ಮಧುಮಲೈನಲ್ಲಿ ಹುಲಿ ಸಾವು: ಎರಡು ಮರಿಗಳ ರಕ್ಷಣೆ
ಚಾಮರಾಜನಗರ, ನವೆಂಬರ್ 22: ಜಿಲ್ಲೆಯ ಬಂಡೀಪುರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲಿ ಹುಲಿ ಸಾವನ್ನಪ್ಪಿದ್ದು, ಎರಡು ಹುಲಿ ಮರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಮಸಿಣಗುಡಿ ಭಾಗದ ಸಿಂಗರಾ ಪ್ರದೇಶದಲ್ಲಿ ಹುಲಿಯೊಂದು ಸಾವನ್ನಪ್ಪಿದ್ದರೆ, ಅದೇ ಪ್ರದೇಶದಲ್ಲಿ ಎರಡು ಗಂಡು ಹುಲಿ ಮರಿಗಳು ಪತ್ತೆಯಾಗಿವೆ. ಈ ಮರಿಗಳು ಸಾವನ್ನಪ್ಪಿದ ಹುಲಿಯದ್ದೇನಾ ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ.
ಗ್ರಾಮಗಳಿಗೆ ನುಗ್ಗುತ್ತಿವೆ ಬಂಡೀಪುರದ ಕಾಡಾನೆಗಳು; ಇದಕ್ಕೆ ಕಾರಣವಾದರೂ ಏನು?
ಹುಲಿ ಸಾವಿನ ತನಿಖೆ ನಡೆಸುವಾಗ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿಗೆ ಮರಿಗಳು ಸಿಕ್ಕಿದ್ದು ಅವುಗಳನ್ನು ರಕ್ಷಿಸಲಾಗಿದೆ. ಎರಡು ತಿಂಗಳ ಹಿಂದೆ ಐದು ಕೆನ್ನಾಯಿಗಳು ಇದೇ ಸ್ಥಳದಲ್ಲಿ ಪಾಶಾಣ ತಿಂದು ಸಾವನ್ನಪ್ಪಿದ್ದವು. ಅದೇ ರೀತಿ ಹುಲಿಯೂ ಸಾವನ್ನಪ್ಪಿದೆಯಾ ಎಂಬ ಸಂಶಯ ವ್ಯಕ್ತವಾಗಿದೆ.
ಜುಲೈನಲ್ಲಿ ಮಸಿಣಗುಡಿಯಲ್ಲಿ ಹುಲಿಯೊಂದು ಅಲ್ಲಿನ ಬುಡಕಟ್ಟು ಮಹಿಳೆಯನ್ನು ಕೊಂದಾಗಿನಿಂದಲೂ ಈ ರೀತಿಯ ಘಟನೆಗಳು ನಡೆಯುತ್ತಿವೆ. ಈ ಕುರಿತು ರಾಷ್ಟ್ರೀಯ ಸಂರಕ್ಷಣಾ ಪ್ರಾಧಿಕಾರ ಎನ್ಟಿಸಿಎ ಕೂಡ ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿತ್ತು.
ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದರ ಸಾವಿಗೆ ನಿಖರವಾದ ಕಾರಣ ತಿಳಿಯಲು ವಿಧಿ ವಿಜ್ಞಾನ ವರದಿ ಬರಬೇಕಾಗಿದೆ. ಮರಿಗಳ ವಿಚಾರದಲ್ಲಿ ನಾವು ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಎನ್ಟಿಸಿಎ ನಿರ್ದೇಶನಕ್ಕಾಗಿ ಕಾಯುತ್ತಿರುವುದಾಗಿ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಉಪನಿರ್ದೇಶಕ ಶ್ರೀಕಾಂತ ತಿಳಿಸಿದ್ದಾರೆ.