ಕಾವೇರಿಯಲ್ಲಿ ಮುಳುಗಿ ಮೂವರು ಜಲಸಮಾಧಿ
ಕೊಳ್ಳೇಗಾಲ, ಜೂನ್ 10: ಗೆಳೆಯನ ಮದುವೆಗೆ ಬಂದಿದ್ದ ಮೂವರು ಸ್ನೇಹಿತರು ಮದುವೆ ಮುಗಿಸಿ ನದಿ ನೀರಿನಲ್ಲಿ ಆಡಲು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಸತ್ತೇಗಾಲ ಬಳಿಯ ವೆಸ್ಲೀ ಸೇತುವೆ ಸಮೀಪ ಕಾವೇರಿ ನದಿಯಲ್ಲಿ ಭಾನುವಾರ ನಡೆದಿದೆ.
ದಿನೇದಿನೇ ಹೆಚ್ಚುತ್ತಿದೆ ನೀರಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ
ಬೆಂಗಳೂರಿನ ಸುಂಕದಕಟ್ಟೆಯ ನಿವಾಸಿಗಳಾದ ಮನೋಜ್ಕುಮಾರ್ (23), ಲೋಕೇಶ್ (21) ಹಾಗೂ ವೀಣಾ (23) ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು. ಈ ಮೂವರು ಸೇರಿ ಒಟ್ಟು ಆರು ಜನ ಸ್ನೇಹಿತರು ಸ್ನೇಹಿತನ ಮದುವೆಗೆಂದು ಶನಿವಾರ ರಾತ್ರಿ ಬಂದಿದ್ದರು.
ತಲಕಾಡು ಸಮೀಪದ ಮುಡುಕುತೊರೆಯಲ್ಲಿ ನಡೆದ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಂಡು ನಂತರ ತಿರುಗಾಡುವ ಸಲುವಾಗಿ ಸತ್ತೇಗಾಲ ಸಮೀಪ ಇರುವ ಭರಚುಕ್ಕಿ ಮತ್ತು ವೆಸ್ಲೀ ಸೇತುವೆ ಬಳಿ ಹರಿಯುವ ಕಾವೇರಿ ನದಿಗೆ ತೆರಳಿದ್ದರು. 6 ಮಂದಿ ಸ್ನೇಹಿತರಲ್ಲಿ ಈ ಮೂವರು ನೀರಿನಲ್ಲಿಳಿದು ಆಟವಾಡುತ್ತಿದ್ದಾಗ ಯುವತಿ ವೀಣಾ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಈ ವೇಳೆ ಆಕೆಯನ್ನು ಕಾಪಾಡಲು ಮನೋಜ್ಕುಮಾರ್ ಹಾಗೂ ಲೋಕೇಶ್ ಸಹ ನೀರಿಗಿಳಿದಿದ್ದಾರೆ. ಆದರೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೂವರೂ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಕೂಡಲೇ ದಡ ಸೇರಿ ಸಾವಿನಿಂದ ಪಾರಾಗಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸಿಪಿಐ ಶ್ರೀಕಾಂತ್ ಹಾಗೂ ಪಿಎಸ್ ಐ ವಿ.ಸಿ.ವನರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮೇಲೆ ತೆಗೆದು ಮರಣೋತ್ತರ ಪರೀಕ್ಷೆಗೆ ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಯಿತು. ಘಟನೆ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.