ಬಂಡೀಪುರದ ಚೆಲುವಿಗೆ ಮನಸೋತ ಪ್ರವಾಸಿಗರು
ಚಾಮರಾಜನಗರ, ಜನವರಿ 19: ಕಳೆದ ಎರಡು ವರ್ಷಗಳಿಂದ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬುವ ಮೂಲಕ ಬರ ದೂರವಾಗಿ ಎಲ್ಲೆಡೆ ಹಚ್ಚ ಹಸಿರು ವ್ಯಾಪಿಸಿದೆ. ಈ ಕಾರಣ ಅರಣ್ಯದಲ್ಲಿ ವನ್ಯಪ್ರಾಣಿಗಳು ನೆಮ್ಮದಿಯಾಗಿ ಎಲ್ಲೆಂದರಲ್ಲಿ ಓಡಾಡುತ್ತಾ ಖುಷಿಪಡುತ್ತಿವೆ.
ಅದನ್ನು ನೋಡುವ ಸಲುವಾಗಿ ಬರುವ ಪ್ರವಾಸಿಗರ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಅಷ್ಟೇ ಅಲ್ಲದೆ ಇಲ್ಲಿನ ವಾತಾವರಣದಿಂದ ಇಲ್ಲಿಗೆ ಭೇಟಿ ನೀಡುವ ವಿದೇಶಿಗರೂ ಹೆಚ್ಚಾಗಿರುವುದು ಸಂತಸ ತಂದಿದೆ.
ಎರಡು ವರ್ಷಗಳ ಹಿಂದೆ ಹೀಗಿರಲಿಲ್ಲ
ಎರಡು ವರ್ಷಗಳ ಹಿಂದೆ ಬಂಡೀಪುರ ಹೀಗಿರಲಿಲ್ಲ. ವಾಡಿಕೆಯ ಮಳೆಯಾಗದೆ ಬರ ಕಾಣಿಸಿಕೊಂಡಿತ್ತು. ಕೆರೆಕಟ್ಟೆಗಳು ಒಣಗಿ ಪ್ರಾಣಿಗಳು ನೀರು ಮತ್ತು ಮೇವು ಹುಡುಕಿಕೊಂಡು ದೂರ ಹೋಗಿದ್ದವು. ಜತೆಗೆ ಇಡೀ ಅರಣ್ಯ ಒಣಗಿ ಹಸಿರು ಕಾಣುವುದೇ ಕಷ್ಟವಾಗಿತ್ತು. ಹೀಗಾಗಿ ಸಫಾರಿಗೆ ಬಂದವರು ಯಾವುದೇ ವನ್ಯ ಪ್ರಾಣಿಗಳನ್ನು ನೋಡಲಾಗದೆ ಹಿಂತಿರುಗುವಂತಾಗಿತ್ತು. ಆದರೆ ಎರಡು ವರ್ಷಗಳಿಂದೀಚೆಗೆ ಪರಿಸ್ಥಿತಿ ಬದಲಾಗಿದೆ. ಉತ್ತಮವಾಗಿ ಮಳೆಯಾಗಿರುವುದರಿಂದ ಕೆರೆಕಟ್ಟೆಗಳು ತುಂಬಿವೆ. ಜತೆಗೆ ಹಸಿರು ಕಾಣಿಸುತ್ತಿದ್ದು, ವನ್ಯಪ್ರಾಣಿಗಳಿಗಿದ್ದ ಮೇವಿನ ಕೊರತೆ ನೀಗಿದೆ. ಹಾಗಾಗಿ ಅಲ್ಲಲ್ಲಿ ಜಿಂಕೆ, ಕಾಡಾನೆ, ನವಿಲು ಸೇರಿದಂತೆ ಹುಲಿ, ಚಿರತೆಗಳು ಸಫಾರಿಗೆ ತೆರಳುವ ಪ್ರವಾಸಿಗರಿಗೆ ದರ್ಶನ ನೀಡುತ್ತಿವೆ.
ಬಂಡೀಪುರದಲ್ಲಿ ಪ್ರವಾಸಿಗರ ಹಸಿವು ತಣಿಸಲು ಕಾಡಿನ ಮಧ್ಯೆ ಹಾಡಿ ಕ್ಯಾಂಟೀನ್
ವಿದೇಶಿಗರ ಆಕರ್ಷಿಸುವ ನಿಸರ್ಗ
ಬಂಡೀಪುರದ ಸುಂದರ ನಿಸರ್ಗದ ನಡುವೆ ವನ್ಯಪ್ರಾಣಿಗಳು ಕಾಣಸಿಗುತ್ತಿರುವುದರಿಂದ ನಿಸರ್ಗಪ್ರಿಯ, ಪ್ರಾಣಿ ಪ್ರಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವಂತಾಗಿದೆ. ವಿದೇಶಿ ಪ್ರವಾಸಿಗರೂ ಬಂಡೀಪುರದತ್ತ ಬರುತ್ತಿದ್ದು, ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಮನಸೋತು ಇತರರೂ ಇಲ್ಲಿಗೆ ಬಂದು ನೋಡುವಂತೆ ಪ್ರೇರೇಪಿಸುತ್ತಿದ್ದಾರೆ. ಇದರಿಂದಾಗಿಯೇ ವರ್ಷದಿಂದ ವರ್ಷಕ್ಕೆ ವಿದೇಶಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿರುವುದನ್ನು ಕಾಣಬಹುದಾಗಿದೆ.
ಇದು ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ನೂರೈವತ್ತಕ್ಕೂ ಹೆಚ್ಚಿನ ಹುಲಿಗಳು ಇಲ್ಲಿ ವಾಸಿಸುತ್ತಿವೆ. ಅಷ್ಟೇ ಅಲ್ಲ ಕೇರಳ ಹಾಗೂ ತಮಿಳುನಾಡು ಈ ಎರಡು ರಾಜ್ಯಗಳಿಗೂ ಹತ್ತಿರವಾಗಿದೆ. ಅತ್ತ ಕೇರಳ ಮತ್ತು ತಮಿಳುನಾಡಿಗೆ ಬಂದ ಪ್ರವಾಸಿಗರು ಬಂಡೀಪುರಕ್ಕೆ ಭೇಟಿ ನೀಡಿಯೇ ನೀಡುತ್ತಾರೆ. ಇದು ಬಂಡೀಪುರಕ್ಕೆ ಪ್ರವಾಸಿಗರು ಬರಲು ಕಾರಣವೂ ಆಗಿದೆ.
ವರ್ಷದಿಂದ ವರ್ಷಕ್ಕೆ ಆದಾಯದಲ್ಲಿ ಹೆಚ್ಚಳ
ಬಂಡೀಪುರಕ್ಕೆ ಕಳೆದ ಎರಡು ವರ್ಷಗಳಲ್ಲಿ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನಿಸಿದ್ದೇ ಆದರೆ, 2018ಕ್ಕೆ ಹೋಲಿಸಿದರೆ 2019ರಲ್ಲಿ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ. 2018ರಲ್ಲಿ 1,40,359 ಮಂದಿ ಭಾರತೀಯರು ಹಾಗೂ 1,560 ವಿದೇಶಿ ಪ್ರವಾಸಿಗರು ಬಂಡೀಪುರಕ್ಕೆ ಭೇಟಿ ನೀಡಿದ್ದಾರೆ. ಅದೇ ರೀತಿ 2019ರಲ್ಲಿ 1,34,043 ಮಂದಿ ಭಾರತೀಯರು ಮತ್ತು 2,300 ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಬಂಡೀಪುರದಲ್ಲಿ ಅಗ್ನಿ ಅನಾಹುತ ತಡೆಗೆ "ಬೆಂಕಿ ರೇಖೆ"
ಸಮಸ್ಯೆಯಾಗದ ಸಫಾರಿ
ಇಲ್ಲಿನ ಆದಾಯ 2018ರಲ್ಲಿ 7 ಕೋಟಿ 78 ಲಕ್ಷದ 63 ಸಾವಿರದ 213 ರೂಪಾಯಿಗಳು ಬಂದಿದ್ದರೆ, 2019ರಲ್ಲಿ 8 ಕೋಟಿ 2 ಲಕ್ಷದ 87 ಸಾವಿರದ 120 ರೂ ಆದಾಯ ಬಂದಿದೆ. ಜತೆಗೆ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಾಗಿರುವುದು ಗಮನಾರ್ಹವಾಗಿದೆ. ಆದರೆ ಬಂದ ಆದಾಯದಲ್ಲಿ ಬಂಡೀಪುರ ಸುತ್ತಮುತ್ತಲಿರುವ ಗ್ರಾಮೀಣ ಪರಿಸರ ಸಮಿತಿಗಳ ಕ್ಷೇಮಾಭಿವೃದ್ಧಿಗಾಗಿ ವಿನಿಯೋಗ ಮಾಡಿರುವುದನ್ನು ಕಾಣಬಹುದಾಗಿದೆ. ಜತೆಗೆ ಸಫಾರಿ ಮಾರ್ಗಗಳ ದುರಸ್ಥಿಗೆ, ಪ್ರವಾಸಿಗರ ಮೂಲ ಸೌಕರ್ಯಗಳಿಗೂ ಖರ್ಚು ಮಾಡಲಾಗಿದೆ. ಇದೀಗ ಸಫಾರಿಯನ್ನು ಸ್ಥಳಾಂತರ ಮಾಡಲಾಗಿದ್ದು, ಮತ್ತಷ್ಟು ಆಕರ್ಷಣೀಯಗೊಳಿಸುವ ಕೆಲಸವನ್ನು ಮಾಡಲಾಗಿದೆ. ಇದರಿಂದಾಗಿ ಇಲ್ಲಿಗೆ ದಿನದಿಂದ ದಿನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಲ್ಲೂ ವಿದೇಶಿ ಪ್ರವಾಸಿಗರು ಇತ್ತ ದೌಡಾಯಿಸುತ್ತಿರುವುದು ಬಂಡೀಪುರ ವಿಶ್ವಖ್ಯಾತಿಯಾಗಲು ಕಾರಣವಾಗಿದೆ.