ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಟೆಂಪೋ ಮಗುಚಿ ಮಹಿಳೆ ಸಾವು
ಚಾಮರಾಜನಗರ, ಆಗಸ್ಟ್ 11: ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಶನಿವಾರ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಹನೂರಿನ ಎಲ್ಲೇಮಾಳದ ಅರಣ್ಯ ಇಲಾಖೆ ನರ್ಸರಿ ಬಳಿ ಸಂಭವಿಸಿದೆ.
ಅಮ್ಮಣಿಯಮ್ಮ ಎಂಬಾಕೆ ಸಾವನ್ನಪ್ಪಿದ್ದಾರೆ. ಶಿವ, ಗಿರಿಜಮ್ಮ, ನಿಂಗಮ್ಮ, ಕಮಲಮ್ಮ, ಲಕ್ಷ್ಮೀದೇವಿ ಎಂಬುವವರಿಗೆ ಗಾಯಗಳಾಗಿದ್ದರೆ, ಟೆಂಪೋ ಚಾಲಕ ಮಂಜು ಎಂಬಾತನ ಕೈ ತುಂಡಾಗಿದೆ. ಮಾದಮ್ಮ ಎಂಬಾಕೆ ತಲೆಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರ ಪೈಕಿ ಕೆಲವರಿಗೆ ಕೊಳ್ಳೇಗಾಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಅಪಘಾತದಲ್ಲಿ ಕಾಂಗ್ರೆಸ್ ಶಾಸಕನ ಮೊಮ್ಮಗ ಸಾವು
ಇವರೆಲ್ಲರೂ ಬೆಳಕವಾಡಿ ಸಮೀಪದ ಬೀಜಿಪುರ ಗ್ರಾಮದವರು. ಭೀಮನ ಅಮಾವಾಸ್ಯೆ ಪ್ರಯುಕ್ತ ಶನಿವಾರ ಮಹದೇಶ್ವರ ಬೆಟ್ಟಕ್ಕೆ ಟೆಂಪೋ (ಕೆ.ಎ.11 ಬಿ 2256)ದಲ್ಲಿ ತೆರಳುತ್ತಿದ್ದರು. ಹನೂರಿನ ಎಲ್ಲೇಮಾಳದ ಅರಣ್ಯ ಇಲಾಖೆ ನರ್ಸರಿ ಬಳಿ ಮಹದೇಶ್ವರ ಬೆಟ್ಟದ ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್ ಗೆ ತೆರಳಲು ಜಾಗ ಬಿಟ್ಟುಕೊಡುವ ವೇಳೆ ಚಾಲಕ ಮಂಜು ಎಂಬಾತನ ನಿಯಂತ್ರಣ ತಪ್ಪಿ ಟೆಂಪೋ ಉರುಳಿದೆ.
ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುವುದರೊಂದಿಗೆ ಟೆಂಪೋದಲ್ಲಿದ್ದವರ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಅದೇ ವೇಳೆಗೆ ಪೊಲೀಸರು ಆಗಮಿಸಿ ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅಮ್ಮಣಿಯಮ್ಮ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹನೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.