ದಿನೇ ದಿನೇ ಕುತೂಹಲ ಕೆರಳಿಸಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ..!
ಚಾಮರಾಜನಗರ, ಫೆಬ್ರವರಿ 18: ಚಾಮರಾಜನಗರ ಲೋಕಸಭಾ ಕ್ಷೇತ್ರದತ್ತ ಬಿಜೆಪಿಯ ಹಲವು ನಾಯಕರು ಕಣ್ಣಿಟ್ಟಿದ್ದಾರೆ. ಈಗಾಗಲೇ ತಾವು ಆಕಾಂಕ್ಷಿಗಳು ಎಂಬ ಸಂದೇಶವನ್ನು ಕೂಡ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ರವಾನಿಸಿದ್ದಾರೆ.
ಹಾಗೆ ನೋಡಿದರೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. ಇಲ್ಲಿ ಕಾಂಗ್ರೆಸ್ನ ಆರ್.ಧ್ರುವನಾರಾಯಣ್ ಸಂಸದರಾಗಿ ಗೆಲುವು ಸಾಧಿಸುತ್ತಲೇ ಬರುತ್ತಿದ್ದು, ಮುಂದಿನ ಅವಧಿಗೂ ಅವರೇ ಅಭ್ಯರ್ಥಿಯಾಗಲಿದ್ದಾರೆ. ಹೀಗಾಗಿ ಕಾಂಗ್ರೆಸ್ನಿಂದ ಇತರೆ ನಾಯಕರು ಸ್ಪರ್ಧೆಗೆ ಆಕಾಂಕ್ಷೆ ಪಡುವಂತಿಲ್ಲ.
ಇನ್ನು ಜೆಡಿಎಸ್ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣದಿಂದಾಗಿ ಆ ಪಕ್ಷದ ನಾಯಕರು ಕೂಡ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಇಲ್ಲಿ ಬಿಜೆಪಿ ಹೊರತುಪಡಿಸಿ ಬಿಎಸ್ಪಿ ಪಕ್ಷದಿಂದ ಸ್ಪರ್ಧೆ ಮಾಡಿದರೆ ಅಚ್ಚರಿ ಪಡುವಂತಿಲ್ಲ. ಈಗಾಗಲೇ ಬಿಎಸ್ಪಿಯ ನಾಯಕಿ ಮಾಯಾವತಿ ಅವರು ಪ್ರಧಾನ ಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಹೇಗಾದರೂ ಮಾಡಿ ಗೆಲುವು ಸಾಧಿಸಲೇಬೇಕೆಂಬ ಹಠಕ್ಕೂ ಬಿದ್ದಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಪರಿಚಯ
ಕಾಂಗ್ರೆಸ್ ಮೊದಲೇ ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವ ಕಾರಣದಿಂದ ಕಾಂಗ್ರೆಸ್ನ ಸಖ್ಯ ತೊರೆದಿರುವ ಅವರು ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರಗಿಟ್ಟು ತೃತೀಯರಂಗವನ್ನು ಗಟ್ಟಿಗೊಳಿಸಿದರೆ ತಾವು ಪ್ರಧಾನಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಹೀಗಾಗಿಯೇ ಅವರು ಕಳೆದ ಕೆಲವು ತಿಂಗಳ ಹಿಂದೆಯೇ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಗೆ ಸಿದ್ದರಾಗಿ ಎಂಬ ಸೂಚನೆಯನ್ನು ರವಾನಿಸಿದ್ದರು. ಅವರ ಆದೇಶವನ್ನು ಪಾಲಿಸಿ ರಾಜೀನಾಮೆಯನ್ನು ನೀಡಿದ್ದರಲ್ಲದೆ, ಲೋಕಸಭಾ ಚುನಾವಣೆಗೆ ಪಕ್ಷದ ಸಂಘಟನೆ ಮಾಡುವ ಉದ್ದೇಶದಿಂದ ರಾಜೀನಾಮೆ ನೀಡಿದ್ದಾಗಿ ಎನ್.ಮಹೇಶ್ ಅವರು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದರು. ಮುಂದೆ ಓದಿ...
ಬಿಎಸ್ಪಿಯಿಂದ ಅಭ್ಯರ್ಥಿಯಾಗಿ ಎನ್.ಮಹೇಶ್?
ಈ ಬೆಳವಣಿಗೆಯನ್ನು ಗಮನಿಸಿದರೆ ಬಿಎಸ್ಪಿಯಿಂದ ಅಭ್ಯರ್ಥಿಯಾಗಿ ಕೊನೆಗಳಿಗೆಯಲ್ಲಿ ಎನ್.ಮಹೇಶ್ ಅವರು ಕಣಕ್ಕಿಳಿದರೂ ಅಚ್ಚರಿಪಡಬೇಕಾಗಿಲ್ಲ. ಅವರಿಗೆ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಜನಪ್ರಿಯತೆ ಇರುವುದರಿಂದ ಗೆಲುವು ತಂದುಕೊಟ್ಟರೂ ಕೊಡಬಹುದು. ಇದೆರಡು ಪಕ್ಷಗಳನ್ನು ಹೊರತು ಪಡಿಸಿದರೆ ಬಿಜೆಪಿಯಲ್ಲಿ ಹೆಚ್ಚಿನ ಆಕಾಂಕ್ಷಿಗಳು ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ಇದುವರೆಗೆ ಹೆಸರೇ ಕೇಳದ ಕೆಲವು ನಾಯಕರು ಬಿಜೆಪಿ ಪಕ್ಷದಿಂದ ನಾನು ಟಿಕೆಟ್ ಆಕಾಂಕ್ಷಿ ಎಂಬುದಾಗಿ ಹೇಳುತ್ತಿದ್ದಾರೆ.
ಲೋಕಸಭಾ ಚುನಾವಣೆ: ಮಂಡ್ಯದತ್ತ ರಾಜ್ಯದ ಜನರ ಚಿತ್ತ..!
ನಿವೃತ್ತ ಐಎಫ್ ಎಸ್ ಅರಣ್ಯಾಧಿಕಾರಿ ಡಾ. ಆರ್. ರಾಜು
ಇದೀಗ ನಿವೃತ್ತ ಐಎಫ್ ಎಸ್ ಅರಣ್ಯಾಧಿಕಾರಿ ಡಾ. ಆರ್. ರಾಜು ಎಂಬುವರು ನಾನು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲು ತಯಾರಾಗಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಈ ನಡುವೆ ಸ್ಥಳೀಯ ಬಿಜೆಪಿ ನಾಯಕರ ಮನೆ ಬಾಗಿಲಿಗೆ ಹೋಗಿ ಬಂದಿರುವ ಅವರು ಕಳೆದ 8 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದೇನೆ. ಅಲ್ಲದೇ ಇಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಜಿಲ್ಲೆಯ ಅಭಿವೃದ್ದಿಯಲ್ಲಿ ಕೈಜೋಡಿಸಿದ್ದೇನೆ. ಜತೆಗೆ ಮೈಸೂರು ಹಾಗೂ ಅವಿಭಜಿತ ಚಾಮರಾಜನಗರದಲ್ಲಿ ಹಲವು ವರ್ಷಗಳು ಕಾಲ ಸೇವೆ ಸಲ್ಲಿಸಿದ್ದರಿಂದ ಜನರ ನಾಡಿಮಿಡಿತದ ಬಗ್ಗೆ ಅರ್ಥ ಮಾಡಿಕೊಂಡಿದ್ದೇನೆ ಹೀಗಾಗಿ ನನಗೆ ಟಿಕೆಟ್ ನೀಡಿ ಎಂಬಂತಹ ಮಾತುಗಳನ್ನಾಡಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ಸಿದ್ಧತೆಯಲ್ಲಿ ಎಂ.ವೀರಪ್ಪ ಮೊಯಿಲಿ
ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಶಿವರಾಂ
ಆರ್. ರಾಜು ಅವರ ಮಾತಿಗೆ ಬಿಜೆಪಿ ನಾಯಕರು ಯಾವ ರೀತಿಯ ಮನ್ನಣೆ ನೀಡುತ್ತಾರೋ ಗೊತ್ತಿಲ್ಲ. ಆದರೆ ಕಳೆದೊಂದು ವರ್ಷದಿಂದ ಚಾಮರಾಜನಗರ ಕ್ಷೇತ್ರದತ್ತ ನಿವೃತ್ತ ಐಎಎಸ್ ಅಧಿಕಾರಿ, ಸದ್ಯ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರೂ ಆಗಿರುವ ಕೆ.ಶಿವರಾಂ ಅವರು ದೃಷ್ಠಿ ನೆಟ್ಟಿದ್ದಾರೆ. ಹಲವು ಬಾರಿ ಕ್ಷೇತ್ರದುದ್ದಕ್ಕೂ ಸಂಚಾರ ನಡೆಸಿರುವ ಅವರು ತಳಮಟ್ಟದಿಂದ ಹಿಡಿದು ಜಿಲ್ಲಾಮಟ್ಟದ ಬಿಜೆಪಿ ನಾಯಕರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕರನ್ನು ಕೂಡ ಭೇಟಿ ಮಾಡಿ ಬಂದಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಅವರು ಬಿಜೆಪಿಯಿಂದ ಪ್ರಬಲ ಆಕಾಂಕ್ಷಿ ಎನ್ನುವುದು ಸ್ಪಷ್ಟವಾದಂತೆ ಕಾಣುತ್ತಿದೆ. ದಲಿತ ನಾಯಕನಾಗಿ ಒಂದಷ್ಟು ಹೆಸರು ಮಾಡಿರುವ ಕೆ.ಶಿವರಾಂ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೂ ಅಚ್ಚರಿ ಪಡುವಂತಿಲ್ಲ.
ಈ ಕುತೂಹಲ ಎಲ್ಲರನ್ನು ಕಾಡುತ್ತಲಿದೆ
ಇಲ್ಲಿ ಮಾಜಿ ಸಚಿವ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಅವರ ಪ್ರಭಾವವೂ ಇರುವುದರಿಂದ ಅವರು ಯಾರನ್ನು ಸೂಚಿಸುತ್ತಾರೆ ಎಂಬುದು ಕೂಡ ಮುಖ್ಯವಾಗಲಿದೆ. ಒಂದು ವೇಳೆ ಕಾಂಗ್ರೆಸ್ಗೆ ಸೇರ್ಪಡೆಯಾಗದೆ ಬಿಜೆಪಿಯಲ್ಲೇ ಇದ್ದಿದ್ದರೆ ನಾಯಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಅವಕಾಶ ಸಿಗುತ್ತಿತ್ತೇನೋ? ಈ ಹಿಂದೆ ನಡೆದ ಚುನಾವಣೆಯಲ್ಲಿ ಇವರು ಆರ್.ಧ್ರುವನಾರಾಯಣ್ ವಿರುದ್ಧ ಒಂದು ಮತದಿಂದ ಸೋಲನ್ನಪ್ಪಿದ್ದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ನತ್ತ ಮುಖ ಮಾಡಿದ್ದರು. ಆದರೆ ಅಲ್ಲಿಯೂ ಅವರಿಗೆ ಹೇಳಿಕೊಳ್ಳುವಂತಹ ಸ್ಥಾನಮಾನ ದಕ್ಕಿಲ್ಲ. ಬಿಜೆಪಿ ನಾಯಕರು ಯಾರನ್ನು ಅಭ್ಯರ್ಥಿಯಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುತ್ತಾರೆ ಎಂಬುದರ ಮೇಲೆ ಇಲ್ಲಿನ ರಾಜಕೀಯ ಚಟುವಟಿಕೆ ಗರಿಗೆದರಲಿದೆ. ಅಲ್ಲಿ ತನಕ ಏನಾಗುತ್ತದೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಲೇ ಇರುತ್ತದೆ.