ಕಿಚ್ಚುಗುತ್ತಿ ಮಾರಮ್ಮ ದೇಗುಲ ಸರ್ಕಾರಕ್ಕೊಪ್ಪಿಸಲು ಟ್ರಸ್ಟಿಗಳ ಒಪ್ಪಿಗೆ
ಚಾಮರಾಜನಗರ, ಡಿಸೆಂಬರ್ 26: ವಿಷ ಪ್ರಸಾದ ಸೇವನೆಯಿಂದ ಸುದ್ದಿಗೆ ಗ್ರಾಸವಾದ ಮತ್ತು17 ಮಂದಿಯ ಪ್ರಾಣ ಬಲಿ ಪಡೆದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಆಡಳಿತವನ್ನು ಸರ್ಕಾರ ಮುಜರಾಯಿ ಇಲಾಖೆಯ ಸುಪರ್ದಿಗೆ ವಹಿಸಲು ಮುಂದಾದ ಬೆನ್ನಲ್ಲೇ ಸರ್ಕಾರದ ವಶಕ್ಕೆ ನೀಡಲು ಟ್ರಸ್ಟಿಗಳು ಒಪ್ಪಿಗೆ ಸೂಚಿಸಿ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸೂಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಆದಾಯವೂ ಹೆಚ್ಚಾಗಿತ್ತು.
ವಿಷಪ್ರಸಾದ ಪ್ರಕರಣದ ಸಂಪೂರ್ಣ ಮಾಹಿತಿ: ಇದು ಮೂವರ ದ್ವೇಷದ ಕತೆ
ಈ ಆದಾಯ ಹಲವರ ಕಣ್ಣನ್ನು ಕೆಂಪು ಮಾಡಿತ್ತಲ್ಲದೆ, ದೇವಾಲಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಹಣ ಲಪಟಾಯಿಸುವ ಸಂಚು ನಡೆಸಿದ್ದರು. ಈ ಸಂಬಂಧ ಆರಂಭವಾದ ಜಟಾಪಟಿ ಪ್ರಸಾದಕ್ಕೆ ವಿಷ ಬೆರೆಸುವಷ್ಟರ ಮಟ್ಟಿಗೆ ಬಂದು ನಿಂತಿತು. ಯಾವಾಗ ದುರಂತ ನಡೆಯಿತೋ ದೇವಾಲಯದ ಬಗೆಗಿನ ಮಾಹಿತಿಗಳು ಹೊರ ಬರತೊಡಗಿದ್ದವು.ಈ ದೇವಾಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂಬುದು ಹೊರಬಂದಿತು.
ಈಗ 'ಮಾರಮ್ಮನೇ' ಹೇಳಿದ್ದಾಳೆ; ಆರೋಪಿಗಳು ಇನ್ನೂ ಆರು ಮಂದಿ ಇದ್ದಾರಂತೆ!
ಇದೀಗ ಪ್ರಸಾದಕ್ಕೆ ವಿಷ ಬೆರೆಸಿ ಭಕ್ತರ ಸಾವಿಗೆ ಕಾರಣನಾದ ಕಿಚ್ಚುಗುತ್ತಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಪ್ರಮುಖ ಆರೋಪಿಯಾಗಿ ಮೈಸೂರು ಕಾರಾಗೃಹದಲ್ಲಿದ್ದಾರೆ. ಇನ್ನುಳಿದ ಎಂಟು ಮಂದಿ ಟ್ರಸ್ಟಿಗಳು ಒಮ್ಮತದಿಂದ ಸಭೆ ನಡೆಸಿ, ದೇವಾಲಯದ ಆಡಳಿತವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ತಮ್ಮದೇನು ತಕರಾರು ಆಕ್ಷೇಪ ಇಲ್ಲ ಎಂದು ಪತ್ರ ಬರೆದು ಹನೂರು ಶಾಸಕ ಆರ್. ನರೇಂದ್ರರವರ ಬಳಿ ನೀಡಿದ್ದಾರೆ ಎನ್ನಲಾಗಿದೆ.
ಖಚಿತಪಡಿಸಿದ ಶಾಸಕ ಆರ್. ನರೇಂದ್ರ
ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಟ್ರಸ್ಟಿಗಳು ದೇವಾಲಯ ಆಡಳಿತವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ತಮ್ಮ ಸಮ್ಮತಿಯನ್ನು ಸೂಚಿಸಿರುವ ಪತ್ರ ಟ್ರಸ್ಟಿಗಳು ತಮಗೆ ನೀಡಿದ್ದನ್ನು ಖಚಿತ ಪಡಿಸಿದ ಹನೂರು ಶಾಸಕ ಆರ್. ನರೇಂದ್ರ ಖಚಿತ ಪಡಿಸಿದ್ದಾರೆ.
ಬ್ಯಾಂಕ್ ಖಾತೆಯಲ್ಲಿ 70 ಲಕ್ಷ
ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಆಡಳಿತ ನಡೆಸುತ್ತಿದ್ದ ಟ್ರಸ್ಟ್ ನವರ ಬ್ಯಾಂಕ್ ಖಾತೆಯಲ್ಲಿ ಸುಮಾರು 60 ರಿಂದ 70 ಲಕ್ಷ ರೂಪಾಯಿಗಳಿದ್ದು, ಅದನ್ನು ಸಹ ಸರ್ಕಾರವು ವಶಕ್ಕೆ ಪಡೆಯಲಿದ್ದು, ಇದರ ಜೊತೆಗೆ ದೇವಾಲಯದ ಚಿನ್ನಾಭರಣಗಳು ಟ್ರಸ್ಟ್ ಕಾರ್ಯದರ್ಶಿ ಹಾಗೂ ವಕೀಲ ಶಶಿಬಿಂಬರವರ ಬಳಿಯಿದ್ದು, ಅದನ್ನು ಅವರು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾರೆ, ಅದನ್ನು ಸಹ ಸರ್ಕಾರ ವಶಕ್ಕೆ ಪಡೆದುಕೊಂಡು ದೇವಾಲಯದ ಆಡಳಿತ ಮತ್ತು ಪೂಜಾ ಕೈಕಾರ್ಯಗಳು ನಡೆಸಲು ಮುಜರಾಯಿ ಇಲಾಖೆಗೆ ವಹಿಸುವ ಸಾಧ್ಯತೆಯಿದೆ.
ಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆ
ಚರ್ಚೆ ನಡೆದ ಬಳಿಕ ನಿರ್ಧಾರ
ಈ ನಡುವೆ ದೇವಾಲಯವನ್ನು ಈಗಾಗಲೇ ಜಿಲ್ಲಾಡಳಿತ ವಶಪಡಿಸಿಕೊಂಡಿದ್ದು, ಅದನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಬೇಕೋ ಆಥವಾ ಮುಜರಾಯಿ ಇಲಾಖೆಗೆ ನೀಡಬೇಕೋ ಎನ್ನುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದ ಬಳಿಕ ನಿರ್ಧಾರ ಕೈಗೊಳ್ಳಬೇಕಾಗಿದೆ.
ಇದೀಗ ಸರ್ಕಾರದ ವಶದಲ್ಲಿದೆ
ಸದ್ಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಆಡಳಿತ ಇದೀಗ ಸರ್ಕಾರದ ವಶದಲ್ಲಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ದೇವಾಲಯದ ನಿರ್ವಹಣೆ ಯಾರಿಗೆ ವಹಿಸಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.