ದಯಾಮರಣ ಪಾಲಿಸಿ ಎಂದು ಕಣ್ಣೀರಿಡುತ್ತಿರುವ ಗುರುವಿನಪುರ ಗ್ರಾಮದ ಯುವಕ
ಚಾಮರಾಜನಗರ, ಮೇ.10: ದುಡಿದು ಅಪ್ಪ ಅಮ್ಮನನ್ನು ಸಾಕಬೇಕಾದ ಯುವಕನೊಬ್ಬ ಬೆನ್ನು ಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿದ್ದು, ಅಪ್ಪ ಅಮ್ಮನಿಂದಲೇ ಸೇವೆ ಮಾಡಿಸಿಕೊಳ್ಳಬೇಕಾದ ದುಸ್ಥಿತಿಗೆ ಕಣ್ಣೀರಿಡುತ್ತಾ ನನಗೆ ದಯಾಮರಣ ಪಾಲಿಸಿ ಎಂದು ಕಣ್ಣೀರಿಡುತ್ತಿರುವ ಹೃದಯ ವಿದ್ರಾವಕ ದೃಶ್ಯ ಗುಂಡ್ಲುಪೇಟೆ ತಾಲೂಕಿನ ಗುರುವಿನಪುರದಲ್ಲಿ ಕಂಡು ಬಂದಿದೆ.
ಗುರುವಿನಪುರ ಗ್ರಾಮದ ನಿವಾಸಿ ಚಿಕ್ಕ ಮಾದಪ್ಪ ಎಂಬುವವರ ಪುತ್ರ ಮಹೇಶ ಎಂಬಾತನೇ ತನಗೆ ಒದಗಿ ಬಂದ ಸಂಕಷ್ಟಕ್ಕಾಗಿ ಕಣ್ಣೀರಿಡುತ್ತಿರುವ ದುರ್ದೈವಿ ಯುವಕ. ಈತ ಹಾಸಿಗೆ ಹಿಡಿದು ಆರು ವರ್ಷಗಳೇ ಕಳೆದು ಹೋಗಿವೆ. ಈ ನಡುವೆ ಆತನ ಕೊರಗಿನಲ್ಲಿ ತಂದೆಯೂ ಸಾವನ್ನಪ್ಪಿದ್ದರೆ ತಾಯಿಯ ಆರೈಕೆಯಲ್ಲಿ ದಿನ ಕಳೆಯುತ್ತಿದ್ದಾನೆ.
ಉಡುಪಿಯಲ್ಲಿ ಮರಳು ಸಮಸ್ಯೆ ಉಲ್ಬಣ:ವ್ಯಕ್ತಿಯಿಂದ ದಯಾಮರಣಕ್ಕೆ ಅರ್ಜಿ!
ಚಿಕ್ಕ ಮಾದಪ್ಪನಿಗೆ ಮಹೇಶ ಒಬ್ಬನೇ ಮಗ, ಒಬ್ಬಳು ಮಗಳು, ಬಡತನ, ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲೇ ಬೇಕು.ಅದರ ನಡುವೆಯೂ ಮಗ ಮಹೇಶನನ್ನು ಚೆನ್ನಾಗಿ ಓದಿಸಿದ್ದರು. ಪಿಯುಸಿ ಓದಿ ಪಾಸಾಗಿದ್ದ ಮಹೇಶ ಕಳೆದ ಆರು ವರ್ಷದ ಹಿಂದೆ ರಜಾ ದಿನದಂದು ಜಮೀನಿನಲ್ಲಿದ್ದ ಅಪ್ಪ ಅಮ್ಮನ ಜೊತೆ ಕೆಲಸ ಮಾಡಲು ಹೋಗಿ, ಮಾವಿನ ಕಾಯಿ ತಿನ್ನಲು ಮರವೇರಿದ್ದ, ಕಾಲು ಜಾರಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದು ಆಸ್ಪತ್ರೆ ಸೇರಿದ್ದ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದರೂ ಗುಣವಾಗಲೇ ಇಲ್ಲ, ಕೂಲಿ ಇಲ್ಲದೇ ಸಾಲ ಕೊಟ್ಟವರಿಗೆ ವಾಪಸ್ಸು ಕೊಡಲಾಗದೆ ಸಾಲಬಾಧೆ ಹೆಚ್ಚಾದಾಗ, ಇತ್ತ ವಯಸ್ಸಿಗೆ ಬಂದ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ ಅತ್ತ ಸಾಲವನ್ನು ತೀರಿಸಲಾಗಲಿಲ್ಲ ಎಂಬ ಕೊರಗಿನಲ್ಲಿ ತಂದೆ ಚಿಕ್ಕ ಮಾದಪ್ಪ ವಿಷ ಕುಡಿದು ಆತ್ಮಹತ್ಯೆಗೆ ಶರಣಾದರು.
ರಾಜ್ಯಪಾಲರಿಗೆ ಮನವಿ ಮಾಡಿದ ಮಹೇಶ
ತಂದೆ ಚಿಕ್ಕ ಮಾದಪ್ಪನ ಸಾವಿನ ನಂತರ ಮಗನನ್ನ ಸಾಕುವ ಹೊಣೆಯನ್ನು ತಾಯಿ ಹೊತ್ತುಕೊಂಡಿದ್ದು, ತಮಗೆ ಬರುವ ವಿಧವಾ ವೇತನ, ಮಗನಿಗೆ ಬರುವ ಅಂಗವಿಕಲ ವೇತನ, ಸಂಘವೊಂದು ನೀಡುವ ಸಹಾಯ ಧನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಮಗನ ಚಿಕಿತ್ಸಾ ವೆಚ್ಚ ತಿಂಗಳಿಗೆ ನಾಲ್ಕಾರು ಸಾವಿರ ರೂಪಾಯಿಗಳು ಆಗುವುದರಿಂದ ಅವರು ಸಂಕಷ್ಟ ಅನುಭವಿಸುವಂತಾಗಿದ್ದು, ಹೀಗಾಗಿ ನಮ್ಮ ಜೀವನವೇ ದುಸ್ತರವಾಗಿದೆ. ಹೀಗಾಗಿ ನನಗೆ ಜೀವನ ಸಾಕಾಗಿ ಹೋಗಿದೆ ದಯಾಮರಣ ಕೊಡಿಸಿ ಎಂದು ಜಿಲ್ಲಾಧಿಕಾರಿಗಳು ಮತ್ತು ರಾಜ್ಯಪಾಲರಿಗೆ ಮನವಿ ಮಾಡುತ್ತಿದ್ದಾನೆ ಮಹೇಶ.
ಪಿರಿಯಾಪಟ್ಟಣದ ರಾವಂದೂರಲ್ಲಿ ಮಹಿಳೆ ದಯಾಮರಣಕ್ಕೆ ಅರ್ಜಿ ನೀಡಿದ್ದೇಕೆ?
ಆರು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿದ್ದಾನೆ
ಬೆನ್ನು ಮೂಳೆ ಮುರಿದುಕೊಂಡು, ಆಸ್ಪತ್ರೆ ಸೇರಿ ಚಿಕಿತ್ಸೆ ಫಲಕಾರಿಯಾಗದೆ ಮನೆಗೆ ವಾಪಸ್ಸು ಬಂದ ಮಹೇಶ್ ಕಳೆದ ಆರು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿದ್ದಾನೆ. ಲಕ್ಷಾಂತರ ರೂ. ಸಾಲ ಮಾಡಿದರೂ ಗುಣಮುಖವಾಗದ ಕಾಯಿಲೆಯಿಂದ ಬಳಲುತ್ತಿರುವ ಮಹೇಶ ದಾನಿಗಳ ಸಹಾಯ ಹಸ್ತ ಚಾಚುತ್ತಿದ್ದಾನೆ. ಸದ್ಯದ ಪರಿಸ್ಥಿತಿಯಲ್ಲಿ ಕುಟುಂಬದಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟವಾಗುತ್ತಿದೆ.
ತೀರ್ಪಿನ ನಂತರ ದಯಾಮರಣದ ಅರ್ಜಿ ಸ್ವೀಕರಿಸಿದ ಮೊದಲ ವಕೀಲೆ
ತಿಂಗಳಿಗೆ 4 ರಿಂದ 5 ಸಾವಿರ ಖರ್ಚು
ಈ ಬಗ್ಗೆ ಅಳಲು ತೋಡಿಕೊಂಡಿರುವ ಮಹೇಶನ ತಾಯಿ ನನಗೆ ವಿಧವಾ ವೇತನ ಮತ್ತು ಅವನಿಗೆ ಬರುವ ಅಂಗ ವಿಕಲವೇತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅವನ ಚಿಕಿತ್ಸೆಗಾಗಿ ತಿಂಗಳಿಗೆ 4 ರಿಂದ 5 ಸಾವಿರ ಖರ್ಚು ಆಗುತ್ತದೆ ಅದನ್ನು ಭರಿಸಲು ನನಗೆ ಆಗುತ್ತಿಲ್ಲ. ಇತ್ತ ಮಗನ ನೋಡಿಕೊಳ್ಳೋದಾ? ಜೀವನ ನಿರ್ವಹಣೆಗೆ ಕೂಲಿ ಮಾಡೋದಾ? ಎಂಬ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಏನು ಮಾಡಬೇಕೆಂಬುದೇ ತೋಚದಂತಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಗುಣವಾಗಲು ಹತ್ತಾರು ಲಕ್ಷಗಳೇ ಬೇಕು
ಇನ್ನು ಮಹೇಶ ಕೂಡ ನನ್ನ ತಾಯಿ ನನಗಾಗಿ ಕಷ್ಟಪಡುತ್ತಿದ್ದಾರೆ, ಅದನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ, ನನಗೆ ಬಂದಿರುವ ಖಾಯಿಲೆ ಗುಣವಾಗಲೂ ಹತ್ತಾರು ಲಕ್ಷಗಳೇ ಬೇಕು, ಅದನ್ನು ಭರಿಸುವ ಶಕ್ತಿ ನಮಗಿಲ್ಲ, ನಮ್ಮದು ಬಡ ಕುಟುಂಬ, ತನ್ನ ತಾಯಿ ನಿಶಕ್ತಳು, ಅವಳಿಗೆ ತೊಂದರೆ ಕೊಡಲು ನನ್ನಿಂದ ಸಾಧ್ಯವಿಲ್ಲ, ಅದಕ್ಕಾಗಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ.ನನಗೆ ದಯಾಮರಣ ಕಲ್ಪಿಸಿ ಎಂದು ಕೋರುತ್ತಿದ್ದಾನೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಈ ಕುಟುಂಬಕ್ಕೊಂದು ದಾರಿ ತೋರಿಸಬೇಕಿದೆ.