ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಣ್ಣು ಹುಲಿ ಶಂಕಾಸ್ಪದ ಸಾವು
ಗುಂಡ್ಲುಪೇಟೆ (ಚಾಮರಾಜನಗರ), ಜುಲೈ 28: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಳು ವರ್ಷದ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ ಘಟನೆ ಮಗುವಿನಹಳ್ಳಿ ಬಳಿಯ ಜಂಗಲ್ ಲಾಡ್ಜ್ ಸಮೀಪ ನಡೆದಿದ್ದು, ಹುಲಿಯ ಸಾವಿಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಹೆಣ್ಣು ಹುಲಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ವಾಹನ ಡಿಕ್ಕಿಯಿಂದ ಸಾವನ್ನಪ್ಪಿತಾ ಅಥವಾ ಹುಲಿಗಳ ಕಾದಾಟದಿಂದ ಸಾವನ್ನಪ್ಪಿತಾ ಎಂಬ ಪ್ರಶ್ನೆ ಕಾಡುತ್ತಿದೆ.
ಚಂದ್ರಾಪುರ ಜಿಲ್ಲೆಯಲ್ಲಿ ಹೆಣ್ಣು ಹುಲಿ, ಎರಡು ಹುಲಿ ಮರಿಗಳ ಕಳೇಬರ ಪತ್ತೆ
ರಾಷ್ಟ್ರೀಯ ಹೆದ್ದಾರಿ ಆರವತ್ತೇಳರಲ್ಲಿ ಇರುವ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಬಳಿ ಹೆಣ್ಣು ಹುಲಿಯ ಕಳೇಬರ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂಡೀಪುರ ಎಸಿಎಫ್ ರವಿಕುಮಾರ್, ಗೋಪಾಲಸ್ವಾಮಿ ಬೆಟ್ಟ ಆರ್ ಎಫ್ ಒ ನವೀನ್ ಕುಮಾರ್, ಡಾ. ನಾಗರಾಜು, ವನ್ಯಜೀವಿ ಪರಿಪಾಲಕ ಚೋಳರಾಜ್, ಹಿಮಗಿರಿ ರಘುರಾಮ್, ನಾಗರಾಜ್ ಭಟ್ ಸೇರಿ ಹಲವರು ಭೇಟಿ ನೀಡಿ, ಮಹಜರು ನಡೆಸಿದ ಬಳಿಕ ಹುಲಿಯ ಕಳೇಬರಕ್ಕೆ ಅಂತ್ಯಕ್ರಿಯೆ ಮಾಡಲಾಗಿದೆ.
ಒಂದಲ್ಲ ಒಂದು ಕಾರಣಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯ ಜೀವಿಗಳು ಸಾವನ್ನಪ್ಪುತ್ತಿದ್ದು, ಪ್ರಾಣಿ ಪ್ರೇಮಿಗಳಲ್ಲಿ ಆತಂಕವನ್ನು ಸೃಷ್ಠಿ ಮಾಡಿದೆ.
ಕಾಡಂಚಿನ ಗ್ರಾಮದಲ್ಲಿ ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷದಿಂದಾಗಿ ಪ್ರಾಣಿಗಳು ಸಾವನ್ನಪ್ಪುತ್ತಿವೆಯಾ ಅಥವಾ ಪ್ರವಾಸಿಗರ ವಾಹನಕ್ಕೆ ಸಿಲುಕಿ ಸಾವನ್ನಪ್ಪುತ್ತಿವೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಅದರಲ್ಲೂ ಹುಲಿ ಮತ್ತು ಚಿರತೆಗಳ ಸಾವು ಗಣನೀಯವಾಗಿ ಹೆಚ್ಚುತ್ತಿದ್ದು, ಅರಣ್ಯಾಧಿಕಾರಿಗಳು ಇತ್ತ ಗಮನಹರಿಸಿ, ಕ್ರಮ ಕೈಗೊಳ್ಳಬೇಕಾಗಿದೆ.