ತಮಿಳುನಾಡು ಪಡಿತರ ಅಕ್ಕಿ ರಾಜ್ಯದಲ್ಲಿ ಮಾರಾಟ?
ಚಾಮರಾಜನಗರ, ಆಗಸ್ಟ್ 18: ತಮಿಳುನಾಡಿನಲ್ಲಿ ವಿತರಿಸಲಾಗುವ ಪಡಿತರ ಅಕ್ಕಿಯನ್ನು ತಂದು ಕರ್ನಾಟಕದಲ್ಲಿ ಮಾರಾಟ ಮಾಡುತ್ತಿದ್ದ ಕಳ್ಳದಂಧೆಯನ್ನು ಗಡಿಭಾಗದ ಹನೂರು ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು, ಲಾರಿ ಸಹಿತ ಮಾಲನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. [ಸಾರಾಯಿಯನ್ನು ಜ್ಯೂಸ್ ಬಾಟಲಿಯಲ್ಲಿ ಮಾರುತ್ತಿದ್ದವನ ಬಂಧನ]
ತಮಿಳುನಾಡಿನಲ್ಲಿ ಬಡವರಿಗೆ ಹಂಚಲಾಗುವ ಪಡಿತರ ಅಕ್ಕಿಯನ್ನು ಕರ್ನಾಟಕಕ್ಕೆ ತರಲಾಗುತ್ತಿತ್ತು. ಇಲ್ಲಿನ ಮಿಲ್ ಗಳಲ್ಲಿ ಅದಕ್ಕೆ ಪಾಲಿಶ್ ಮಾಡಿಸಿ, ಬಳಿಕ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಜಾಲ ನಡೆಯುತ್ತಿದ್ದು, ಅಕ್ಕಿ ಮೂಟೆಗಳನ್ನು ಎಲ್ಲಿಗೆ ಮತ್ತು ಯಾರಿಗೆ ಮಾರಾಟ ಮಾಡಲು ಕೊಂಡೊಯ್ಯಲಾಗುತ್ತಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. [ಬಂಡೀಪುರದಲ್ಲಿ ಬೇಟೆಗಾರರ ಗುಂಡೇಟಿಗೆ ಗಂಡು ಹುಲಿ ಬಲಿ]
ಹಲವು ಬಾರಿ ಹೀಗೆ ಲಾರಿ ಮೂಲಕ ಕರ್ನಾಟಕಕ್ಕೆ ತಮಿಳುನಾಡಿನ ಪಡಿತರ ಅಕ್ಕಿ ಸರಬರಾಜಾಗಿದೆ ಎಂಬ ಸಂಶಯ ವ್ಯಕ್ತವಾದ ಬೆನ್ನಲ್ಲೇ ಹನೂರು ಪೊಲೀಸ್ ಠಾಣೆ ಎಸ್ಐ ಸಿದ್ದರಾಜು, ಪೇದೆಗಳಾದ ಮಾದಪ್ಪ, ಸಿದ್ಧೇಶ, ಸಿದ್ದರಾಜು, ಶಿವಪ್ರಸಾದ್ ನಾಯಕ್, ರಾಜು, ಮಹೇಶ್, ಕೆ.ಪಿ.ನಾಗೇಂದ್ರ, ಸ್ವಾಮಿ ಅವರನ್ನೊಳಗೊಂಡ ತಂಡ ಹೆಚ್ಚಿನ ನಿಗಾ ವಹಿಸಿತ್ತು. [ಬೈಕ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು]
ಈ ನಡುವೆ ಲಾರಿ (ಕೆ.ಎ. 01 ಸಿ.5111)ಯಲ್ಲಿ ಸುಮಾರು 45 ಕೆ.ಜಿ. ತೂಕದ 300 ಚೀಲ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ತನಿಖಾ ತಂಡ ದಾಳಿ ಮಾಡಿ, ಲಾರಿಯನ್ನು ಅಕ್ಕಿ ಸಹಿತ ವಶಕ್ಕೆ ಪಡೆದಿದೆ. ಲಾರಿ ಚಾಲಕರಾದ ನವೀನ್ ಹಾಗೂ ಅಜ್ಮಲ್ ಎಂಬಿಬ್ಬರನ್ನು ಬಂಧಿಸಿದ್ದಾರೆ.
ಆಹಾರ ನಿರೀಕ್ಷಕರಾದ ಆರ್.ಬಿಸಲಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಾಜೂಗೌಡ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಕ್ಕಿಯನ್ನು ತಮಿಳುನಾಡಿನ ಯಾವ ಪ್ರದೇಶದಿಂದ ತರಲಾಗುತ್ತಿತ್ತು ಮತ್ತು ಎಲ್ಲಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆದರೆ ಅಕ್ರಮ ಅಕ್ಕಿ ದಂಧೆಯ ಹಿಂದಿನ ಸತ್ಯ ಬಯಲಾಗಬಹುದೇನೋ?