ಬಂಡೀಪುರ ಘಟನೆ ಪಾಠ ಹೇಳಿಕೊಟ್ಟಿದೆ: ಸತೀಶ್ ಜಾರಕಿಹೊಳಿ ಸಂದರ್ಶನ
ಚಾಮರಾಜನಗರ, ಫೆಬ್ರವರಿ 25: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚು 5 ದಿನಗಳಾದರೂ ತಣ್ಣಗಾಗಿಲ್ಲ. ತನ್ನ ಜ್ವಾಲೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಬೆಂಕಿ ಕೇರಳದ ಗಡಿಭಾಗಕ್ಕೂ ತಲುಪುತ್ತಿದೆ. ಕೇರಳ - ಕರ್ನಾಟಕ ಗಡಿಭಾಗ ಚಂದನಹಳ್ಳ ವ್ಯಾಪ್ತಿಯಲ್ಲಿ ಬೆಂಕಿ ವ್ಯಾಪಿಸಿಕೊಂಡಿದೆ.
ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ
ರಾತ್ರಿ ಇಬ್ಬನಿ ಬಿದ್ದಿದ್ದ ಹಿನ್ನೆಲೆ ಹತೋಟಿಗೆ ಬಂದಿದ್ದ ಬೆಂಕಿ ಮಧ್ಯಾಹ್ನದ ವೇಳೆ ಈಗಾಗಲೇ ಮತ್ತೆ ಹೆಚ್ಚುತ್ತಿದೆ. ಇತ್ತ ಬೆಂಕಿ ನಂದಿಸಲು 13 ವಲಯಗಳಿಂದ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಳವಳ್ಳಿ, ಕೆ ಆರ್ ಪೇಟೆ, ಕೆ ಆರ್ ನಗರ, ಹುಣಸೂರು ಭಾಗದಿಂದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ.
ಆರದ ಕಾಡ್ಗಿಚ್ಚಿನ ಜ್ವಾಲೆ, ಬಂಡೀಪುರದಲ್ಲಿ ಠಿಕಾಣಿ ಹೂಡಿದ ಸತೀಶ್ ಜಾರಕಿಹೊಳಿ
ರಾಜ್ಯ ಸರ್ಕಾರ ಬೆಂಕಿ ನಂದಿಸಲು ಏರ್ ಫೋರ್ಸ್ ನೆರವು ಪಡೆದಿದ್ದು, ಸೇನಾ ಹೆಲಿಕಾಪ್ಟರ್ ಮೊದಲು ಹಾನಿಗೊಳಗಾದ ಅರಣ್ಯ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿದೆ. ಸಿಎಂ ಕುಮಾರಸ್ವಾಮಿಯವರ ಕೋರಿಕೆಯ ಮೇರೆಗೆ ಇದೀಗ ವಾಯುಪಡೆಯ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ.
ಹೆಲಿಕಾಪ್ಟರ್ ಸಹಾಯದಿಂದ ಪಕ್ಕದಲ್ಲಿರುವ ನುಗು ಜಲಾಶಯದಿಂದ ನೀರು ತಂದು ಹೊತ್ತಿ ಉರಿಯುತ್ತಿರುವ ಬಂಡೀಪುರವನ್ನು ನಿಯಂತ್ರಣಕ್ಕೆ ತರಲು ಪ್ಲಾನ್ ಮಾಡಲಾಗಿದೆ.
ಬರಡಾದ ಬಂಡೀಪುರ ಅರಣ್ಯ;ಎಲ್ಲೆಲ್ಲೂ ಬೆಂಕಿಯಲ್ಲಿ ಬೆಂದ ಪ್ರಾಣಿಗಳ ದರ್ಶನ
ಬೆಂಗಳೂರು, ಮೈಸೂರು, ರಾಮನಗರ ಭಾಗದಿಂದ 600ಕ್ಕೂ ಹೆಚ್ಚು ಜನ ಸ್ವಯಂ ಸೇವಕರು ಆಗಮಿಸಿದ್ದು, ಅರಣ್ಯ ಸಚಿವ ಸತೀಶ್ ಜಾರಕಿಹೊಳಿಯವರು ಸಹ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಅಂದಹಾಗೆ ಅವರು ಒನ್ ಇಂಡಿಯಾದ ಜೊತೆ ಮಾತನಾಡಿರುವ ಸಾರಂಶ ಇಲ್ಲಿದೆ.
ಒನ್ ಇಂಡಿಯಾ: ಇದುವರೆಗೂ ಎಷ್ಟು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ?
ಸತೀಶ್ ಜಾರಕಿಹೊಳಿ: ಅಂದಾಜು 2500 ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಪೂರ್ತಿ ನಾಶವಾಗಿಲ್ಲ. ಕೆಳಗಡೆಯಿರುವ ಹುಲ್ಲುಗಳು ಜಾಸ್ತಿಯಾಗಿದೆ. ಮೇಲಿನ ಗಿಡಗಳಿಗೆ ಅಷ್ಟಾಗಿ ತೊಂದರೆಯಾಗಿಲ್ಲ. ಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತ ಹೆಚ್ಚು ನಾಶವಾಗಿದೆ. ಡ್ರೋಣ್ ಕ್ಯಾಮರಾದಲ್ಲೂ ಸಹ ನಾಶದ ಕುರಿತು ಅಧ್ಯಯನ ಮಾಡುತ್ತೇವೆ.
ಒನ್ ಇಂಡಿಯಾ: ಬಂಡೀಪುರದಲ್ಲಿ ಈಗಿನ ಪರಿಸ್ಥಿತಿ ಹೇಗಿದೆ?
ಸತೀಶ್ ಜಾರಕಿಹೊಳಿ: ಇಂದು ಬೆಂಕಿಯ ಜ್ವಾಲೆ ನಿಯಂತ್ರಣಕ್ಕೆ ಸಿಕ್ಕಿದೆ. ಕಳೆದ ನಾಲ್ಕೈದು ದಿನಗಳಿಂದ ಬಂಡೀಪುರ ಭಾಗದಲ್ಲಿ ಬೆಂಕಿ ಬಿದ್ದಿರುವುದು ಗೊತ್ತಿರುವ ವಿಚಾರ. ಇದುವರೆಗೂ ಹತೋಟಿಗೆ ತರುವ ಪ್ರಯತ್ನ ಅರಣ್ಯ ಇಲಾಖೆ ಮಾಡುತ್ತಿದೆ.
ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು, ಒಂದು ವಾರ ಸಫಾರಿ ಬಂದ್
ಒನ್ ಇಂಡಿಯಾ:ಈ ಘಟನೆ ಹೇಗಾಯ್ತು ಎಂಬ ಮಾಹಿತಿ ಇದೆಯಾ?
ಸತೀಶ್ ಜಾರಕಿಹೊಳಿ: ನಮ್ಮ ಕಡೆಯಿಂದ ಕೂಡ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಇದೊಂದು ನ್ಯಾಚುರಲ್ ಫಯರ್ ಅಲ್ಲ. ವ್ಯಕ್ತಿಯೊಬ್ಬನಿಂದ ಇಂತಹ ದುರ್ಘಟನೆ ನಡೆದಿದೆ. ಸದ್ಯ ಆ ವ್ಯಕ್ತಿಯ ಮೇಲೆ ದೂರು ಕೂಡ ದಾಖಲಾಗಿದೆ. ಅವನು ಮಾಡಿದ ಕುಕೃತ್ಯದಿಂದ ಬೆಂಕಿ ನಂದಿಸಲು ಕಷ್ಟವಾಯಿತು. ಆದರೂ ಕೂಡ ನಮ್ಮ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಒನ್ ಇಂಡಿಯಾ: ಅರಣ್ಯ ಪ್ರದೇಶದ ಅಂಚಿನಲ್ಲಿರುವವರೇ ಈ ಕೃತ್ಯವೆಸಗಿದ್ದಾರಾ?
ಸತೀಶ್ ಜಾರಕಿಹೊಳಿ: ಆ ರೀತಿ ಕೂಡ ಇರಬಹುದು. ಈ ವಿಚಾರದ ಕುರಿತು ವರದಿ ಸಹ ತರಿಸಲಾಗುವುದು. ಇದೇ ಕಾರಣವೆಂದು ಹೇಳಲಾಗಲ್ಲ. ಇದು ಕಾರಣವೆಂದು ಹೇಳಬಹುದಷ್ಟೇ. ಆದರೆ ಈ ಘಟನೆ ನಮಗೊಂದು ಪಾಠ ಹೇಳಿಕೊಟ್ಟಂತಿದೆ. ಇದರಿಂದ ಕೇವಲ ಬಂಡೀಪುರಕ್ಕೆ ಮಾತ್ರವಲ್ಲ, ಇಡೀ ಅರಣ್ಯ ಇಲಾಖೆ ಕೂಡ ಎಚ್ಚೆತ್ತುಕೊಳ್ಳಬೇಕಿದೆ.
ಬಂಡೀಪುರ ಕಾಳ್ಗಿಚ್ಚು, ಬೆಂಕಿ ನಂದಿಸಲು ಹರಸಾಹಸ
ಒನ್ ಇಂಡಿಯಾ:ಪಾರಂಪರಿಕ ಪದ್ಧತಿಯಲ್ಲೇ ಬೆಂಕಿ ನಂದಿಸಲಾಗುತ್ತಿದೆಯಾ?
ಸತೀಶ್ ಜಾರಕಿಹೊಳಿ:ನಮಗೆ ಹಳೆಯ ಪದ್ಧತಿಯ ಅವಶ್ಯಕತೆ ಇದೆ. ಕಾರಣ ಜನರು ಅದಕ್ಕೆ ಅಡಿಕ್ಟ್ ಆಗಿದ್ದಾರೆ. ಹಾಗೆಯೇ ಆಧುನಿಕ ಸಲಕರಣೆಗಳನ್ನು ಮುಂದಿನ ವರ್ಷದೊಳಗಾಗಿ ಅಳವಡಿಸಿಕೊಳ್ಳುವ ಚಿಂತನೆಯನ್ನು ನಡೆಸುತ್ತೇವೆ. ರಾಜ್ಯದ ಎಲ್ಲೂ ಅರಣ್ಯಕ್ಕೆ ಬೆಂಕಿ ಬೀಳದಂತೆ ಎಚ್ಚರವಹಿಸುತ್ತೇವೆ.
ಒನ್ ಇಂಡಿಯಾ:ಅರಣ್ಯ ಇಲಾಖೆಯಲ್ಲಿ ಹಣಕಾಸಿನ ಕೊರತೆ ಇದೆಯಾ?
ಸತೀಶ್ ಜಾರಕಿಹೊಳಿ: ಖಂಡಿತವಾಗಿ ಸರ್ಕಾರ ನಮಗೆ ಹೆಚ್ಚುವರಿ ಹಣ ಕೊಡಲೇಬೇಕು. ಕಾರಣ ನಮ್ಮ ವ್ಯಾಪ್ತಿ 40 ಲಕ್ಷಕ್ಕೂ ಹೆಚ್ಚಿಗೆ ಎಕರೆ ಪ್ರದೇಶವಿದೆ. ನಿರ್ವಹಣೆಗೆ ಅಷ್ಟು ಹಣ ಬೇಕೇ ಬೇಕು. ಸರ್ಕಾರ ಸಹ ಹೆಚ್ಚುವರಿ ನೀಡುವ ಭರವಸೆ ನಮಗಿದೆ. ಇಲಾಖೆ ಮೇಲ್ದರ್ಜೆಗೆ ಹಾಗೂ ಸಮಗ್ರ ಇಲಾಖೆಯ ಅಭಿವೃದ್ಧಿಗೆ ಹಣ ವಿನಿಯೋಗವಾಗಲಿದೆ.