ಗುಂಡ್ಲುಪೇಟೆ ಕಾಡಂಚಿನ ರೈತರ ನಿದ್ದೆಗೆಡಿಸಿರುವ ಹುಲಿ; ಐದು ಹಸು ಬಲಿ
ಚಾಮರಾಜನಗರ, ಏಪ್ರಿಲ್ 17: ಕೊರೊನಾ ವೈರಸ್ ತಡೆಯುವ ಸಲುವಾಗಿ ಲಾಕ್ ಡೌನ್ ಮಾಡಿರುವುದರಿಂದ ರೈತರು ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಹುಲಿಯೊಂದು ರೈತರ ಜಾನುವಾರಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಿರುವುದು ಮತ್ತಷ್ಟು ಆತಂಕವನ್ನು ಮೂಡಿಸಿದೆ.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯದಲ್ಲಿ ಹುಲಿ ಉಪಟಳ ಜಾಸ್ತಿಯಾಗಿದ್ದು, ಹೊಂಚು ಹಾಕಿ ಜಾನುವಾರುಗಳ ಮೇಲೆ ದಾಳಿ ಮಾಡಿ ಬಲಿ ತೆಗೆದುಕೊಳ್ಳುತ್ತಿದೆ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಕಳೆದ ಆರು ದಿನಗಳಿಂದ ಗ್ರಾಮದ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿರುವ ಹುಲಿ ಇದುವರೆಗೆ ಸುಮಾರು ಐದು ಹಸುವನ್ನು ಕೊಂದು ಹಾಕಿದೆ.
ವೈನಾಡ್ ಅಭಯಾರಣ್ಯದಲ್ಲಿ ಗಂಡು ಹುಲಿ ಸಾವು
ಕುಂದಕೆರೆ ಗ್ರಾಮವು ಕಾಡಂಚಿನಲ್ಲಿರುವುದರಿಂದ ಅರಣ್ಯದಿಂದ ಆಹಾರ ಹುಡುಕಿಕೊಂಡು ಬರುವ ಹುಲಿ ರೈತರು ಸಾಕಿರುವ ಹಸುಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿ ಕೊಲ್ಲುತ್ತಿವೆ. ಮೇಲಿಂದ ಮೇಲೆ ದಾಳಿ ಮಾಡುತ್ತಲೇ ಇವೆ. ಹುಲಿ ಯಾವಾಗ ಎಲ್ಲಿ ಪ್ರತ್ಯಕ್ಷವಾಗಿ ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯ ಕಾಡಂಚಿನ ಗ್ರಾಮಗಳ ರೈತರನ್ನು ಕಾಡುತ್ತಿದೆ. ಹೀಗಾಗಿ ಜಾನುವಾರುಗಳನ್ನು ಮೇಯಿಸಲು ಮತ್ತು ಜಮೀನಿಗೆ ಹೋಗಿ ಕೆಲಸ ಮಾಡಲು ಭಯಪಡುತ್ತಿದ್ದಾರೆ.
ಪ್ರತಿನಿತ್ಯ ಹುಲಿಗಳು ಜಾನುವಾರುಗಳನ್ನು ಬಲಿಪಡೆಯುತ್ತಿದ್ದರೂ ಜನಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ಬಳಿಗೆ ಬರುವ ಅವರು, ಈಗ ಈ ಕಡೆ ತಲೆ ಹಾಕುತ್ತಿಲ್ಲ. ಹುಲಿಯನ್ನು ಸೆರೆ ಹಿಡಿದು ಹಸುಗಳ ಜೀವ ಉಳಿಸಿ ಎಂದು ರೈತರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅರಣ್ಯಾಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಂಡು ಜಾನುವಾರುಗಳ ಮೇಲೆ ದಾಳಿ ಮಾಡುವ ಹುಲಿಯನ್ನು ಸೆರೆ ಹಿಡಿದು ರೈತರ ಭೀತಿಯನ್ನು ಹೋಗಲಾಡಿಸಬೇಕಾಗಿದೆ.