ಗುಂಡ್ಲುಪೇಟೆ: ಅಮ್ಮನ ಮಡಿಲು ಸೇರಲಾಗದೆ ಸಾವನ್ನಪ್ಪಿದ ಮರಿಯಾನೆ!
ಗುಂಡ್ಲುಪೇಟೆ (ಚಾಮರಾಜನಗರ), ಜನವರಿ 3: ಸಾರ್ವಜನಿಕರ ಗದ್ದಲದಿಂದ ತಾಯಿಯಿಂದ ಬೇರ್ಪಟ್ಟಿದ್ದ ಎಂಟು ತಿಂಗಳ ಮರಿಯಾನೆ ಕೊನೆಗೂ ತಾಯಿಯ ಮಡಿಲು ಸೇರಲಾಗದೆ ಸಾವನ್ನಪ್ಪಿದ ಘಟನೆ ಬಂಡೀಪುರದ ಓಂಕಾರ್ ಅರಣ್ಯವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಆನೆಮರಿಯನ್ನು ಪಾರುಮಾಡಿದ 'ಬಾಹುಬಲಿ' ಪಳನಿಚಾಮಿ
ಸೋಮವಾರ ಎಂಟು ತಿಂಗಳ ಮರಿಯಾನೆ ತನ್ನ ತಾಯಿಯೊಂದಿಗೆ ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದಿಂದ ಹೊರಬಂದಿತ್ತು. ತಾಯಿ ಆನೆ ಆಹಾರ ಅರಸಿ ಬಂದಿದ್ದರಿಂದ ಅದರೊಂದಿಗೆ ಈ ಮರಿಯೂ ಬಂದಿತ್ತು. ಕುರುಬರಹುಂಡಿ ಗ್ರಾಮದ ಸಮೀಪಕ್ಕೆ ಬಂದ ವೇಳೆ ಸಾರ್ವಜನಿಕರು ಅವುಗಳನ್ನು ನೋಡಿ ಮತ್ತೆ ಅರಣ್ಯಕ್ಕೆ ಓಡಿಸಿದ್ದಾರೆ. ಈ ವೇಳೆ ಆನೆ ಮತ್ತು ಮರಿಯಾನೆ ಬೇರ್ಪಟ್ಟಿದ್ದವು.
ಅರಣ್ಯದತ್ತ ಓಡಲುತಾಯಿ ಆನೆ ತನ್ನ ಮರಿಯನ್ನು ಕರೆದೊಯ್ಯುವ ಯತ್ನ ಮಾಡಿದೆ. ಆದರೆ ಜನ ಅವುಗಳನ್ನು ಬೆದರಿಸಿದ್ದಾರೆ. ಇದರಿಂದ ಗಾಬರಿಗೊಂಡ ತಾಯಿ ಆನೆ ಅರಣ್ಯದೊಳಕ್ಕೆ ಓಡುವ ವೇಳೆ ಮರಿಯಾನೆ ಬೇರ್ಪಟ್ಟಿದೆ. ಇದರಿಂದ ಮರಿಯಾನೆ ಅಲ್ಲಿಯೇ ಉಳಿದುಕೊಂಡಿತ್ತಲ್ಲದೆ ಹಾಲು ಸಿಗದೆ ನಿತ್ರಾಣಗೊಂಡಿತ್ತು
ವಿಷಯ ತಿಳಿದು ಸ್ಥಳಕ್ಕೆ ಬಂದ ಓಂಕಾರ್ ಅರಣ್ಯ ವಲಯದ ಸಿಬ್ಬಂದಿ ಅದನ್ನು ತಮ್ಮ ಜೀಪಿನಲ್ಲಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡಿ ಮತ್ತೆ ಅದರ ತಾಯಿಯ ಬಳಿಗೆ ಸೇರಿಸಲು ಪ್ರಯತ್ನ ನಡೆಸಿದ್ದಾರೆ.
ಆದರೆ, ಎಲ್ಲಿಯೂ ತಾಯಿ ಆನೆ ಇರುವ ಬಗ್ಗೆ ಸುಳಿವು ಸಿಕ್ಕಿಲ್ಲ. ಮರಿಯಾನೆಗೆ ಜ್ವರ ಜಾಸ್ತಿಯಾಗಿ ಸಾವನ್ನಪ್ಪಿದೆ. ಕೊನೆಗೂ ಸಾರ್ವಜನಿಕರ ಗದ್ದಲಕ್ಕೆ ತಾಯಿಯಿಂದ ಬೇರ್ಪಟ್ಟ ಮರಿಯಾನೆ ಅಮ್ಮನ ಮಡಿಲು ಸೇರಲಾಗಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನವೂ ಫಲಕೊಡಲಿಲ್ಲ.