ಕರಾಳ ಘಟನೆಯ ಸುಳ್ವಾಡಿ ಮಾರಮ್ಮ ದೇವಾಲಯ ತೆರೆಯುವುದಾಗಿ ಭರವಸೆ
ಚಾಮರಾಜಪೇಟೆ, ನವೆಂಬರ್ 19: ಕರಾಳ ಘಟನೆ ನಡೆದ ಚಾಮರಾಜಪೇಟೆ ಜಿಲ್ಲೆ ಸುಳ್ವಾಡಿಯ ಕಿಚ್ಚುಗುತ್ ಮಾರಮ್ಮ ದೇವಾಲಯವನ್ನು ಮತ್ತೆ ತೆರೆಯಲು ಯತ್ನಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಪ್ರಸಾದದಲ್ಲಿ ವಿಷ ಸೇವಿಸಿ 17 ಜನರನ್ನು ಕೊಂದ ಘಟನೆಗೆ ಸಾಕ್ಷಿಯಾಗಿದ್ದ ಚಾಮರಾಜಪೇಟೆ ಜಿಲ್ಲೆ ಸುಳ್ವಾಡಿಯ ಕಿಚ್ಚುಗುತ್ ಮಾರಮ್ಮ ದೇವಾಲಯಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದರು.
ಈ ಸಮಯ ಸುಳ್ವಾಡಿಯ ಮಾರಮ್ಮ ದೇವಾಲಯ ಭಕ್ತರು ಸುರೇಶ್ ಕುಮಾರ್ ಅವರನ್ನು ಭೇಟಿ ಆಗಿ, ದೇವಾಲಯವನ್ನು ಮತ್ತೆ ತೆರೆಯುವಂತೆ ಮನವಿ ಮಾಡಿದರು. ಸಚಿವರ ಎದುರು ಕಣ್ಣಿರಿಟ್ಟು ಮಾರಮ್ಮ ದೇವರಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡಿರೆಂದು ಕೇಳಿಕೊಂಡರು.
ಭಕ್ತರ, ಗ್ರಾಮಸ್ಥರ ಮನವಿ ಆಲಿಸಿದ ಸುರೇಶ್ ಕುಮಾರ್, ಆದಷ್ಟು ಬೇಗ ಮಾರಮ್ಮ ದೇವಾಲಯವನ್ನು ಮತ್ತೆ ತೆರೆಯಲು ಅಗತ್ಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಕಳೆದ ವರ್ಷ ಡಿಸೆಂಬರ್ 14 ರಂದು ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮದ ವೇಳೆ ಪ್ರಸಾದಕ್ಕೆ ವಿಷ ಹಾಕಿದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ದೇಶದಾದ್ಯಂತ ಸುದ್ದಿಯಾಗಿತ್ತು. ಪ್ರಕರಣ ಸಂಬಂಧ ಓರ್ವ ಮಹಿಳೆ ಮತ್ತು ಸ್ವಾಮೀಜಿ ಹಾಗೂ ಇನ್ನೂ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಈ ಘಟನೆ ನಡೆದ ನಂತರ ದೇವಾಲಯವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಂಡು, ದೇವಾಲಯಕ್ಕೆ ಬೀಗ ಜಡಿದಿದೆ. ಅಂದಿನಿಂದ ದೇವಾಲಯದಲ್ಲಿ ಯಾವುದೇ ಪೂಜೆ ನಡೆದಿಲ್ಲ.