ಅ.20ರ ಬದಲಿಗೆ 24ರಿಂದ ಭಕ್ತರಿಗೆ ಕಿಚ್ಚಗುತ್ತಿ ಮಾರಮ್ಮನ ದರ್ಶನ
ಚಾಮರಾಜನಗರ, ಅಕ್ಟೋಬರ್ 13: ಹದಿನೇಳು ಮಂದಿಯ ಸಾವಿಗೆ ಕಾರಣವಾದ ವಿಷ ಪ್ರಸಾದದ ದುರಂತದ ಬಳಿಕ ಮುಚ್ಚಿದ್ದ ಚಾಮರಾಜನಗರ ಜಿಲ್ಲೆಯ ಹನೂರಿನ ಕಿಚ್ಚಗುತ್ತಿ ಮಾರಮ್ಮನ ದೇವಾಲಯ ತೆರೆಯುವ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ.
ಈ ಹಿಂದೆ ಅಕ್ಟೋಬರ್ 20ರಿಂದ ದೇಗುಲದಲ್ಲಿ ಪೂಜೆ ಪುನಸ್ಕಾರಗಳು ಆರಂಭವಾಗಲಿವೆ ಎಂದು ತಿಳಿಸಲಾಗಿತ್ತು. ಇದೀಗ ಧಾರ್ಮಿಕ ಕೈಂಕರ್ಯ ನಡೆಸಬೇಕಾಗಿರುವುದರಿಂದ ಅ.20ರ ಬದಲಿಗೆ ಅ.24ರಿಂದ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಈಗಾಗಲೇ ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಲ್ಲಿ ಮಾಡಿಕೊಳ್ಳಲಾಗಿರುವ ಸಿದ್ಧತೆಯನ್ನು ಪರಿಶೀಲಿಸಿ, ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ರಸ್ತೆ, ಶೌಚಾಲಯ, ನೀರು ಸೇರಿದಂತೆ ಮೂಲ ಸೌಕರ್ಯಕ್ಕೆ ಸಮಸ್ಯೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅ.20ರಿಂದ ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ಆರಂಭಗೊಳ್ಳಲಿದೆ ಪೂಜೆ
ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯವನ್ನು ಮತ್ತೆ ತೆರೆದು ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿ ಕೊಡಲು ರಾಜ್ಯ ಸರ್ಕಾರದಿಂದ ಆದೇಶವಾಗಿರುವುದರಿಂದ ಅ.20 ರಿಂದ 24 ರವರೆಗೆ ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಆಗಮಿಕರ ಸಮ್ಮುಖದಲ್ಲಿ ವಿವಿಧ ವಿಧಿ ವಿಧಾನಗಳು, ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದ್ದು, ಅ.24ರಂದು ಕುಂಭಾಭಿಷೇಕ ನೆರವೇರಲಿದೆ. ಆ ನಂತರ ಸಾರ್ವಜನಿಕರು ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುವುದಾಗಿ ಹೇಳಿದರು.
Recommended Video
ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಿಂದ ಸಮರ್ಪಕ ರಸ್ತೆ, ಬೀದಿ ದೀಪ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರಲ್ಲದೆ, ದೇವಸ್ಥಾನಕ್ಕೆ ಬಣ್ಣ ಬಳಿಯುತ್ತಿರುವ ಕಾರ್ಯವನ್ನು ವೀಕ್ಷಿಸಿ, ದೇವಾಲಯದ ಸಿಸಿ ಟಿ.ವಿ. ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ದೇಗುಲಕ್ಕೆ ಭೇಟಿ ನೀಡಿದ್ದ ಸಂದರ್ಭ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಕುನಾಲ್, ಪ್ರಭಾರ ಹನೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಾಜು, ಉಪ ತಹಶೀಲ್ದಾರ್ ಸುರೇಖಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಂದ್ರ, ಗ್ರಾಮ ಲೆಕ್ಕಾಧಿಕಾರಿ ವಿನೋದ್ ಇನ್ನಿತರರು ಇದ್ದರು.