ಅ.20ರಿಂದ ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ಆರಂಭಗೊಳ್ಳಲಿದೆ ಪೂಜೆ
ಚಾಮರಾಜನಗರ, ಸೆಪ್ಟೆಂಬರ್ 24: 17 ಮಂದಿಯ ಸಾವಿಗೆ ಕಾರಣವಾದ ವಿಷ ಪ್ರಸಾದದ ದುರಂತದ ಬಳಿಕ ಬೀಗ ಜಡಿಯಲಾಗಿದ್ದ ಚಾಮರಾಜನಗರ ಜಿಲ್ಲೆಯ ಹನೂರಿನ ಕಿಚ್ಚುಗುತ್ತಿ ಮಾರಮ್ಮನ ದೇವಾಲಯ ಮತ್ತೆ ತೆರೆಯಲಿದ್ದು, ಅಕ್ಟೋಬರ್ 20ರಿಂದ ದೇಗುಲದಲ್ಲಿ ಪೂಜೆ ಪುನಸ್ಕಾರಗಳು ಆರಂಭವಾಗಲಿವೆ.
ನಿನ್ನೆ ವಿಧಾನಸಭೆಯಲ್ಲಿ ಈ ಕುರಿತು ಉತ್ತರಿಸಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, "ಅ.20ರಂದು ಕಿಚ್ಚುಗುತ್ತಿ ಮಾರಮ್ಮನ ದೇವಾಲಯವನ್ನು ತೆರೆಯಲು ನಿರ್ಧರಿಸಲಾಗಿದೆ. ವಿಧಿ ವಿಧಾನಗಳೊಂದಿಗೆ ಪ್ರಾಯಶ್ಚಿತ್ತ ಪೂಜೆ, ಹೋಮ, ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಆನಂತರ ಸಾರ್ವಜನಿಕರಿಗೆ ದೇವಾಲಯಕ್ಕೆ ಅವಕಾಶ ನೀಡಲಾಗುವುದು" ಎಂದು ತಿಳಿಸಿದ್ದಾರೆ. ಇದೀಗ ಎರಡೂವರೆ ವರ್ಷಗಳ ನಂತರ ದೇವಾಲಯವು ಭಕ್ತರಿಗೆ ತೆರೆದುಕೊಳ್ಳುತ್ತಿದೆ.
2018ರ ಡಿಸೆಂಬರ್ 14ರಂದು ನಡೆದಿದ್ದ ಘಟನೆ
2018ರ ಡಿ.14ರಂದು ಈ ಕರಾಳ ಘಟನೆಯು ನಡೆದಿತ್ತು. ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಗೋಪುರ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಂದರ್ಭದಲ್ಲಿ ವಿಷಮಿಶ್ರಿತ ಪ್ರಸಾದ ವಿತರಿಸಲಾಗಿತ್ತು. ಹಲವು ಗ್ರಾಮಗಳಿಂದ ಬಂದಿದ್ದ ಜನರು ಈ ಪ್ರಸಾದವನ್ನು ಸೇವಿಸಿದ್ದರು. ಈ ದುರಂತದಲ್ಲಿ 17 ಮಂದಿ ಮೃತಪಟ್ಟು, 110ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು.
ನಾಲ್ವರನ್ನು ಬಂಧಿಸಿದ್ದ ತನಿಖಾ ತಂಡ
ಈ ದುರ್ಘಟನೆಗೆ ಸಂಬಂಧಿಸಿದಂತೆ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಕೊಳ್ಳೇಗಾಲ ಪೊಲೀಸ್ ಇಲಾಖೆಯ ಡಿವೈಎಸ್ ಪಿ ಪುಟ್ಟಮಾದಯ್ಯರವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಡಿಸೆಂಬರ್ 19ರಂದು ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ, ಟ್ರಸ್ಟ್ನ ವ್ಯವಸ್ಥಾಪಕ ಮಾದೇಶ್, ಆತನ ಪತ್ನಿ ಅಂಬಿಕಾ ಮತ್ತು ದೊಡ್ಡಯ್ಯ ತಂಬಡಿ ಎಂಬುವವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ದೇವಾಲಯದ ಆದಾಯದ ಮೇಲೆ ನಿಯಂತ್ರಣಕ್ಕಾಗಿ ಈ ಕೃತ್ಯ ಎಸಗಿದ್ದು ತನಿಖೆಯಿಂದ ಬಹಿರಂಗಗೊಂಡಿತ್ತು. ನಾಲ್ಬರು ಆರೋಪಿಗಳೂ ಬಂಧನದಲ್ಲಿದ್ದಾರೆ.
ಅಂದಿನಿಂದ ನಡೆದಿಲ್ಲ ಪೂಜೆ
ಈ ದುರಂತ ನಡೆದ ನಂತರ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಮುಜರಾಯಿ ಇಲಾಖೆ ವಶಕ್ಕೆ ಬಂದಿತ್ತು. ಆದರೆ ಆ ನಂತರವೂ ಪೂಜೆ ಪುನಸ್ಕಾರ ಆರಂಭಗೊಂಡಿರಲಿಲ್ಲ. ಇಲ್ಲಿ ಒಮ್ಮೆ ಭೇಟಿ ನೀಡಿದ್ದ ಸಚಿವ ಸುರೇಶ್ ಕುಮಾರ್ ಅವರು ದೇಗುಲವನ್ನು ಶೀಘ್ರವೇ ತೆರೆಯುವುದಾಗಿ ಭರವಸೆ ನೀಡಿದ್ದರು. ಇದೀಗ ಎರಡು ವರ್ಷ, ಒಂಬತ್ತು ತಿಂಗಳ ನಂತರ ದೇಗುಲ ತೆರೆಯುತ್ತಿದೆ.
Recommended Video
ಅ.20ರಿಂದ ತೆರೆಯಲಿದೆ ಮಾರಮ್ಮನ ದೇಗುಲ
ಹನೂರು ಶಾಸಕ ಆರ್ ನರೇಂದ್ರ ಅವರು ವಿಧಾನಸಭೆಯಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, "ಅ.20ರಂದು ಕಿಚ್ಚುಗುತ್ತಿ ಮಾರಮ್ಮನ ದೇವಾಲಯವನ್ನು ತೆರೆಯಲು ನಿರ್ಧರಿಸಲಾಗಿದೆ. ವಿಧಿ ವಿಧಾನಗಳೊಂದಿಗೆ ಪ್ರಾಯಶ್ಚಿತ್ತ ಪೂಜೆ, ಹೋಮ, ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಆನಂತರ ಸಾರ್ವಜನಿಕರಿಗೆ ದೇವಾಲಯಕ್ಕೆ ಅವಕಾಶ ನೀಡಲಾಗುವುದು" ಎಂದು ತಿಳಿಸಿದ್ದಾರೆ.