ಬಂಡೀಪುರ ಬಳಿ ಲಾರಿ- ಮೊಪೆಡ್ ಅಪಘಾತ; ಮೂವರ ಸಾವು
ಚಾಮರಾಜನಗರ, ನವೆಂಬರ್ 20: ಲಾರಿಯೊಂದು ಮೊಪೆಡ್ ಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೇಲುಕಾಮನಹಳ್ಳಿ ಬಳಿ ನಡೆದಿದೆ.
Recommended Video
ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ನಿವಾಸಿಗಳಾದ ಕಾಳಪ್ಪ (60), ಶಿವಪ್ಪ (67) ಹಾಗೂ ಲಾರಿ ಚಾಲಕ ಮೃತಪಟ್ಟವರಾಗಿದ್ದರೆ, ಲಾರಿ ಕ್ಲೀನರ್ ಗೆ ಗಂಭೀರ ಗಾಯಗಳಾಗಿದ್ದು, ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದಲ್ಲಿ ಆಶ್ಚರ್ಯಕರ ರೀತಿ ಪಾರಾದ ಎಡಿಜಿಪಿ
ಕಾಳಪ್ಪ ಮತ್ತು ಶಿವಪ್ಪ ಅವರು ಶಿವಪುರ ಗ್ರಾಮದಿಂದ ಜಕ್ಕಹಳ್ಳಿ ಸಂಬಂಧಿಕರ ಮನೆಗೆ ಮೊಪೆಡ್ ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಊಟಿಯಿಂದ ಮೈಸೂರಿಗೆ ತೆರಳುತ್ತಿದ್ದ ಶೀಟ್ ತುಂಬಿದ ಲಾರಿ ಡಿಕ್ಕಿಯಾಗಿ ಲಾರಿ ಉರುಳಿ ಹಳ್ಳಕ್ಕೆ ಬಿದ್ದಿದೆ. ಲಾರಿ ಚಾಲಕನನ್ನು ಹೊರ ತೆಗೆಯಲಾಯಿತಾದರೂ ಆತ ಅಷ್ಟರಲ್ಲೇ ಸಾವನ್ನಪ್ಪಿದ್ದನು. ಮೊಪೆಡ್ ಸವಾರರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಅಪಘಾತವಾದ ಸ್ಥಳದಲ್ಲಿ ಈ ಹಿಂದೆಯೂ ಹಲವಾರು ಅವಘಡಗಳು ಸಂಭವಿಸಿದ್ದರೂ ಇಲ್ಲಿ ಯಾವುದೇ ರೀತಿಯ ಸೂಚನಾ ಫಲಕ ಅಳವಡಿಸಿಲ್ಲ. ಇದರಿಂದ ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿರುವ ಸಾರ್ವಜನಿಕರು ಕೂಡಲೇ ಸೂಚನಾ ಫಲಕ ಅಳವಡಿಸುವಂತೆ ಒತ್ತಾಯಿಸಿದ್ದಾರೆ.