ಕಿಚ್ಚುಗುತ್ತಿ ಮಾರಮ್ಮ ದೇಗುಲದ ಅಭಿವೃದ್ಧಿಯೇ ಭಕ್ತರ ಜೀವಕ್ಕೆ ಕುತ್ತಾಯಿತಾ?
ಚಾಮರಾಜನಗರ, ಡಿಸೆಂಬರ್ 15 : ತಾಯಿ ಮಾರಮ್ಮ ಕಾಪಾಡುತ್ತಾಳೆ.. ಆಕೆ ನಮ್ಮ ಕಷ್ಟ ಪರಿಹರಿಸಿ ಸುಖ ನೀಡುತ್ತಾಳೆಂದು ನಂಬಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸೂಳ್ವಾಡಿ ಸಮೀಪದ ಕಿಚ್ಚುಗುತ್ತಿ ಮಾರಮ್ಮನ ದೇವಾಲಯ ಹೋದವರು ಅಲ್ಲಿ ನೀಡಿದ ಪ್ರಸಾದವನ್ನು ಕಣ್ಣಿಗೊತ್ತಿ ಭಕ್ತಿಯಿಂದ ಸ್ವೀಕರಿಸಿದ್ದಾರೆ.
ಆದರೆ ಆ ಪ್ರಸಾದವೇ ಅವರ ಪಾಲಿಗೆ ವಿಷವಾಗಿ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದು ಗೊತ್ತೇ ಆಗಲಿಲ್ಲ. ಅದು ಗೊತ್ತಾಗುವ ವೇಳೆಗೆ ಕೆಲವರು ಪ್ರಾಣ ಬಿಟ್ಟಿದ್ದರು, ಮತ್ತೆ ಕೆಲವರು ಜೀವನ್ಮರಣ ಸ್ಥಿತಿಯಲ್ಲಿ ಹೊರಳಾಡುತ್ತಿದ್ದರು. ತಮ್ಮವರನ್ನು ರಕ್ಷಿಸಿಕೊಳ್ಳುವುದಾ? ತನ್ನ ಜೀವ ಉಳಿಸಿಕೊಳ್ಳುವುದಾ ಎಂದು ಗೊತ್ತಾಗದೆ ಕೆಲವರು ಅತ್ತು ಗೋಳಾಡ ತೊಡಗಿದರು.
ಬಹುಶಃ ಇಂತಹದೊಂದು ದುರಂತ ಸ್ಥಿತಿ ಎಲ್ಲಿಯೂ ನಡೆಯಬಾರದು. ಆ ನೋವನ್ನು ಅನುಭವಿಸಿದವರಿಗಷ್ಟೆ ಗೊತ್ತಾಗೋದು ಅದರ ಹಿಂದಿನ ಭೀಕರತೆ. ನಿಜ ಹೇಳಬೇಕೆಂದರೆ ಪ್ರಸಾದಕ್ಕೆ ವಿಷ ಬೆರೆಸಿದವರು ಅದೆಂತಹ ಕಠೋರ ಹೃದಯದವರಾಗಿರಬಹುದು? ಒಂದು ಕ್ಷಣ ಯೋಚಿಸಿದರೆ ಅಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಕಲ್ಲು ಹೃದಯವೂ ಕರಗುತ್ತದೆ. ಹೀಗಿರುವಾಗ ವಿಷ ಸೇವಿಸಿ ಅಮಾಯಕರ ಜೀವದೊಂದಿಗೆ ಚೆಲ್ಲಾಡಿರುವ ಆ ದುರಳರ ಮನಸ್ಥತಿ ಹೇಗಿರಬಹದು ಆಲೋಚಿಸಿದರೆ ಎಂತಹ ಮೃದು ಹೃದಯದವರಲ್ಲಿಯೋ ಆಕ್ರೋಶ ಉಕ್ಕಿ ಬರುತ್ತದೆ.
ವಿಷಪ್ರಸಾದ ಸೇವಿಸಿದವರನ್ನು ಕಟ್ಟಿಹಾಕಿದ್ದಾರೆ ವೈದ್ಯರು, ಏಕೆ?
ಇವತ್ತು ತಮ್ಮವರನ್ನು ಕಳೆದುಕೊಂಡವರ ಮನೆಯಲ್ಲಿ ರೋದನ... ವಿಷ ಪ್ರಸಾದ ಸೇವಿಸಿ ಆಸ್ಪತ್ರೆಯಲ್ಲಿ ಮಲಗಿದವರ ನರಳಾಟ.. ಹೊರಗೆ ಸಂಬಂಧಿಕರ ಪರದಾಟ ನೋಡಿದರೆ ಮನುಷ್ಯ ಎಷ್ಟೊಂದು ಕ್ರೂರಿ ಎನಿಸದಿರದು.
ವಿಷದ ಅಂಶ ಕಡಿಮೆ ಮಾಡಲು ಅಟ್ರೋಪಿನ್
ಈಗಾಗಲೇ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿ 100ಕ್ಕೂ ಹೆಚ್ಚು ಮಂದಿ ಕೊಳ್ಳೇಗಾಲ, ಮೈಸೂರಿನ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾದವರ ಪೈಕಿ ಕೆಲವರು ಚೇತರಿಕೆ ಕಾಣುತ್ತಿದ್ದರೆ, ಇನ್ನು ಕೆಲವರ ಸ್ಥಿತಿ ಗಂಭೀರವಾಗಿದ್ದು ಸೂಕ್ತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡುವ ಕಾರ್ಯವನ್ನು ವೈದ್ಯರು ಮಾಡುತ್ತಿದ್ದಾರೆ. ಆಸ್ಪತ್ರೆ ಸೇರಿರುವ ಎಲ್ಲರಿಗೆ ವಿಷದ ಅಂಶ ಕಡಿಮೆ ಮಾಡಲೆಂದು ಅಟ್ರೋಪಿನ್ ಇಂಜೆಕ್ಷನ್ ನೀಡಲಾಗುತ್ತಿದೆ. ಇದು ತೀವ್ರವಾಗಿ ಕೆಲಸ ಮಾಡುವ ಕಾರಣ ಮತ್ತು ರೋಗಿಗಳು ಉಗ್ರವಾಗಿ ವರ್ತಿಸುವ ಕಾರಣ, ರೋಗಿಗಳ ಕೈಕಾಲು ಕಟ್ಟಿ ಈ ಚಿಕಿತ್ಸೆ ನೀಡಲಾಗುತ್ತಿದೆ.
ಗೋಪುರ ನಿರ್ಮಾಣಕ್ಕಾಗಿ ಪೂಜೆ
ಇಷ್ಟಕ್ಕೂ ಸೂಳ್ವಾಡಿ ಸಮೀಪದ ಕಿಚ್ಚುಗುತ್ತಿ ಮಾರಮ್ಮನ ದೇವಾಲಯಲ್ಲಿ ಭಕ್ತರಿಗೆ ಪ್ರಸಾದ ನೀಡುವುದು ಹೊಸದೇನಲ್ಲ. ಸಾಮಾನ್ಯವಾಗಿ ಮಂಗಳವಾರ ಮತ್ತು ಶುಕ್ರವಾರದಂದು ಇಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಈ ಸಂದರ್ಭ ಕೋಳಿ, ಕುರಿ ಬಲಿಕೊಡುವುದು ನಡೆಯುತ್ತದೆ. ಈ ವೇಳೆ ಕೆಲವರು ಪ್ರಸಾದ ತಂದು ಭಕ್ತರಿಗೆ ಹಂಚುತ್ತಾರೆ. ಆದರೆ ಶುಕ್ರವಾರ ಮಾತ್ರ ಆಗಿದ್ದೇ ಬೇರೆ ಅವತ್ತು ದೇವಾಲಯಕ್ಕೆ ನೂತನ ಗೋಪುರ ನಿರ್ಮಾಣ ಮಾಡುವ ನಿರ್ಧಾರವನ್ನು ಟ್ರಸ್ಟ್ ಕೈಗೊಂಡು ಭೂಮಿಪೂಜೆಯನ್ನಿಟ್ಟುಕೊಂಡಿತ್ತು. ಈ ಸಂಬಂಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದುವೇ ಇವತ್ತಿನ ಪರಿಸ್ಥಿತಿಗೆ ಕಾರಣವಾಯಿತೇ ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.
ಪ್ರಸಾದದಲ್ಲಿ ವಿಷ: ತಮಿಳುನಾಡಿನ ಕಾಳಪ್ಪನ ಮೇಲೆ ಅನುಮಾನ
ಬರುತ್ತಿದ್ದ ಆದಾಯದ ಮೇಲೆ ಕಣ್ಣು
ಏಕೆಂದರೆ ಪೊಲೀಸರ ವಶದಲ್ಲಿರುವ ದೇವಾಲಯದ ಟ್ರಸ್ಟ್ನ ಪ್ರಮುಖರಾದ ಚಿನ್ನಪ್ಪಿ ಅವರ ಪುತ್ರ ಲೋಕೇಶ್ ಮಾಡುತ್ತಿರುವ ಆರೋಪವನ್ನು ಗಮನಿಸಿದರೆ ದೇವಾಲಯದ ಹಕ್ಕಿಗಾರಡು ಗುಂಪುಗಳ ನಡುವೆ ಕಿತ್ತಾಟ ನಡೆಯುತ್ತಿತ್ತು ಎಂಬುದು ಬಯಲಾಗಿದೆ. ದೇವಾಲಯಕ್ಕೆ ಬರುತ್ತಿರುವ ಆದಾಯವನ್ನು ಗಮನಿಸಿದ ತಮಿಳುನಾಡಿನ ವ್ಯಕ್ತಿಗಳು ಇದನ್ನು ತಮ್ಮ ವಶಕ್ಕೆ ಪಡೆಯಲು ಹರಸಾಹಸ ಮಾಡುತ್ತಿದ್ದರು ಎನ್ನಲಾಗಿದೆ.
ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!
ತಮಿಳುನಾಡು ಕುಟುಂಬವೂ ನೋಡಿಕೊಳ್ಳುತ್ತಿತ್ತು
ಲೋಕೇಶ್ ಹೇಳುವ ಪ್ರಕಾರ, ಈ ಹಿಂದೆ ಈ ದೇವಾಲಯ ಉಸ್ತುವಾರಿಯನ್ನು ತಮಿಳುನಾಡಿನ ಕೆಲವರು ನೋಡಿಕೊಳ್ಳುತ್ತಿದ್ದರು. ಆಗ ದೇವಾಲಯದ ಗರ್ಭಗುಡಿ ಹೊರತು ಪಡಿಸಿ ಇನ್ಯಾವುದೇ ಅಭಿವೃದ್ಧಿಯಾಗಿರಲಿಲ್ಲ. ಜತೆಗೆ ಅವರು ಸಮರ್ಪಕವಾಗಿ ಪೂಜೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಗ್ರಾಮಸ್ಥರು ದೇವಾಲಯವನ್ನು ತಮ್ಮ ವಶಕ್ಕೆ ನೀಡುವಂತೆ ಕೇಳಿಕೊಂಡರಲ್ಲದೆ, ಅವರಿಂದ ದೇವಸ್ಥಾನವನ್ನು ಪಡೆದು ಸುತ್ತಲಿನ ಹಳ್ಳಿಯ ಪ್ರಮುಖರನ್ನು ಸೇರಿಸಿಕೊಂಡು ಟ್ರಸ್ಟ್ ರಚಿಸಿ ದೇವಾಲಯದ ಅಭಿವೃದ್ಧಿಗೆ ಮುಂದಾದರು.
ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!
ತಮಿಳುನಾಡಿನ ಕುಟುಂಬದ ಕಣ್ಣು ಕೆಂಪು
ಯಾವಾಗ ದೇವಾಲಯ ಅಭಿವೃದ್ಧಿಯಾಯಿತೋ ಹಿಂದೆ ದೇವಾಲಯದ ಆಡಳಿತ ನೋಡಿಕೊಳ್ಳುತ್ತಿದ್ದ ತಮಿಳುನಾಡಿನ ಕುಟುಂಬದ ಕಣ್ಣು ಕೆಂಪಾಯಿತು. ಮತ್ತೆ ದೇವಾಲಯವನ್ನು ತಮ್ಮ ಉಸ್ತುವಾರಿಗೆ ಕೊಡಿ ಎಂಬ ಬೇಡಿಕೆಯಿಟ್ಟರು. ಆದರೆ ಟ್ರಸ್ಟ್ನವರು ಮತ್ತು ಗ್ರಾಮಸ್ಥರು ಇದಕ್ಕೆ ಒಪ್ಪಲಿಲ್ಲ. ಪರಿಣಾಮ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಈ ಸಂಬಂಧ ವಿಚಾರಣೆ ನಡೆದು ನ್ಯಾಯಾಲಯ ಸೂಳ್ವಾಡಿ ಜನರ ಪರ ತೀರ್ಪು ನೀಡಿತ್ತು. ಇದರಿಂದ ಅವರಿಗೆ ದ್ವೇಷ ಇನ್ನಷ್ಟು ಜಾಸ್ತಿಯಾಯಿತು.
ಪ್ರಸಾದ ಸ್ವೀಕರಿಸದೆ ಬಚಾವಾದ ಸಾಲೂರು ಮಠದ ಶ್ರೀಗಳು
ಅಭಿವೃದ್ಧಿ ವಿರೋಧಿಸುತ್ತಿದ್ದ ಕಾಳಪ್ಪ
ದೇವಾಲಯ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದುದನ್ನು ವಿರೋಧಿ ಗುಂಪಿನ ಬ್ರಹ್ಮೇಶ್ವರಿ ದೇವಾಲಯಕ್ಕೆ ಸಂಬಂಧಪಟ್ಟ ವ್ಯಕ್ತಿ ಕಾಳಪ್ಪ ಸಹಿಸುತ್ತಿರಲಿಲ್ಲ. ಆಗಾಗ್ಗೆ ಕ್ಯಾತೆ ತೆಗೆಯುತ್ತಿದ್ದನು. ಈ ನಡುವೆ ಶುಕ್ರವಾರ ದೇವಾಲಯಕ್ಕೆ ಗೋಪುರ ನಿರ್ಮಿಸುವ ಸಲುವಾಗಿ ಭೂಮಿಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. (ಇದನ್ನು ನೆರವೇರಿಸಲು ಮಹದೇಶ್ವರಬೆಟ್ಟದ ಸಾಲೂರು ಮಠದ ಶ್ರೀ ಗುರುಸ್ವಾಮಿ ಬಂದಿದ್ದರು. ಅವರು ಭೂಮಿ ಪೂಜೆಯನ್ನು ನೆರವೇರಿಸಿ ತೆರಳಿದ್ದರು.) ಇದೆಲ್ಲವನ್ನು ಸಹಿಸದೆ ಪ್ರಸಾದಕ್ಕೆ ವಿಷ ಬೆರೆಸಿ ಟ್ರಸ್ಟ್ನವರನ್ನು ಸಾಯಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವುದು ಲೋಕೇಶ್ ಮಾಡುತ್ತಿರುವ ಆರೋಪ. ಆತ ಕಳೆದ ಕೆಲವು ಸಮಯಗಳ ಹಿಂದೆ ಊರಲ್ಲಿ ಬಂದು ಗಲಾಟೆ ಮಾಡಿದ್ದನು. ಹೀಗಾಗಿ ದೇವಾಲಯದ ಟ್ರಸ್ಟಿಗಳನ್ನು ಪ್ರಸಾದದ ಮೂಲಕ ಸಾಯಿಸಿದರೆ ದೇವಾಲಯವನ್ನು ತಮ್ಮ ಸುಪರ್ದಿಗೆ ಪಡೆಯುವ ಇರಾದೆ ಆತನದ್ದಾಗಿತ್ತಾ ಎಂಬುದು ಸಂಶಯಕ್ಕೆ ಕಾರಣವಾಗಿದೆ.
ಹನ್ನೊಂದು ಬಲಿಗೆ ಜಮೀನು ವಿವಾದವೇ ಕಾರಣವಾಯಿತೆ?
ದೇವಾಲಯದಲ್ಲಿ ಸಿಸಿಟಿವಿ ದುಸ್ಥಿತಿಯಲ್ಲಿ
ಇನ್ನು ದೇವಾಲಯದಲ್ಲಿ ಸಿಸಿಟಿವಿ ಇದ್ದರೂ ಇದು ದುಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ. ಹೀಗಾಗಿ ಪೊಲೀಸರಿಗೆ ತನಿಖೆ ನಡೆಸುವುದು ಕೂಡ ಕಠಿಣವಾಗುತ್ತಿದೆ. ಆದರೆ ಇಲ್ಲಿ ದುಷ್ಕರ್ಮಿಗಳು ಏನೇ ಜಾಣ್ಮೆ ತೋರಿಸಿದರೂ ಅದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದು, ಎಲ್ಲ ಆಯಾಮಗಳಿಂದಲೂ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಇನ್ನೊಂದೆಡೆ ಈಗಾಗಲೇ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ವಾರಸುದಾರರಿಗೆ ನೀಡುವ ಕಾರ್ಯವೂ ನಡೆಯುತ್ತಿದ್ದು ಮೃತರ ಸಂಬಂಧಿಕರು ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.