ಇಮ್ಮಡಿ ಮಹದೇವಸ್ವಾಮಿಗೆ ಖಾತೆ ಮಾಡಿಕೊಟ್ಟವರ ಅಮಾನತು
ಚಾಮರಾಜನಗರ, ಜೂನ್ 1: ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸೂಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ದುರಂತ ಪ್ರಕರಣದ ಪ್ರಮುಖ ಆರೋಪಿ ಜೈಲಿನಲ್ಲಿರುವ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಜಾಗದ ಖಾತೆ ಮಾಡಿಕೊಟ್ಟಿದ್ದ ಕಂದಾಯ ಇಲಾಖೆಯ ಮೂವರು ನೌಕರರನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸೂಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಅಕ್ರಮವಾಗಿ ಆಸ್ತಿ ವರ್ಗಾವಣೆಯಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಅಲ್ಲದೆ ಜೈಲಿನಲ್ಲಿದ್ದುಕೊಂಡೇ ಆತ ಹೇಗೆ ಜಾಗದ ಖಾತೆಯನ್ನು ಮಾಡಿಕೊಂಡ ಎಂಬ ಬಗ್ಗೆಯೂ ಚರ್ಚೆಗಳು ನಡೆದಿದ್ದವು.
ಜೈಲಿನಲ್ಲಿದ್ದೇ ಜಮೀನು ಖಾತೆ ಮಾಡಿಸಿಕೊಂಡ ಇಮ್ಮಡಿ ಮಹದೇವಸ್ವಾಮಿ?
ಈ ಕುರಿತಂತೆ ತನಿಖೆ ನಡೆಸಿದಾಗ ಕಂದಾಯ ಇಲಾಖೆ ನೌಕರರ ಪಾತ್ರ ಇರುವುದು ಸಾಬೀತಾಗಿರುವುದರಿಂದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕೊಳ್ಳೇಗಾಲ ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಂದಾಯ ನಿರೀಕ್ಷಕ ನಿರಂಜನ್, ಗ್ರಾಮಲೆಕ್ಕಿಗರಾದ ಸತೀಶ್ ಹಾಗೂ ಹೇಮಾ ಎಂಬ ಮೂವರು ನೌಕರರನ್ನು ಅಮಾನತು ಮಾಡಿದ್ದಾರೆ.
ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ಸೇರಿದ ಜಮೀನು, ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಯ ಹೆಸರಿಗೆ ವರ್ಗಾವಣೆಯಾಗಿತ್ತು. ಇದು ಮೇ 5ರಂದು ಬೆಳಕಿಗೆ ಬಂದಿತ್ತಲ್ಲದೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಸುಳ್ವಾಡಿ ವಿಷ ಪ್ರಸಾದ ಪ್ರಕರಣ: 6163 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಇದೀಗ ಈ ಅಕ್ರಮಕ್ಕೆ ಕಾರಣಕರ್ತರು ಯಾರು ಎಂಬುದು ಸಾಬೀತಾಗಿರುವ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಆರೋಪಿ ಇಮ್ಮಡಿ ಮಹದೇವ ಸ್ವಾಮಿ ಸೇರಿದಂತೆ ನಾಲ್ವರು ಸೂಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯವನ್ನು ತಮ್ಮ ವಶಕ್ಕೆ ಪಡೆಯುವ ಸಲುವಾಗಿ ಪ್ರಸಾದದಲ್ಲಿ ವಿಷಬೆರೆಸಿ ಸಾವು ನೋವಿಗೆ ಕಾರಣರಾಗಿದ್ದರು. ಈ ಸಂಬಂಧ ಇವರು ಜೈಲು ಪಾಲಾಗಿದ್ದು, ಇನ್ನೂ ಜಾಮೀನು ಸಿಕ್ಕಿಲ್ಲ. ಹೀಗಿರುವಾಗಲೇ ಮಹದೇವಸ್ವಾಮಿ ಜೈಲಿನಲ್ಲಿದ್ದುಕೊಂಡೇ ಮಠದ ಜಮೀನನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳುವ ಮೂಲಕ ತನ್ನ ಕರಾಮತ್ತು ತೋರಿಸಿದ್ದನು. ಇದೀಗ ಈತನೊಂದಿಗೆ ಶಾಮೀಲಾಗಿರುವ ಕಂದಾಯ ಇಲಾಖೆ ಮೂವರು ನೌಕರರು ಅಮಾನತಾಗಿದ್ದಾರೆ.