ದಕ್ಷಿಣ ಭಾರತದ ಕೊರೊನಾ ಮುಕ್ತ ಏಕೈಕ ಜಿಲ್ಲೆಗೆ ತಮಿಳರೇ ಕಂಟಕವಾಗಿದ್ದಾರಾ?
ಚಾಮರಾಜನಗರ, ಜೂನ್ 05: ದಕ್ಷಿಣ ಭಾರತದಲ್ಲಿಯೇ ಕೊರೊನಾ ಮುಕ್ತ ಜಿಲ್ಲೆ ಎಂಬ ಖ್ಯಾತಿಗೊಳಗಾಗಿರುವ ಚಾಮರಾಜನಗರಕ್ಕೆ ಅಕ್ರಮವಾಗಿ ನುಸುಳಿ ಬರುತ್ತಿರುವ ತಮಿಳರು ಕಂಟಕವಾಗುವ ಭಯ ಶುರುವಾಗಿದೆ.
ಈ ಹಿಂದೆ ಕಳ್ಳಮಾರ್ಗದಲ್ಲಿ ಅರಣ್ಯಗಳನ್ನು ಬಳಸಿ ಬರುತ್ತಿದ್ದ ಕಾರಣಕ್ಕೆ ಆ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಆದರೂ ಕೆಲವು ಕಳ್ಳ ಮಾರ್ಗಗಳನ್ನು ಬಳಸಿಕೊಂಡು ಅಲ್ಲಿನ ಕಾರ್ಮಿಕರು ಒಳನುಗ್ಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲಾಡಳಿತ ಹತ್ತು ಹಲವು ಕ್ರಮಗಳ ಮೂಲಕ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದರೆ, ಕಾರ್ಮಿಕರು ಕಳ್ಳದಾರಿಯನ್ನು ಕಂಡು ಹಿಡಿದುಕೊಂಡು ಒಳಪ್ರವೇಶಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇದೇ ರೀತಿ ಇನ್ನೆಷ್ಟು ಜನ ಬಂದಿದ್ದಾರೋ...
ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರಿದ್ದು, ಈ ಪೈಕಿ ಕೆಲವರು ಅನಧಿಕೃತವಾಗಿ ಜಿಲ್ಲೆಯನ್ನು ಪ್ರವೇಶಿಸುವುದರಿಂದ ಅವರಿಂದ ಸೋಂಕು ಹರಡುವ ಭಯ ಕಾಡತೊಡಗಿದೆ. ಈಗಾಗಲೇ ತಮಿಳುನಾಡಿನಿಂದ 10ಕ್ಕೂ ಹೆಚ್ಚು ಕಾರ್ಮಿಕರು ರಾತ್ರೋರಾತ್ರಿ ಕಳ್ಳಗಿಂಡಿಯ ಮೂಲಕ ಪ್ರವೇಶಿಸಿದ್ದು ಬದನಗುಪ್ಪೆಯಲ್ಲಿ ಸಿಕ್ಕಿ ಬಿದ್ದಿದ್ದರಿಂದ ಕಳ್ಳದಾರಿಯ ಮರ್ಮ ಬಯಲಾಗಿದೆ. ತಕ್ಷಣವೇ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಆದರೆ ಇದೇ ರೀತಿ ಇನ್ನೆಷ್ಟು ಮಂದಿ ಬಂದಿದ್ದಾರೋ ಎಂಬ ಭಯವೂ ಇಲ್ಲದಿಲ್ಲ.
ಸಿಕ್ಕಿಬಿದ್ದ ತಮಿಳು ಕಾರ್ಮಿಕರು
ಇದೀಗ ಜಿಲ್ಲೆಯನ್ನು ಪ್ರವೇಶಿಸಿರುವ ಕಾರ್ಮಿಕರು ಚಾಮರಾಜನಗರ ಜಿಲ್ಲೆ ಬದನಗುಪ್ಪೆ ಬಳಿ ಇರುವ ಗ್ರಾನೈಟ್ ಕಾರ್ಖಾನೆಗೆ ಬಂದವರು ಎನ್ನಲಾಗಿದೆ. ಆದರೆ ತಮಿಳು ಕಾರ್ಮಿಕರನ್ನು ನೋಡಿದ ಸ್ಥಳೀಯ ಕಾರ್ಮಿಕರು ಕೆಲಕಾಲ ಆತಂಕಕ್ಕೆ ಒಳಗಾಗಿ, ಬಳಿಕ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ತಕ್ಷಣ ಎಚ್ಚೆತ್ತ ಆರೋಗ್ಯಾಧಿಕಾರಿಗಳು ಸ್ಕ್ರೀನಿಂಗ್ ಮಾಡಿ ನಂತರ ಆಂಬುಲೆನ್ಸ್ ಮೂಲಕ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಇವರ ಪರೀಕ್ಷಾ ವರದಿ ಬರುವ ತನಕ ಆತಂಕವಂತೂ ಇದ್ದೇ ಇದೆ.
ಕೊರೊನಾ ದೂರವುಳಿಸಲು ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಆರಂಭ
ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ
ಇದುವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲದೆ ದಕ್ಷಿಣ ಭಾರತದಲ್ಲಿಯೇ ಏಕೈಕ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಜಿಲ್ಲೆಗಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಹಸಿರು ವಲಯವಾಗಿ ಕೊರೊನಾ ಮುಕ್ತ ಜಿಲ್ಲೆಯಾಗಿಯೇ ಉಳಿದಿರುವುದು ಚಾಮರಾಜನಗರ ಎಂಬುದು Covid19india.org ನೀಡಿರುವ ಅಧಿಕೃತ ಅಂಕಿ ಅಂಶಗಳಿಂದ ಖಚಿತವಾಗಿದೆ. ಇದುವರೆಗೂ ತೆಲಂಗಾಣದ ವಾರಂಗಲ್ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಕಂಡು ಬಂದಿರಲಿಲ್ಲ. ಆದರೆ ತೆಲಂಗಾಣದ ವಾರಂಗಲ್ ಗ್ರಾಮೀಣ ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಚಾಮರಾಜನಗರ ದಕ್ಷಿಣ ಭಾರತದ ಕೊರೊನಾ ಮುಕ್ತ ಏಕೈಕ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿದೆ.
ಚಾಮರಾಜನಗರಕ್ಕೆ ಕಂಟಕವಾಗುತ್ತಾ ತಮಿಳರ ಅಕ್ರಮ ಪ್ರವೇಶ?
ಆಶಾ ಕಾರ್ಯಕರ್ತೆಯರ ಶ್ಲಾಘನೀಯ ಸೇವೆ
ಚಾಮರಾಜನಗರ ಜಿಲ್ಲಾಡಳಿತ ಕೈಗೊಂಡ ದಿಟ್ಟ ನಿರ್ಧಾರ ಮತ್ತು ಕ್ರಮಗಳಿಗೆ ಜಿಲ್ಲೆಯ ಜನತೆ ಸ್ಪಂದಿಸಿದ ರೀತಿ ಇದಕ್ಕೆ ಕಾರಣವಾಗಿದೆ. ಇದಕ್ಕೆ ಶ್ರಮಿಸಿದ ಜಿಲ್ಲೆಯ ಎಲ್ಲಾ ವರ್ಗದ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ, ಅದರಲ್ಲೂ ಆಶಾ ಕಾರ್ಯಕರ್ತೆಯರ ಸೇವೆ ಮತ್ತು ಕೊರೊನಾ ವಾರಿಯರ್ಸ್ ಗಳ ಶ್ರಮ ಕಾರಣ ಎನ್ನಬಹುದಾಗಿದೆ. ಆದರೆ ಲಾಕ್ ಡೌನ್ ಸಡಿಲಗೊಂಡ ನಂತರ ಇದೀಗ ಹೊರ ರಾಜ್ಯದ ಜನ ಜಿಲ್ಲೆಯನ್ನು ಪ್ರವೇಶಿಸುತ್ತಿರುವುದು ಭಯವನ್ನು ಹುಟ್ಟು ಹಾಕುವಂತೆ ಮಾಡಿದೆ.