ತೋಟದ ಮನೆಗೆ ಕನ್ನ ಹಾಕಿ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ ಕಳ್ಳರು
ಚಾಮರಾಜನಗರ, ಅಕ್ಟೋಬರ್ 30: ತೋಟದ ಮನೆಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿಯಲ್ಲಿ ನಡೆದಿದ್ದು, ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ದರೋಡೆಕೋರರನ್ನು ಬಂಧಿಸುವಲ್ಲಿ ಗುಂಡ್ಲುಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಂಗಳ್ಳಿ ಹೊರವಲಯದಲ್ಲಿ ಕೇರಳ ಮೂಲದ ಪ್ರದೀಪ್ ಎಂಬುವರು ತೋಟವೊಂದನ್ನು ಗುತ್ತಿಗೆ ಮಾಡಿಕೊಂಡು ತೋಟದ ಮನೆಯಲ್ಲೇ ವಾಸವಿದ್ದಾರೆ. ಗುರುವಾರ ತಡರಾತ್ರಿ ತೋಟದ ಮನೆಗೆ ನುಗ್ಗಿದ ಮೂವರು ದರೋಡೆಕೋರರು ಪ್ರದೀಪ್ ಮೇಲೆ ಖಾರದ ಪುಡಿ ಎರಚಿ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಾಲೀಕ ಪ್ರದೀಪ್ ಸಹ ಪ್ರತಿದಾಳಿ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಹೊಡೆದಾಟ ನಡೆದಿದೆ. ಇದೇ ಸಂದರ್ಭದಲ್ಲಿ ಮನೆಯ ಒಳಗಿನಿಂದ ಕಬ್ಬಿಣದ ರಾಡ್ ತಂದ ಪ್ರದೀಪ್ ದರೋಡೆಕೋರರ ಮೇಲೆ ಬೀಸಿದ ಪರಿಣಾಮ ಓರ್ವ ದರೋಡೆಕೋರ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.
ಶಿವಮೊಗ್ಗ; ವಿಮಾನದಲ್ಲಿ ಬಂದು ಸರ ಕದಿಯುತ್ತಿದ್ದ ಗ್ಯಾಂಗ್ ಬಂಧನ
ಉಳಿದಿಬ್ಬರು ದರೋಡೆಕೋರರು ಪ್ರದೀಪ್ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಆತನ ಪತ್ನಿ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ತಕ್ಷಣ ಪ್ರದೀಪ್ ಗ್ರಾಮಸ್ಥರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಧಾವಿಸಿದ ಗ್ರಾಮಸ್ಥರು ಕುಸಿದುಬಿದ್ದು ಗಾಯಗೊಂಡಿದ್ದ ದರೋಡೆಕೋರನ ಕೈಕಾಲು ಕಟ್ಟಿ ಗುಂಡ್ಲುಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗುಂಡ್ಲುಪೇಟೆ ಪೊಲೀಸರು ದರೋಡೆಕೋರನನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆತನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಉಳಿದ ಇಬ್ಬರು ದರೋಡೆಕೋರರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಬಂಧಿತ ದರೋಡೆಕೋರರನ್ನು ಗುಂಡ್ಲುಪೇಟೆ ತಾಲೂಕು ಕೋಡಹಳ್ಳಿಯ ಸಿದ್ದ, ಪ್ರದೀಪ ಹಾಗೂ ರವಿ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ತೋಟದ ಮಾಲೀಕ ಪ್ರದೀಪ್ ನನ್ನು ಚಿಕಿತ್ಸೆಗಾಗಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆಕೋರರನ್ನು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾದ ಗುಂಡ್ಲುಪೇಟೆ ಪೊಲೀಸರ ಕಾರ್ಯಾಚರಣೆಗೆ ಹೊಂಗಳ್ಳಿ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.