳು ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೆ ಇವರಿಗೆ ಸಿಗದಂತೆ ವೆಂಕಟಯ್ಯ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದನು.
ನಿದ್ದೆಯಿಂದ ಎಬ್ಬಿಸಿದ ಕೋಪಕ್ಕೆ ವ್ಯಕ್ತಿಯ ಕೊಲೆ: 20 ವರ್ಷಗಳ ಬಳಿಕ ಜೀವಾವಧಿ
ಕಳೆದ ಜೂನ್ 18ರಂದು ಆಕಸ್ಮಿಕವಾಗಿ ಸಿಕ್ಕ ವೆಂಕಟಯ್ಯ ಅವರನ್ನು ಶಫೀವುಲ್ಲ ಮತ್ತು ಫರ್ಹತ್ ಖಾನ್ ಸೇರಿ ಕತ್ತು ಕೊಯ್ದು ಕೊಲೆ ಮಾಡಿ ಮಣಗಳ್ಳಿ-ಅಲಗುಮೂಲೆ ನಡುವೆ ಇರುವ ಸೋಲಾರ್ ಪ್ಲಾಂಟ್ ಹತ್ತಿರದ ಜಮೀನಿನಲ್ಲಿ ಎಸೆದು ಹೋಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಎಸ್ಪಿ ಎಚ್.ಡಿ.ಆನಂದ ಕುಮಾರ್ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಕೊಳ್ಳೇಗಾಲ ಡಿ.ಎಸ್.ಪಿ ಪುಟ್ಟಮಾದಯ್ಯ ರವರ ಮಾರ್ಗದರ್ಶನದಲ್ಲಿ ಹನೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್, ಪಿ.ಎಸ್.ಐ ನಾಗೇಶ್ ಹಾಗೂ ಸಿಬ್ಬಂದಿ ಸಿದ್ದೇಶ್ ಕುಮಾರ್, ಮಲ್ಲಿಕಾರ್ಜುನ, ವೀರಭದ್ರಸ್ವಾಮಿ, ಪ್ರದೀಪ್ ಕುಮಾರ್, ಶೆಹೆನ್ ಷಾ ಮುಖಂದರ್, ರಾಜು, ಭಗೀರಥ ಅವರನ್ನೊಳಗೊಂಡ ತಂಡ ರಚಿಸಿ ತನಿಖೆಗೆ ಸೂಚಿಸಿದ್ದರು. ತನಿಖೆ ಆರಂಭಿಸಿದ ತಂಡ ಆರೋಪಿಗಳಾದ ಶಫೀವುಲ್ಲ ಮತ್ತು ಫರ್ಹತ್ ಖಾನ್ ಎಂಬಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.