ಪ್ರವಾಸಿಗರು ವನ್ಯಜೀವಿಗಳಿಗೆ ತೊಂದರೆ ಕೊಟ್ರೆ ಬೀಳುತ್ತೆ ದಂಡ
ಚಾಮರಾಜನಗರ, ಏಪ್ರಿಲ್ 28: ಬಂಡೀಪುರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಇದರಲ್ಲಿ ಸಾಗುವ ಪ್ರವಾಸಿಗರ ವಾಹನ ನಿಲುಗಡೆಯನ್ನು ನಿರ್ಬಂಧಿಸಿದ್ದರೂ ಪ್ರವಾಸಿಗರು ಅಲ್ಲಲ್ಲಿ ವಾಹನ ನಿಲ್ಲಿಸಿ ಅರಣ್ಯದೊಳಕ್ಕೆ ಪ್ರವೇಶಿಸುತ್ತಿರುವುದು ಕಂಡು ಬರುತ್ತಿದೆ. ಇದರ ತಡೆಗೆ ಮತ್ತು ಪ್ರವಾಸಿಗರ ಪುಂಡಾಟ ತಡೆಯುವ ಸಲುವಾಗಿ ಅರಣ್ಯ ಇಲಾಖೆ ದಂಡ ಹಾಕುವ ಕಾರ್ಯಕ್ಕೆ ಮುಂದಾಗಿದೆ.
ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ವಾಹನದಿಂದ ಇಳಿದು ಎಲ್ಲೆಂದರಲ್ಲಿ ಸೆಲ್ಫಿ ತೆಗೆಯುವುದು, ವನ್ಯ ಪ್ರಾಣಿಗಳ ಫೋಟೋ ತೆಗೆಯುವುದನ್ನು ಮಾಡುತ್ತಿರುತ್ತಾರೆ. ಇದು ಅಪಾಯ. ಇಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸುವುದಾಗಲೀ ಅರಣ್ಯಕ್ಕೆ ಪ್ರವೇಶವನ್ನಾಗಲೀ ಮಾಡುವಂತಿಲ್ಲ.
ಉರುಳು ಹಾಕಿ ಹಂದಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರು ಬೇಟೆಗಾರರ ಬಂಧನ
ಏಕೆಂದರೆ ವನ್ಯ ಜೀವಿಗಳು ರಸ್ತೆ ಬದಿಯಲ್ಲಿ ಸಂಚರಿಸುವುದರಿಂದ ಅದು ಅನಾಹುತ ಎಡೆಮಾಡಿಕೊಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸೂಚನೆ ನೀಡಲಾಗುತ್ತಿದ್ದರೂ ಅದಕ್ಕೆ ಸೊಪ್ಪು ಹಾಕದ ಮಂದಿ ವಾಹನದಿಂದ ಕೆಳಕ್ಕೆ ಇಳಿಯುತ್ತಿದ್ದಾರೆ.
ಜತೆಗೆ ಫೋಟೋ ತೆಗೆಯುವುದು, ಮದ್ಯಪಾನ, ಧೂಮಪಾನ ಮಾಡುವುದು, ಊಟ ಮಾಡುವುದು, ಬಾಟಲಿ ಎಸೆಯುವುದು, ಬಹಿರ್ದೆಸೆಗೆ ಕಾಡಿಗೆ ತೆರಳುವುದು ಹೀಗೆ ಏನಾದರೊಂದು ಮಾಡುತ್ತಲೇ ಇರುತ್ತಾರೆ.
ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆ ಬಿಬಿಎಂಪಿಯಿಂದ ಆಂಬುಲೆನ್ಸ್ ಖರೀದಿ
ಈಗ ಮಳೆ ಬಿದ್ದಿದೆ. ಅರಣ್ಯ ಹಸಿರಾಗಿದೆ ವನ್ಯಪ್ರಾಣಿಗಳು ಲವಲವಿಕೆಯಿಂದ ಅತ್ತಿತ್ತ ಅಡ್ಡಾಡುತ್ತಿರುತ್ತವೆ. ಅದರಲ್ಲೂ ಆನೆ ಸೇರಿದಂತೆ ಹುಲಿ, ಚಿರತೆಗಳು ಯಾವಾಗ ಬೇಕಾದರೂ ಮನುಷ್ಯನ ಮೇಲೆ ದಾಳಿಮಾಡುವ ಸಾಧ್ಯತೆಯಿರುವುದರಿಂದ ವಾಹನಗಳನ್ನು ನಿಲ್ಲಿಸಬೇಡಿ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸೂಚಿಸಿದರೂ ಅದನ್ನು ಪರಿಗಣಿಸದಿರುವುದು ಕಂಡು ಬರುತ್ತಿದೆ.
ಜಾಲತಾಣದಲ್ಲಿ ಹರಿದಾಡುತ್ತಿವೆ ಕಾಡ್ಗಿಚ್ಚಿನ ಸುಳ್ಳು ಚಿತ್ರಗಳು, ಎಚ್ಚರ
ಬಂಡೀಪುರದ ರಸ್ತೆಯಲ್ಲಿ ಸಾಗುವ ಪ್ರವಾಸಿಗರು ಹುಲಿಯೋಜನೆಯ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಏಕೆಂದರೆ ಇಲ್ಲಿ ಆನೆ, ಕಾಟಿ, ಹುಲಿ, ಚಿರತೆಗಳು ಹೆಚ್ಚಾಗಿ ಸಂಚರಿಸುತ್ತಿರುತ್ತವೆ. ಈ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಹೊರರಾಜ್ಯಗಳ ಲಾರಿ ಚಾಲಕರು ನಿರ್ಜನ ಪ್ರದೇಶದಲ್ಲಿ ಲಾರಿಗಳನ್ನು ರಸ್ತೆ ಬದಿಗಳಲ್ಲಿ ಸಾಲಾಗಿ ನಿಲ್ಲಿಸಿ ಅರಣ್ಯ ಪ್ರದೇಶದೊಳಗೆ ತೆರಳುತ್ತಾರೆ. ಇದೆಲ್ಲದಕ್ಕೂ ಬ್ರೇಕ್ ಹಾಕುವ ಸಲುವಾಗಿಯೇ ಮತ್ತು ವನ್ಯಜೀವಿಗಳಿಗೆ ತೊಂದರೆ ನೀಡುವ ಪ್ರವಾಸಿಗರಿಗೆ ದಂಡ ವಿಧಿಸುವ ಮೂಲಕ ಅರಣ್ಯ ಇಲಾಖೆ ಬಿಸಿ ಮುಟ್ಟಿಸುತ್ತಿದೆ.
ಹುಲಿ ಯೋಜನೆಯ ಊಟಿ ರಸ್ತೆಯ ಬಂಡೀಪುರ, ಕೆಕ್ಕನಹಳ್ಳ, ಕೇರಳ ರಸ್ತೆಯ ಮದ್ದೂರು ಹಾಗೂ ಮೂಲೆಹೊಳೆ ಪ್ರದೇಶದಲ್ಲಿ ನಿರಂತರ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಾ ವಾಹನ ನಿಲುಗಡೆ ಮಾಡುವವರಿಗೆ ಒಂದು ಸಾವಿರ ರೂ. ದಂಡ ವಿಧಿಸುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆಯಾದರೂ ಪ್ರವಾಸಿಗರು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.