ಸಚಿವರು ವಾಸ್ತವ್ಯಕ್ಕೆ ಹೂಡಿದ ಶಾಲೆಯಲ್ಲಿ ನಡೆದ ಎಡವಟ್ಟು ಗೊತ್ತಾ?
ಚಾಮರಾಜನಗರ, ನವೆಂಬರ್ 19: ಶಿಕ್ಷಣ ಸಚಿವರಾದ ಸುರೇಶ್ಕುಮಾರ್ ಅವರು ರಾಜ್ಯದ ಹಲವು ಜಿಲ್ಲೆಗಳ ಶಾಲೆಗಳಲ್ಲಿ ವಾಸ್ತವ್ಯ ಮಾಡುವುದರೊಂದಿಗೆ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಅರಿಯುತ್ತಿದ್ದಾರೆ. ಇದು ಒಂದೆಡೆ ಪ್ರಚಾರ ಪಡೆಯುತ್ತಿದ್ದರೆ, ಮತ್ತೊಂದೆಡೆ ಶಿಕ್ಷಣ ಇಲಾಖೆಗೆ ಚುರುಕು ಮುಟ್ಟಿಸುತ್ತಿದೆ.
ಆದರೆ ಶಿಕ್ಷಣ ಸಚಿವರು ಜಿಲ್ಲೆಯ ಹನೂರು ತಾಲ್ಲೂಕಿನ ಗಡಿಗ್ರಾಮ ಗೋಪಿನಾಥಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಸ್ತವ್ಯಕ್ಕೆ ಬರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಶಿಕ್ಷಕರು ಮಾಡಿದ ಎಡವಟ್ಟು ಇದೀಗ ಸುದ್ದಿಗೆ ಗ್ರಾಸವಾಗಿದೆ.
ಮಕ್ಕಳಿಗೆ ನೀರು ಕುಡಿಯಲು 'ವಾಟರ್ ಬೆಲ್' ವಿರಾಮ: ಕೇರಳದ ಯೋಜನೆ ರಾಜ್ಯದ ಶಾಲೆಗಳಲ್ಲಿಯೂ ಜಾರಿ?
ಅದೇನೆಂದರೆ ಸೋಮವಾರ ವಾಸ್ತವ್ಯ ಹೂಡಲು ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್. ಸುರೇಶ್ ಕುಮಾರ್ ಆಗಮಿಸಿದ್ದರು. ಶಿಕ್ಷಣ ಸಚಿವರು ಶಾಲೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಶಾಲೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಶಿಕ್ಷಕರು ಮುಂದಾಗಿದ್ದರು. ಅದರಂತೆ ಶಾಲೆಯ ಕೊಠಡಿ ಸೇರಿದಂತೆ ಆವರಣವನ್ನು ಗುಡಿಸಿ, ಒರೆಸಿ ಶುಚಿಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ ಸಚಿವರ ಬಳಕೆಗೆಂದು ಮೀಸಲಿಟ್ಟ ಶೌಚಾಲಯವನ್ನು ಶಾಲಾ ಮಕ್ಕಳಿಂದಲೇ ಶಿಕ್ಷಕರು ಸ್ವಚ್ಛಗೊಳಿಸಿದ್ದಾರೆ. ಇದು ಸ್ಥಳೀಯರು ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ಅವರಿಂದಲೇ ಶೌಚಾಲಯವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಸುತ್ತಿರುವುದನ್ನು ನೋಡಿದ ಪೋಷಕರು ಶಿಕ್ಷಕರ ವಿರುದ್ಧ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದೆಷ್ಟು ಸರಿ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.