ಚಾಮರಾಜನಗರ: ಲಂಟಾನಾದಿಂದ ಅಲಂಕಾರಿಕ ವಸ್ತುಗಳ ತಯಾರಿಕೆ ತರಬೇತಿ
ಚಾಮರಾಜನಗರ, ಆಗಸ್ಟ್, 13: ಅರಣ್ಯ ಪ್ರದೇಶದಲ್ಲಿ ವಿಷಕನ್ಯೆಯಾಗಿ ಬಾಧಿಸುತ್ತಿರುವ ಕಳೆ ಗಿಡವಾದ ಲಂಟನಾ ಮುಂದಿನ ದಿನಗಳಲ್ಲಿ ನಿಮ್ಮ ಮನೆಯನ್ನು ಅಲಂಕರಿಸಲಿದೆ. ಕಾಡಿನ ಕಳೆ ಮನೆಯಲ್ಲಿ ನಿಮಗೆ ಅರಾಮದಾಯಕ ನಿದ್ರೆಯನ್ನು ತಂದುಕೊಡಬಲ್ಲದು.
ಹೌದು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೆಲ್ಲತ್ತ ಗ್ರಾಮದಲ್ಲಿ ಲಂಟನಾ ಗಿಡದಿಂದ ಬಗೆಬಗೆಯ ಆಕರ್ಷಣೀಯ ವಸ್ತಗಳನ್ನು ತಯಾರಿಸಲಾಗುತ್ತದೆ. ಇಲ್ಲಿನ ಸೋಲಿಗರಿಗೆ ಅರಣ್ಯ ಇಲಾಖೆ ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳ ತಯಾರಿಕೆ ತರಬೇತಿಯನ್ನು ಕೊಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮನೆಗಳನ್ನು ಕಾಡಿನ ಕಳೆ ಅಲಂಕರಿಸಲಿದೆ.
ಲಂಟಾನಾದಲ್ಲಿ ಅಲಂಕಾರಿಕ ವಸ್ತಗಳ ತಯಾರಿಕೆ:
ಲಂಟನಾ ಮೊದಲು ವಿದೇಶದಲ್ಲಿ ಹೆಚ್ಚಾಗಿ ಪ್ರಸಿದ್ದಿ ಆಗಿತ್ತು. ಬರಬರುತ್ತಾ ನಮ್ಮ ದೇಶದಲ್ಲೂ ಕೂಡ ಲಂಟನಾ ಅಲಂಕಾರಿಕ ಸಸ್ಯವಾಗಿ ಪ್ರಚಲಿತಗೊಂಡಿತು ಎಂದು ನಮ್ಮ ಹಿರಿಯರ ಮೂಲಗಳು ಹೇಳುತ್ತವೆ. ಇದೀಗ ಕಾಡುಗಳಲ್ಲಿ ಲಂಟಾನ ಹೆಚ್ಚೆಚ್ಚಾಗಿ ಬೆಳೆಯುತ್ತಿದ್ದು, ಕಂಟಕವಾಗಿ ಪರಿಣಮಿಸಿದೆ. ಆದ್ದರಿಂದ ಈ ಕಳೆ ಗಿಡಗಳನ್ನೇ ಉಪಯೋಗಿಸಿಕೊಂಡು ಅಲಂಕಾರಿಕ ವಸ್ತುಗಳನ್ನಾಗಿ ಪರಿವರ್ತಿಸಲು ಉತ್ತಮ ಯೋಜನೆಯೊಂದನ್ನು ಅರಣ್ಯ ಇಲಾಖೆ ಹಾಕಿಕೊಂಡಿದೆ. ಇದರಿಂದ ಸೋಲಿಗರಿಗೆ ಪ್ರೇರಣೆ ಕೊಡಲು ಅರಣ್ಯ ಇಲಾಖೆ ಮುಂದಾಗಿದೆ. ಲಂಟಾನ ಗಿಡದ ಮೂಲಕ ಅಲಂಕಾರಿಕಾ ವಸ್ತುಗಳನ್ನು ತಯಾರಿಸುವುದರಿಂದ ಕಾಡಿನಲ್ಲಿ ಕಳೆ ಕಡಿಮೆ ಆಗುತ್ತದೆ. ಮತ್ತೊಂದೆಡೆ ಸೋಲಿಗರಿಗೂ ಈ ಮೂಲಕ ಉದ್ಯೋಗ ಸಿಕ್ಕಂತಾಗುತ್ತದೆ ಎಂಬುದು ಅರಣ್ಯಾಧಿಕಾರಿಗಳ ಪ್ರಮುಖ ಉದ್ದೇಶ ಆಗಿದೆ.
ತರಬೇತಿ ಪಡೆಯುತ್ತಿರುವವರ ಸಂಖ್ಯೆ:
ಚಾಮರಾಜನಗರ ತಾಲೂಕಿನ ಬೆಲ್ಲತ್ತದಲ್ಲಿ ಅರಣ್ಯ ಇಲಾಖೆಯು ಸ್ವಯಂ ಉದ್ಯೋಗದ ಕಾರ್ಯಗಾರವನ್ನು ನಡೆಸುತ್ತಿದೆ. ಪಾಪಣ್ಣ ಎಂಬುವವರು ಮೊದಲಿನಿಂದಲೂ ಲಂಟನಾದಿಂದ ಆನೆಯ ಆಕೃತಿಗಳನ್ನು ತಯಾರಿಸಿ ಲಂಡನ್ಗೆ ಕಳುಹಿಸುತ್ತಿದ್ದಾರೆ. ಈ ಕೆಲಸದಲ್ಲಿ ನೈಪುಣ್ಯತೆ ಹೊಂದಿರುವ ಪಾಪಣ್ಣರಿಂದಲೇ ತರಬೇತಿ ಕಾರ್ಯವನ್ನು ನಡೆಸಲಾಗುತ್ತಿದೆ. 45ಕ್ಕೂ ಹೆಚ್ಚು ಮಂದಿ ಸೋಲಿಗರು ಈ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಯಾವ್ಯಾವ ವಸ್ತುಗಳ ತಯಾರಿಕೆ:
ಲಂಟಾನಾದಿಂದ ಗೃಹೋಪಯೋಗಿ ವಸ್ತುಗಳಾದ ಕುರ್ಚಿ, ಟೀಪಾಯಿ, ಕಸದ ಬುಟ್ಟಿ, ಪೆನ್ ಸ್ಟಾಂಡ್, ಪ್ಲವರ್ ಬಾಸ್ಕೆಟ್, ಮಂಚ, ಕುರ್ಚಿಗಳನ್ನು ತಯಾರಿಕಾ ತರಬೇತಿಯನ್ನು ನಡೆಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಹೀಗೆ ಕಾಡಿನ ಕಳೆ ಮನೆಗಳನ್ನು ಅಲಂಕರಿಸಲಿದೆ. ಜೊತೆಗೆ ಕಾಡಿನಲ್ಲಿ ಈ ವಿಷಕನ್ಯೆ ಆರ್ಭಟವೂ ಕಡಿಮೆಯಾಗಲಿದೆ. ಸೋಲಿಗರ ಬದುಕಿನಲ್ಲಿ ಬದಲಾವಣೆ ತರುವದರ ಮೂಲಕ, ಕಾಡಿನ ಲಂಟಾನದ ಕಳೆಯನ್ನು ತೆಗೆದಂತಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದರು.
Recommended Video