ವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವು
ಚಾಮರಾಜನಗರ, ಸೆಪ್ಟೆಂಬರ್ 26: ಚಾಮರಾಜನಗರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಬಂಡೀಪುರ ಸಫಾರಿಗೆ ಕೊರೊನಾ ಲಾಕ್ ಡೌನ್ ತೆರವು ಬಳಿಕ ನಿಧಾನವಾಗಿ ಪ್ರವಾಸಿಗರು ಮುಖ ಮಾಡುತ್ತಿರುವುದು ಕಂಡು ಬಂದಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಬಂಡೀಪುರಕ್ಕೆ ಭೇಟಿ ನೀಡಿ ಸಫಾರಿ ಮಾಡಿದ ಪ್ರವಾಸಿಗರ ಸಂಖ್ಯೆ 2546 ಆಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರು. ಅದನ್ನು ಹೊರತು ಪಡಿಸಿದರೆ ಅಕ್ಟೋಬರ್ ದಸರಾ ರಜೆಯಲ್ಲಿ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ, ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರು. ಅಲ್ಲದೇ ಎಲ್ಲೆಂದರಲ್ಲಿ ಪ್ರವಾಸಿಗರು ಗಿಜಿಗುಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಈ ಬಾರಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಅರಣ್ಯ ಇಲಾಖೆಗೆ ಕೋಟ್ಯಂತರ ರೂ. ನಷ್ಟ ಸಂಭವಿಸಿತ್ತು. ಮುಂದೆ ಓದಿ...
ಬಂಡೀಪುರ ಸಫಾರಿಗೆ ಹೋಗುವವರು ಇನ್ನು ಮೊಬೈಲ್ ಬಳಸುವಂತಿಲ್ಲ
ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ
ಇದೀಗ ಬಂಡೀಪುರ ಪ್ರವೇಶಕ್ಕೆ ಅನುಮತಿ ನೀಡಿದ ನಂತರದಲ್ಲಿ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಆಗಮಿಸುವ ಪ್ರವಾಸಿಗರ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಮಾಡಲಾಗುತ್ತಿದೆ. ಇದುವರೆಗೂ ಪ್ರವಾಸಿಗರಿಲ್ಲದೆ ಇಡೀ ಬಂಡೀಪುರ ಸ್ತಬ್ಧಗೊಂಡಿತ್ತು. ಇದರಿಂದ ವನ್ಯಪ್ರಾಣಿಗಳು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದವು. ಇಡೀ ಪರಿಸರ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಈಗ ನಿಸರ್ಗ ಸ್ವರ್ಗವೇ ಸೃಷ್ಟಿಯಾಗಿದ್ದು, ಅದನ್ನು ಕಣ್ತುಂಬಿಕೊಳ್ಳುವುದೇ ಪ್ರವಾಸಿಗರಿಗೊಂದು ಸುಂದರ, ಅಷ್ಟೇ ಅಲ್ಲ ಮರೆಯದ ಅನುಭವವಾಗುತ್ತಿದೆ.
ರಿಲ್ಯಾಕ್ಸ್ ಮೂಡ್ ನಲ್ಲಿ ಪ್ರವಾಸಿಗರು
ಕೊರೊನಾ ಸೋಂಕಿನ ಭಯದಿಂದಾಗಿ ಹೆಚ್ಚಿನ ಜನರು ಅನಗತ್ಯವಾಗಿ ಮನೆಯಿಂದ ಹೊರಬರುತ್ತಿಲ್ಲ. ಅದರಲ್ಲೂ ಪ್ರವಾಸ ತೆರಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಪ್ರಕೃತಿ ಪ್ರೇಮಿಗಳು, ಒಂದಷ್ಟು ಸಮಯವನ್ನು ನಿಸರ್ಗದ ಸುಂದರ ಪರಿಸರದಲ್ಲಿ ಕಳೆದು ರಿಲ್ಯಾಕ್ಸ್ ಆಗುವ ಸಲುವಾಗಿ ಬಂಡೀಪುರದತ್ತ ಬರುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬಂಡೀಪುರದಲ್ಲಿ ಸಫಾರಿ ಬಂದ್ ಆಗಿದ್ದರಿಂದ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗಿದೆ. ಆದರೆ ಆಗಸ್ಟ್ ನಿಂದ ಬಂಡೀಪುರ ಸಫಾರಿ ಆರಂಭಗೊಂಡ ಬಳಿಕ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ಎರಡರಿಂದ ಮೂರು ಸಾವಿರ ರೂಪಾಯಿಯಷ್ಟೆ ಸಂಗ್ರಹವಾಗುತ್ತಿತ್ತಾದರೂ ಇದೀಗ ಆದಾಯ ಲಕ್ಷಕ್ಕೆ ತಲುಪಿದೆ ಎನ್ನಲಾಗುತ್ತಿದೆ.
ಪ್ರವಾಸಿಗರ ಭೇಟಿಯಿಂದ 20 ಲಕ್ಷ ಆದಾಯ
ಇನ್ನು ಸಫಾರಿ ಆರಂಭವಾದ ಬಳಿಕ ಆಗಸ್ಟ್ ತಿಂಗಳಲ್ಲಿ ಬಂಡೀಪುರಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಮತ್ತು ಆದಾಯವನ್ನು ಗಮನಿಸಿದ್ದೇ ಆದರೆ, ಪ್ರವಾಸಿಗರ ಸಂಖ್ಯೆ ಮತ್ತು ಆದಾಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಾ ಸಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಆಗಸ್ಟ್ ತಿಂಗಳಿನಲ್ಲಿ ಕೇವಲ 2546 ಮಂದಿ ಸಫಾರಿ ವೀಕ್ಷಣೆ ಮಾಡಿದ್ದು, ಇದರಿಂದ 17,54,421 ರೂ. ಆದಾಯ ಬಂದಿದೆ. ಇನ್ನು ಬೇರೆ ಮೂಲಗಳಿಂದ ಬಂದಿರುವ ಆದಾಯವನ್ನು ಗಮನಿಸಿದ್ದೇ ಆದರೆ, ವಸತಿ ಗೃಹದಿಂದ ರೂ. 2,30,603, ಪಾಕಿಂಗ್ ನಿಂದ ರೂ. 36,904 ಬಂದಿದ್ದು ಒಟ್ಟು ರೂ. 20,21,928 ಆದಾಯ ಬಂದಿದೆ. ಈ ಆದಾಯ ಸೆಪ್ಟೆಂಬರ್ ನಂತರ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಹೊಂದಲಾಗಿದೆ.
Recommended Video
ಕಣ್ಮನ ಸೆಳೆಯುತ್ತಿರುವ ಸುಂದರ ನಿಸರ್ಗ
ಸುಮಾರು 1024 ಸಾವಿರ ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಬಂಡೀಪುರದಲ್ಲಿ ಬೇಸಿಗೆಯಲ್ಲಿ ಒಂದಷ್ಟು ಮಳೆ ಸುರಿದಿದ್ದರಿಂದ ಕಾಡ್ಗಿಚ್ಚು ಕಾಣಿಸಿಕೊಳ್ಳಲಿಲ್ಲ ಜತೆಗೆ ವನ್ಯಪ್ರಾಣಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಲಿಲ್ಲ. ಆ ನಂತರ ಮುಂಗಾರು ಮಳೆಯೂ ಉತ್ತಮವಾಗಿ ಸುರಿದಿದ್ದರಿಂದ ಈ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳು ತುಂಬಿದ್ದು, ಅರಣ್ಯದ ನಡುವೆ ಹರಿದು ಹೋಗುವ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಕೆರೆಗಳಲ್ಲಿ ನೀರು ಬತ್ತದೆ ಇರುವುದರಿಂದ ವನ್ಯ ಪ್ರಾಣಿಗಳು ನೆಮ್ಮದಿಯಾಗಿವೆ. ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಕಾಣುತ್ತಿರುವುದರಿಂದ ವನ್ಯ ಪ್ರಾಣಿಗಳು ಖುಷಿ, ಖುಷಿಯಾಗಿ ಎಲ್ಲೆಂದರಲ್ಲಿ ಅಡ್ಡಾಡುತ್ತಿರುವುದು ನೋಡುಗರ ಮನಸೆಳೆಯುತ್ತಿದೆ.