ಬಂಡೀಪುರ ವ್ಯಾಪ್ತಿಯಲ್ಲಿ ಪುಂಡಾನೆಯ ಆರ್ಭಟ; ಇಬ್ಬರಿಗೆ ಗಂಭೀರ ಗಾಯ
ಚಾಮರಾಜನಗರ, ಅಕ್ಟೋಬರ್ 23: ತಮಿಳುನಾಡಿನ ಅರಣ್ಯ ಇಲಾಖೆ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಪುಂಡಾನೆಯೊಂದು ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಇಬ್ಬರು ರೈತರು ಗಂಭೀರ ಗಾಯಗೊಂಡು, ಮೂರು ಹಸುಗಳು ಸಾವಿಗೀಡಾಗಿವೆ.
ಕೆಲ ದಿನಗಳಿಂದ ಮಧುಮಲೈ ಹಾಗೂ ಕೆಕ್ಕನಹಳ್ಳ ಸಮೀಪ ಕಾಣಿಸಿಕೊಂಡಿದ್ದ ಪುಂಡಾನೆ ಮಂಗಳವಾರ ರಾತ್ರಿ ಹುಂಡೀಪುರ, ಶಿವಪುರ ಮಾರ್ಗವಾಗಿ ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದತ್ತ ಬಂದಿದೆ. ಬೆಳಗ್ಗೆ ಕೋಡಹಳ್ಳಿ ಸಮೀಪದ ರವಿ ಎಂಬುವರ ಜಮೀನಿನ ಬಳಿ ಸಾಗುವಾಗ ರವಿ ಅವರನ್ನು ಕಾಲಿನಿಂದ ಒದ್ದು ಬಿಸಾಡಿದ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.
ಜಲಪಾತದೊಳಗೆ ಬಿದ್ದು 11 ಆನೆಗಳ ದಾರುಣ ಸಾವು: ಹೃದಯ ಕಲಕುವ ಘಟನೆ
ನಂತರ ಸಮೀಪದ ಕಲ್ಲುಕಟ್ಟೆ ಕೆರೆಯಂಗಳದಲ್ಲಿ ನಿಂತ ಆನೆಯನ್ನು ನೋಡಿದ ಸಾರ್ವಜನಿಕರು ಅದರ ಕೊರಳಲ್ಲಿನ ಪಟ್ಟಿಯನ್ನು ನೋಡಿ ಸಾಕಾನೆ ಎಂದು ಭಾವಿಸಿ ಹತ್ತಿರ ಹೋಗಿದ್ದಾರೆ. ಜನರ ಗದ್ದಲದಿಂದ ರೊಚ್ಚಿಗೆದ್ದ ಆನೆ ಸಮೀಪದಲ್ಲಿದ್ದ ಹಸುವನ್ನು ತಿವಿದು ಸಾಯಿಸಿದೆ. ಶಿವಪುರ ಗ್ರಾಮದ ಸಿದ್ದಯ್ಯ (60) ಎಂಬುವರನ್ನು ಎತ್ತಿ ಬಿಸಾಡಿದೆ. ಇದರಿಂದ ಅವರು ಗಂಭೀರ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಬ್ಬ ರೈತನ ಮೇಲೆ ದಾಳಿ: ನಂತರ ಹಳ್ಳದ ಮಾರ್ಗವಾಗಿ ಸಾಗಿದ ಆನೆ ಹಂಗಳಪುರ ಸಮೀಪ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ನಡೆಸಿದೆ. ಕೆರೆಯತ್ತ ಧಾವಿಸಿ ನೀರಿಗಿಳಿದಾಗ ಆನೆಯನ್ನು ನೋಡಲು ಮುಗಿಬಿದ್ದ ಜನರತ್ತ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ತಾಲೂಕಿನ ಆಲತ್ತೂರು ಗ್ರಾಮದ ಸ್ವಾಮಿ (30) ಎಂಬುವರನ್ನು ಎತ್ತಿ ಬಿಸಾಡಿ ತೀವ್ರ ಗಾಯಗೊಳಿಸಿದೆ. ರಸ್ತೆ ದಾಟುವ ಸಂದರ್ಭದಲ್ಲಿ ಎದುರಾದ ಹಸುವಿಗೆ ಕೋರೆಯಿಂದ ತಿವಿದಿದ್ದು, ಅದು ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಬಂಡೀಪುರ ಕಾಡಂಚಿನಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಮಾಡಿದ್ದೇನು?
ಹೊಸೂರಿನಲ್ಲಿ ಪುಂಡಾಟ ನಡೆಸಿ 8 ಜನರನ್ನು ಕೊಂದಿದ್ದ ಆನೆಯನ್ನು ತಮಿಳುನಾಡಿನ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿ ರೇಡಿಯೋ ಕಾಲರ್ ಅಳವಡಿಸಿತ್ತು. ಮಧುಮಲೈ ಪ್ರದೇಶದಲ್ಲಿದ್ದ ಆನೆ ಗ್ರಾಮಗಳತ್ತ ಆಗಮಿಸಿ ಜನರು ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡಿರುವುದು ಆತಂಕ ತಂದಿದೆ. ಈಗಾಗಲೇ ಅರಣ್ಯ ಇಲಾಖೆಯು ಸೆರೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದು ಪಶುವೈದ್ಯರು ಸ್ಥಳಕ್ಕೆ ಆಗಮಿಸಿದ್ದಾರೆ. ನಾಗರಹೊಳೆಯಿಂದ ಸಾಕಾನೆಗಳನ್ನು ಕರೆಸಲಾಗುತ್ತಿದ್ದು ಪುಂಡಾನೆಯನ್ನು ಸೆರೆಹಿಡಿದು ನಾಗರಹೊಳೆ ವ್ಯಾಪ್ತಿಯ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುವುದು ಎಂದರು.