ಚಾಮರಾಜನಗರ: ಹರ್ ಘರ್ ತಿರಂಗ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು
ಚಾಮರಾಜನಗರ, ಆ.13: ದೇಶಾದ್ಯಂತ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಹಾಗೇಯೇ ಚಾಮರಾಜನಗರದಲ್ಲೂ ಕೂಡ ಸಾವಿರಾರು ಜನ ತಿರಂಗ ಯಾತ್ರೆ ನಡೆಸಿ 'ಹರ್ ಘರ್ ತಿರಂಗ ಜಾಗೃತಿ' ಮೂಡಿಸಿದರು. ಯಾತ್ರೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಎಬಿವಿಪಿ ವತಿಯಿಂದ 750 ಮೀಟರ್ ತಿರಂಗ ಪ್ರದರ್ಶನ ಮಾಡಿರುವುದು ಗಮನ ಸೆಳೆಯಿತು. ಕಾಲೇಜು ವಿದ್ಯಾರ್ಥಿಗಳು ತಿರಂಗವನ್ನು ಹಿಡಿದು ಪ್ರದರ್ಶಿಸುವುದರ ಮೂಲಕ ಜಾಗೃತಿ ಮೂಡಿಸಿದರು.
ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಶನಿವಾರ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾಡಳಿತ ಭವನದ ಮುಂಭಾಗ ಧ್ವಜಾರೋಹಣದ ಬಳಿಕ ಅವರು ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿದರು.
ಜಾಗೃತಿ ಜಾಥಾದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ, ಶಾಲೆಗಳ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಜಿಲ್ಲಾಡಳಿತ ಭವನದ ಮುಂಭಾಗ ಆರಂಭಗೊಂಡ ಜಾಗೃತಿ ಜಾಥಾ ಬಿ.ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತದ ಮೂಲಕ, ಚಾಮರಾಜೇಶ್ವರ ಸ್ವಾಮಿ ದೇವಾಲಯದವರೆಗೆ ಸಾಗಿ ವಾಪಸ್ ಜಿಲ್ಲಾಡಳಿತ ಭವನಕ್ಕೆ ತಲುಪಿತು.
ಚಾಮರಾಜನಗರ ಜಿಲ್ಲೆಯಲ್ಲಿ ಹೀಗೆ ರಾಷ್ಟ್ರಧ್ಜಜಗಳನ್ನು ಹಿಡಿದು ಹರ್ ಘರ್ ತಿರಂಗದ ಬಗ್ಗೆ ಜಾಗೃತಿ ಮೂಡಿಸಿದರು. ಜಾಗೃತಿ ಜಾಥಾದಲ್ಲಿ ಜಿಲ್ಲೆಯ ಹಲವು ಶಾಲೆಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದು, ರಾಷ್ಟ್ರಧ್ವಜಗಳನ್ನು ಹಿಡಿಯುವ ಮೂಲಕ ಗಮನ ಸೆಳೆದರು. ಈಗಾಗಲೇ ದೇಶಾದ್ಯಂತ ಒಂದೊಂದು ರೀತಿಯಾಗಿ ಹರ್ ಘರ್ ತಿರಂಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿವೆ. ರಾಷ್ಟ್ರಧ್ವಜಗಳನ್ನು ನೇಯುವ ಮೂಲಕ ಕೆಲವರು ದೇಶಭಕ್ತಿ ಮೆರೆದರೆ, ಇನ್ನು ಕೆಲವರು ಜಾಥಾ ನಡೆಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ದೇಶಪ್ರೇಮ ಮೆರೆಯುತ್ತಿದ್ದಾರೆ.
Recommended Video