ಕಾವೇರಿ ನೀರಿನ ಹೊಡೆತಕ್ಕೆ ಇನ್ನಷ್ಟು ಕುಸಿದ ವೆಸ್ಲಿ ಸೇತುವೆ
ಚಾಮರಾಜನಗರ, ಆಗಸ್ಟ್ 15: ಕಳೆದ ವರ್ಷವಷ್ಟೆ ಕಾವೇರಿ ನದಿಯ ಪ್ರವಾಹದಿಂದ ಕುಸಿದಿದ್ದ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ಬಳಿಯಿರುವ ಪಾರಂಪರಿಕ ವೆಸ್ಲಿ ಸೇತುವೆ ಇದೀಗ ಮತ್ತೆ ಪ್ರವಾಹದ ಹೊಡೆತಕ್ಕೆ ಸಿಲುಕಿ ಇನ್ನಷ್ಟು ಹಾನಿಗೊಳಗಾಗಿದೆ.
ಕಳೆದ ವರ್ಷವೂ ಪ್ರವಾಹಕ್ಕೆ ತುತ್ತಾಗಿ ಸೇತುವೆ 40 ಮೀಟರ್ನಷ್ಟು ಕುಸಿದಿತ್ತು. ಈ ವರ್ಷವೂ ಅಂದಾಜು 10 ಮೀಟರ್ನಷ್ಟು ಕುಸಿತ ಕಂಡಿದೆ. ಇದೀಗ ಪ್ರವಾಹ ಇಳಿಮುಖವಾದ ನಂತರ ಸೇತುವೆ ಕುಸಿದಿರುವುದು ಕಂಡು ಬಂದಿದೆ.
ಕೊಚ್ಚಿ ಹೋದ ವೆಸ್ಲಿ ಸೇತುವೆಗೆ ಬರಲಿದೆ ಮರು ಜೀವ!
ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ದ್ವೀಪ ಗ್ರಾಮ ಮತ್ತು ಆದಿಶಕ್ತಿ ಮಾರಮ್ಮ, ಮಧ್ಯರಂಗನಾಥ, ಸೋಮೇಶ್ವರ ಸಮೂಹ ದೇವಾಲಯಗಳಿಗೆ ಮತ್ತು ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಿಗೆ ತೆರಳಲು ಬ್ರಿಟಿಷರ ಕಾಲದಲ್ಲಿ ಕಲ್ಲಿನ ಕಂಬಗಳನ್ನು ಬಳಸಿ ಕಾವೇರಿ ನದಿಗೆ ಅಡ್ಡಲಾಗಿ 350 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಲಾಗಿತ್ತು.
ಪಾರಂಪರಿಕ ಸೇತುವೆ ಶಿಥಿಲಗೊಂಡಿದ್ದರಿಂದ 2 ವರ್ಷಗಳ ಹಿಂದೆಯೇ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಅದಕ್ಕೆ ಪರ್ಯಾಯವಾಗಿ 10 ವರ್ಷಗಳ ಹಿಂದೆ ಒಂದು ಮತ್ತು ಕಳೆದ ವರ್ಷ ಮತ್ತೊಂದು ಸೇತುವೆ ನಿರ್ಮಾಣ ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ವೆಸ್ಲಿ ಸೇತುವೆ ಮೇಲೆ ಓಡಾಡಿಕೊಂಡು ಕಾವೇರಿ ನದಿಯನ್ನು ಕಣ್ತುಂಬಿಕೊಳ್ಳಲಷ್ಟೇ ಅವಕಾಶ ನೀಡಲಾಗಿದ್ದು, ವಾಹನಗಳನ್ನು ಅದರ ಮೇಲೆ ಸಂಚರಿಸುವಂತಿರಲಿಲ್ಲ. ಆದರೆ ಪ್ರವಾಸಿಗರು ಇಲ್ಲಿಗೆ ಬಂದು ಸೇತುವೆ ಮೇಲೆ ಓಡಾಡುತ್ತಾ ಖುಷಿ ಪಡುತ್ತಿದ್ದರು.
ವಾರದ ಕೊನೆಯಲ್ಲಿ ಅಥವಾ ಸರ್ಕಾರಿ ರಜೆಯ ಸಮಯದಲ್ಲಿ ಹೆಚ್ಚಿನ ಪ್ರವಾಸಿಗರು ಇತ್ತ ಬರುತ್ತಿದ್ದರಲ್ಲದೆ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಂಡು ಒಂದಷ್ಟು ಹೊತ್ತು ಕಳೆದು ಹೋಗುತ್ತಿದ್ದರು. ಆದರೆ ಕಳೆದ ವರ್ಷದ ಪ್ರವಾಹಕ್ಕೆ ಈ ಸೇತುವೆ ಕುಸಿದು ಹೋಗಿತ್ತು.
ಕಾವೇರಿ ರಭಸಕ್ಕೆ ಕೊಚ್ಚಿಹೋದ ಭರಚುಕ್ಕಿ ಬಳಿಯ ವೆಸ್ಲಿ ಸೇತುವೆ
ಕುಸಿಯುವ ವೇಳೆ ಯಾವುದೇ ಪ್ರವಾಸಿಗರು ಈ ಸೇತುವೆ ಮೇಲೆ ತೆರಳದೆ ಇದ್ದುದರಿಂದ ಯಾವುದೇ ರೀತಿಯ ತೊಂದರೆಯಾಗಿರಲಿಲ್ಲ. ಆದರೆ ಸೇತುವೆ ಕುಸಿದು ಬಿದ್ದಿದ್ದು ಹಲವರಿಗೆ ನೋವುಂಟು ಮಾಡಿತ್ತು. ಆ ನಂತರ ಪ್ರವಾಸೋದ್ಯಮ ಮತ್ತು ಪಾರಂಪರಿಕ ಇಲಾಖೆಗಳು ಸೇತುವೆ ದುರಸ್ತಿಗೆ ಮುಂದಾಗಿದ್ದವು. ಕುಸಿದ ಭಾಗ ಸೇರಿದಂತೆ ಶಿಥಿಲಗೊಂಡಿರುವ 120 ಮೀಟರ್ ಸೇತುವೆಯನ್ನು ದುರಸ್ತಿ ಮಾಡಿಸಲು 2 ಕೋಟಿ ರೂ. ಅಂದಾಜಿನಲ್ಲಿ ಕ್ರಿಯಾ ಯೋಜನೆ ತಯಾರಿಸಿ ಕಳೆದ ಜೂನ್ 3ರಂದು ದುರಸ್ತಿ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಗುತ್ತಿಗೆದಾರರು ಕಾಮಗಾರಿಯನ್ನು ಮುಂಗಾರು ನಂತರ ಪ್ರಾರಂಭಿಸಲು ನಿರ್ಧರಿಸಿದ್ದರು.
ಇದೀಗ ಸೇತುವೆ ಮತ್ತಷ್ಟು ಕುಸಿತ ಕಂಡಿರುವುದರಿಂದ ಮತ್ತೆ ಹೊಸ ಅಂದಾಜು ಪಟ್ಟಿ ತಯಾರಿಸಿ ಸಂಬಂಧಪಟ್ಟವರಿಂದ ಅನುಮೋದನೆ ಪಡೆದು ಕೆಲಸ ಪ್ರಾರಂಭ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದರಿಂದ ಸದ್ಯಕ್ಕೆ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಜತೆಗೆ ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಸೇತುವೆಯ ಅಭಿವೃದ್ಧಿ ಕಾಮಗಾರಿ ಯಾವ ರೀತಿಯಲ್ಲಿ ಸಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.