ತಮಿಳುನಾಡಿನ ಕೊಂಗಳ್ಳಿ ಬೆಟ್ಟಕ್ಕೂ ರಾತ್ರಿ ಪ್ರವೇಶ ಬಂದ್
ಚಾಮರಾಜನಗರ, ಆಗಸ್ಟ್ 06: ತಮಿಳುನಾಡಿನಲ್ಲಿರುವ, ಕನ್ನಡಿಗ ಭಕ್ತರನ್ನೇ ಹೆಚ್ಚಾಗಿ ಹೊಂದಿರುವ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಆವರಣದಲ್ಲಿ ಇನ್ನು ಮುಂದೆ ರಾತ್ರಿ ವಾಸ್ತವ್ಯ ನಿಷೇಧಿಸಲಾಗಿದ್ದು, ಪ್ರವೇಶವೂ ಬಂದ್ ಆಗಲಿದೆ. ಬಂಡೀಪುರ ಮತ್ತು ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸುವ ಕುರಿತು ಚಾಮರಾಜನಗರ ಅರಣ್ಯ ಇಲಾಖೆ ನಿರ್ಧಾರ ತೆಗೆದುಕೊಂಡ ತರುವಾಯ ತಮಿಳುನಾಡು ಈ ನಿರ್ಧಾರ ಕೈಗೊಂಡಿದೆ.
ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯದ ಪ್ರದೇಶದಲ್ಲಿ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದ್ದು, ಈ ದೇವಾಲಯವಿರುವ ಪ್ರದೇಶಕ್ಕೆ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದ ಪ್ರಕಾರ ಸಂಜೆ 6ರ ನಂತರ ದೇವಾಲಯದ ಆವರಣಕ್ಕೆ ಪ್ರವೇಶ ಹಾಗೂ ವಾಸ್ತವ್ಯಕ್ಕೆ ಅವಕಾಶವನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆ ಈಗಾಗಲೇ ದೇವಾಲಯದ ಆವರಣದಲ್ಲಿ ತಮಿಳು ಹಾಗೂ ಕನ್ನಡದಲ್ಲಿ ಸೂಚನಾ ಫಲಕವನ್ನು ಅಳವಡಿಸಿದೆ.
ಮಲೆಮಹದೇಶ್ವರ ವನ್ಯಧಾಮದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ
ದೇವಾಲಯಕ್ಕೆ ಬರುವ ಭಕ್ತರು ಜೂಜಾಟ, ಮದ್ಯ ಸೇವನೆ ಮಾಡುವಂತಿಲ್ಲ. ಒಂದು ವೇಳೆ ಇದನ್ನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ಈ ಬೆಟ್ಟಕ್ಕೆ ವಾಸ್ತವ್ಯಕ್ಕೆಂದೇ ಬಹಳಷ್ಟು ಭಕ್ತರು ಬರುತ್ತಾರೆ ಹಾಗೆ ಬಂದವರು ಹರಕೆ, ಪರಿಷೆಗಳನ್ನು ಮುಗಿಸಿ ದೇವರ ದರ್ಶನ ಮಾಡಿಕೊಂಡು ಮಾರನೇ ದಿನ ಹಿಂದಿರುಗುತ್ತಿದ್ದರು. ಹೀಗಾಗಿ ದೇವಾಲಯದ ಆವರಣದಲ್ಲಿ ಭಕ್ತರ ವಾಸ್ತವ್ಯಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅರಣ್ಯ ಇಲಾಖೆಯ ಆದೇಶದಿಂದಾಗಿ ಕೊಂಗಳ್ಳಿ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರಿಗೆ ಭಾರೀ ನಿರಾಸೆಯಾಗಿರುವುದಂತು ನಿಜ.
ಇದಲ್ಲದೆ ಕೊಂಗಳ್ಳಿ ದೇವಾಲಯದ ಆವರಣದಲ್ಲಿ ಬೈಕ್ ಪ್ರವೇಶಕ್ಕೆ 20 ರೂ. ಕಾರು, ಅದಕ್ಕಿಂತ ದೊಡ್ಡ ವಾಹನಗಳಿಗೆ 50 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಇವೆಲ್ಲ ಅಂಶಗಳನ್ನು ದೇವಾಲಯದ ಆವರಣದಲ್ಲಿನ ಸೂಚನಾ ಫಲಕದಲ್ಲಿ ಹಾಕಲಾಗಿದೆ.
ಇದೆಲ್ಲದರ ನಡುವೆ ಮತ್ತೊಂದೆಡೆ ಕೊಂಗಳ್ಳಿ ಬೆಟ್ಟದಲ್ಲಿ ರಾತ್ರಿ ಸಂಚಾರ, ವಾಸ್ತವ್ಯ ಬಂದ್ ಮಾಡಿರುವುದನ್ನು ಕೆಲವರು ಸ್ವಾಗತಿಸಿದ್ದು, ಇದಕ್ಕೆ ಕಾರಣವಿದ್ದು, ಧಾರ್ಮಿಕ ಕ್ಷೇತ್ರವಾದ ಕೊಂಗಳ್ಳಿ ಬೆಟ್ಟಕ್ಕೆ ಸಾವಿರಾರು ಮಂದಿ ತೆರಳುತ್ತಾರೆ. ಹೀಗೆ ತೆರಳುವ ಶೇ. 40 ರಷ್ಟು ಮಂದಿ, ದೇವರ ದರ್ಶನದ ನೆಪದಲ್ಲಿ ಜೂಜಾಟ ವಾಡಲು ಹಾಗೂ ಮದ್ಯ ಸೇವನೆಗೆ ತೆರಳುತ್ತಿದ್ದರು ಎಂಬ ಆರೋಪವೂ ಇದೆ. ಆದರೆ ತಮಿಳುನಾಡಿನ ಅರಣ್ಯ ಇಲಾಖೆಯ ಈ ಕ್ರಮವನ್ನು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ.