ಸುಳ್ವಾಡಿ ಪ್ರಕರಣ : ಅವರ ಕಣ್ಣೀರು ಒರೆಸಲು ಯಾರಿಂದಲೂ ಸಾಧ್ಯವಿಲ್ಲ!
ಚಾಮರಾಜನಗರ, ಡಿಸೆಂಬರ್ 22 : ಪ್ರತಿ ಶುಕ್ರವಾರ ಮತ್ತು ಮಂಗಳವಾರ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ತೆರಳಿ ತಮ್ಮ ಸಂಕಷ್ಟವನ್ನೆಲ್ಲ ಪರಿಹರಿಸು ತಾಯಿ ಎಂದು ಬೇಡಿಕೊಳ್ಳುತ್ತಿದ್ದ ಭಕ್ತರು ಪ್ರಸಾದದಲ್ಲಿ ವಿಷ ಹಾಕಿ ತಮ್ಮ ಮನೆಯ ದೀಪ ಆರಿಸಿದ ದುಷ್ಟರಿಗೆ ಶಿಕ್ಷೆಯನ್ನು ನೀನೇ ಕೊಡುತಾಯಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಇವತ್ತು ದೇವರ ಪ್ರಸಾದ ಸೇವಿಸಿ ತಮ್ಮವರನ್ನು ಕಳೆದುಕೊಂಡ ಮನೆಯವರು, ಬಂಧುಗಳಲ್ಲಿ ಕಣ್ಣೀರು ಧಾರೆಯಾಗಿ ಹರಿಯುತ್ತಿದೆ. ಎಲ್ಲೆಡೆ ನೀರವ ಮೌನ ಮೈದಾಳಿದೆ. ಮಾರಮ್ಮನ ಸನ್ನಿಧಿಯಲ್ಲಿಯೂ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಅಮ್ಮ.. ತಾಯಿ.. ನಿನ್ನ ನಂಬಿ ಬಂದಿದಕ್ಕೆ ಇಂತಹ ಶಿಕ್ಷೆಯೇ ಎಂದು ನೊಂದವರು ಕೇಳಿಕೊಳ್ಳುತ್ತಿದ್ದಾರೆ.
ಸ್ವಾರ್ಥಕ್ಕಾಗಿ ನ್ಯಾಯ, ಧರ್ಮವನ್ನು ಮರೆತವರು ಪ್ರಸಾದಕ್ಕೆ ವಿಷ ಹಾಕುತ್ತಾರೆ ಎಂದು ಬಹುಶಃ ಮಾರಮ್ಮನಿಗೂ ಗೊತ್ತಿರಲಿಲ್ಲವೇನೋ? ಎಲ್ಲ ಘಟನೆಗಳಿಗೆ ದೇವಾಲಯ ಸಾಕ್ಷಿಯಾಗಿ ನಿಂತಿದೆ. ದೇವಾಲಯವನ್ನು ನೋಡಿದಾಗಲೆಲ್ಲ ಈಗಾಗಲೇ ಸಾವು ನೋವನ್ನು ಅನುಭವಿಸಿದವರ ಮನಸ್ಸು ಕರಗಿ ದುಃಖ ಉಮ್ಮಳಿಸಿ ಬರುತ್ತದೆ. ಜತೆ ಜತೆಯಲ್ಲಿಯೇ ವಿಷವಿಕ್ಕಿದ ಆರೋಪಿಗಳನ್ನು ಸಹಿಸಲೇ ಬಾರದೆಂಬ ಆಕ್ರೋಶವೂ ಮನದಲ್ಲಿ ಮೂಡಿ ಬರುತ್ತದೆ. ಇದು ಸಹಜವೇ..
ವಿಷ ಪ್ರಸಾದ ಸೇವನೆ: ಡಿಸ್ಚಾರ್ಜ್ ಆದವರ ಮನೆಗೆ ತೆರಳಿ ವೈದ್ಯರ ಚಿಕಿತ್ಸೆ
ದುರಂತ ಘಟನೆ ನಡೆದು ಎಂಟು ದಿನಗಳು ಕಳೆದು ಹೋಗಿದೆ ಇದುವರೆಗೆ 17 (ಶನಿವಾರ ಮತ್ತೊಬ್ಬರು ಸಾವಿಗೀಡಾಗಿದ್ದಾರೆ) ಮಂದಿ ಅಮಾಯಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಆಸ್ಪತ್ರೆಯಿಂದ ಚೇತರಿಸಿಕೊಂಡು ಮನೆಯತ್ತ ಬಂದಿದ್ದಾರೆ. ಹೆತ್ತವರನ್ನು, ಮಕ್ಕಳನ್ನು, ಬಂಧು ಬಾಂಧವರನ್ನು ಕಳೆದುಕೊಂಡವರು, ಮನೆಗೆ ದಿಕ್ಕೇ ಇಲ್ಲದಂತಾಗಿ ಶೂನ್ಯ ದೃಷ್ಟಿ ನೆಟ್ಟು ಕೂತಿದ್ದಾರೆ.
ಹರಿದುಬರುತ್ತಿದ್ದ ಅಗಾಧ ಆದಾಯ
ಇವತ್ತು ಇಂತಹದೊಂದು ದುರಂತ ನಡೆಯಲು ಕಾರಣ ದೇವಾಲಯಕ್ಕೆ ಹರಿದು ಬರುತ್ತಿದ್ದ ಆದಾಯವೇ ಎಂಬುದರಲ್ಲಿ ಎರಡು ಮಾತಿಲ್ಲ. ಇಷ್ಟೊಂದು ಆದಾಯ ಬರುವ ದೇವಾಲಯವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಹಣ ಮಾಡಿಕೊಳ್ಳುವ ಹಠಕ್ಕೆ ಬಿದ್ದ ಸಾಲೂರು ಮಠದ ಕಿರಿಯ ಸ್ವಾಮೀಜಿ ಹಾಗೂ ದೇವಾಲಯದ ಟ್ರಸ್ಟಿನ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಮಾಡಿದ ಕುತಂತ್ರವೇ ಇವತ್ತು ನಡೆದ ಭೀಕರ ದುರಂತಕ್ಕೆ ಕಾರಣ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ ಜತೆಗೆ ಮಹದೇವಸ್ವಾಮಿಗೆ ಸಹಾಯ ಮಾಡಿದ ಅಂಬಿಕಾ, ಮಾದೇಶ್, ದೊಡ್ಡಯ್ಯ ಅವರನ್ನು ಜೈಲಿಗೂ ತಳ್ಳಲಾಗಿದೆ. ಇದೊಂದು ನೆಮ್ಮದಿಯ ವಿಷಯವಾಗಿದೆ. ಪೊಲೀಸರು ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ವಿಷ ಪ್ರಸಾದ ಪ್ರಕರಣ: ಸಾವಿನ ಸಂಖ್ಯೆ 17ಕ್ಕೆ ಏರಿಕೆ, ಐವರ ಸ್ಥಿತಿ ಗಂಭೀರ
ಗೋಪುರವನ್ನು ಇಮ್ಮಡಿ ವಿರೋಧಿಸಿದ್ದ
ಇಷ್ಟಕ್ಕೂ ಈ ಪ್ರಕರಣದ ಹಿಂದೆ ಆಗಿದ್ದಾದರೂ ಏನು ಎಂದು ಹುಡುಕುತ್ತಾ ಹೋದರೆ ಟ್ರಸ್ಟ್ನಲ್ಲಿದ್ದ ಎರಡು ಗುಂಪುಗಳ ನಡುವಿನ ವಿರಸವೇ ಇಷ್ಟೆಲ್ಲ ದುರಂತಕ್ಕೆ ಕಾರಣ ಎಂಬುದಂತು ಸತ್ಯ. ಡಿಸೆಂಬರ್ 14ರಂದು ಗೋಪುರ ನಿರ್ಮಾಣ ಮಾಡಲೇ ಬೇಕೆಂದು ಟ್ರಸ್ಟಿನ ಒಂದು ಗುಂಪು ಪ್ರಯತ್ನಿಸಿದ್ದರೆ ಮತ್ತೊಂದು ಗುಂಪು ಗೋಪುರ ನಿರ್ಮಾಣವನ್ನು ವಿರೋಧಿಸಿತ್ತು. ಸುಳ್ವಾಡಿ ಮಾರಮ್ಮನ ದೇವಾಲಯದ ಟ್ರಸ್ಟಿನ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಇದಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಟಸ್ಟ್ ನ ಮೂಲ ಕರ್ತೃ ಚಿನ್ನಪ್ಪ ಮತ್ತು ಅವರ ತಂಡ ಗೋಪುರ ಆಗಲೇಬೇಕೆಂದು ಹಠ ಹಿಡಿದಿತ್ತು.
ವಿಷ ಪ್ರಸಾದ ಆರೋಪಿಗಳು ರಾತ್ರೋರಾತ್ರಿ ಮೈಸೂರು ಜೈಲಿಗೆ ಶಿಫ್ಟ್
ಭಕ್ತರ ಚಿನ್ನವನ್ನೂ ಲಪಟಾಯಿಸುತ್ತಿದ್ದ
ದೇವಾಲಯವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ಮುಂದಾಗಲು ಕಾರಣ ಸುಳ್ವಾಡಿ ಮಾರಮ್ಮ ದೇವಾಲಯದ ಟ್ರಸ್ಟಿನ ಖಾತೆಯಲ್ಲಿದ್ದ ಸುಮಾರು 34 ಲಕ್ಷ ರೂ. ಹಣವೇ ಕಾರಣ. ಈ ಹಣದಿಂದಲೇ ಗೋಪುರ ನಿರ್ಮಿಸಿ ಮಾರಮ್ಮ ದೇವಾಲಯ ರಕ್ಷಣೆ ಮಾಡಬೇಕು ಎಂಬುದು ಟ್ರಸ್ಟಿನ ಒಂದು ಬಣದ ಹಠವಾಗಿತ್ತಲ್ಲದೆ ಅದಕ್ಕೆ ದೇವಾಲಯದ ಮೂಲ ಕರ್ತೃ ಟ್ರಸ್ಟ್ ನ ಚಿನ್ನಪ್ಪ ಶತ ಪಯತ್ನ ಮಾಡಿದ್ದರು. ಆದರೆ ಟ್ರಸ್ಟಿನ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಆ ಟ್ರಸ್ಟಿನ ಅಧ್ಯಕ್ಷ ಸಾಲೂರು ಮಠದ ಕಿರಿಯ ಸ್ವಾಮೀಜಿ ಮಹದೇವಸ್ವಾಮಿ ಟ್ರಸ್ಟಿನ ಆದಾಯದ ಮೇಲೆ ಕಣ್ಣಿಟ್ಟಿದ್ದ, ಅಲ್ಲದೆ ದೇವರ ಹರಕೆ ತೀರಿಸಲು ಭಕ್ತರು ನೀಡುತ್ತಿದ್ದ ಚಿನ್ನಾಭರಣವನ್ನು ಲಪಟಾಯಿಸುತ್ತಿದ್ದ ಎನ್ನಲಾಗಿದೆ.
ಅಂಬಿಕಾಳನ್ನು ಕರೆತಂದಿದ್ದೇ ಕಿರಿಯ ಸ್ವಾಮಿ
ಇನ್ನು ಮೊದಲನೇ ಆರೋಪಿ ಸ್ಥಾನದಲ್ಲಿ ನಿಂತಿರುವ ಇಮ್ಮಡಿ ಮಹದೇವಸ್ವಾಮಿಗೆ ಎಲ್ಲ ರೀತಿಯಲ್ಲಿಯೂ ಒತ್ತಾಸೆಯಾಗಿ ನಿಂತವಳು ದೇವಾಲಯದ ಮ್ಯಾನೇಜರ್ ಮಾದೇಶ್ನ ಪತ್ನಿ ಅಂಬಿಕಾ. ಈಕೆಯನ್ನು ಈಗ್ಗೆ 10 ವರ್ಷದ ಹಿಂದೆ ತಮಿಳುನಾಡಿನಿಂದ ಕರೆದುಕೊಂಡು ಬಂದು ಈ ದೇವಾಲಯಕ್ಕೆ ಕೂರಿಸಿದ್ದೆ ಸ್ವಾಮೀಜಿ. ಅಷ್ಟಕ್ಕೂ ಈ ಸ್ವಾಮೀಜಿ ಈಕೆಯನ್ನೇ ಕರೆದುಕೊಂಡು ಬಂದು ಕೂರಿಸಲು ಕಾರಣವೂ ಇತ್ತು. ಅದು ಅವರಿಬ್ಬರ ನಡುವಿನ ಅಕ್ರಮ ಸಂಬಂಧ ಎನ್ನುವುದು ಈಗ ಬಯಲಾದ ಸತ್ಯ. ಇದೆಲ್ಲ ಗೊತ್ತಿದ್ದೂ ಮಾದೇಶ ಸುಮ್ಮನಿದ್ದ.
ಸ್ವಾಮಿನಿಷ್ಠೆ ತೋರಲು ಮಾಡಿದ ಪ್ರಮಾದ
ಸುಳ್ವಾಡಿ ಸೇರಿದಂತೆ ಹಲವು ಕಡೆ ಮನೆ ಬಾಡಿಗೆ ಮಾಡಿಕೊಂಡಿದ್ದಳಂತೆ ಅಂಬಿಕಾ. ಇದುವರೆಗೆ ಆಕೆ ಸುಮಾರು 11 ಮನೆಯನ್ನು ಬದಲಾಯಿಸಿದ್ದಳು ಎನ್ನಲಾಗಿದೆ. ಕಿರಿಯ ಸ್ವಾಮೀಜಿ ಹೇಳಿದಂತೆ ದೇವಾಲಯದ ಎಲ್ಲಾ ಜವಾಬ್ದಾರಿಯನ್ನು ಅಂಬಿಕಾ ಹೊತ್ತಿದ್ದಳು. ಈಕೆಯ ಗಂಡನನ್ನು ಈ ಟ್ರಸ್ಟಿನ ಮ್ಯಾನೇಜರಾಗಿ ಮಾಡಿದ್ದೂ ಕಿರಿಯ ಸ್ವಾಮೀಜಿಯೇ. ಹೀಗಾಗಿ ಸ್ವಾಮೀಜಿಗೆ ನಿಷ್ಠೆಯಾಗಿರಲು ಅವರು ಮಾಡಿದ ದೊಡ್ಡ ಪ್ರಮಾದ ಇವತ್ತು ಹಲವು ಮನೆಯ ದೀಪವನ್ನು ಆರಿಸುವಂತಾಗಿದೆ. ಇವತ್ತು ಆರೋಪಿಗಳನ್ನು ಪತ್ತೆಹಚ್ಚಿ ಜೈಲಿಗೆ ತಳ್ಳಿರಬಹುದು. ಆದರೆ ಸಾವುನೋವು ಅನುಭವಿಸಿದವರು ಪ್ರತಿನಿತ್ಯ ಸುರಿಸುತ್ತಿರುವ ಕಣ್ಣೀರನ್ನು ಒರೆಸಲು ತಾನೆ ಯಾರಿಂದ ಸಾಧ್ಯ?