ಚಾಮರಾಜನಗರಕ್ಕೆ ಬಂತು ಕಬ್ಬು ಕಟಾವು ಯಂತ್ರ: ರೈತರಿಗೆ ತಂತು ಖುಷಿ
ಚಾಮರಾಜನಗರ, ಸೆಪ್ಟೆಂಬರ್ 20: ಕಬ್ಬು ಬೆಳೆಗಾರರಿಗೆ ತಲೆನೋವಾಗಿದ್ದ ಕಬ್ಬು ಕಟಾವು ಇನ್ನು ಮುಂದೆ ಸುಲಲಿತವಾಗಲಿದೆ. ಇದುವರೆಗೆ ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರು ಸಿಗದೆ ಪರದಾಡುತ್ತಿದ್ದ ಬೆಳೆಗಾರರು ಈ ಕಬ್ಬು ಕಟಾವು ಯಂತ್ರದತ್ತ ಒಲವು ತೋರುತ್ತಿದ್ದಾರೆ.
ರಾಜ್ಯದಲ್ಲಿ ಹಳೇ ಮೈಸೂರು ವ್ಯಾಪ್ತಿಯ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನದ ಕೆಲವೆಡೆ ರೈತರು ಕಬ್ಬು ಬೆಳೆಯುತ್ತಿದ್ದು, ಕಟಾವು ವೇಳೆ ಕೂಲಿ ಕಾರ್ಮಿಕರು ಸಿಗದೆ ಪರದಾಡುವುದು ಪ್ರತಿ ವರ್ಷವೂ ನಡೆಯುತ್ತಲೇ ಬರುತ್ತಿದೆ. ಈಗಾಗಲೇ ರಾಜ್ಯದ ಬೆಳಗಾವಿಯಲ್ಲಿ ಕಬ್ಬು ಕಟಾವು ಮಾಡುವ ಯಂತ್ರ ಬಂದಿದ್ದು, ಅದರ ಮೂಲಕವೇ ಹೆಚ್ಚಿನ ರೈತರು ಕಬ್ಬನ್ನು ಕಟಾವು ಮಾಡುತ್ತಿದ್ದಾರೆ. ಇದರಿಂದ ಬಹಳಷ್ಟು ರೈತರ ಸಮಸ್ಯೆ ಬಗೆಹರಿದಂತಾಗಿದೆ. ಆದರೆ ಯಂತ್ರವನ್ನು ಹಳೇ ಮೈಸೂರಿತ್ತ ತರುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ.
ಸರಸರನೆ ಅಡಿಕೆ ಮರವೇರಲು ಬೈಕ್ ಆವಿಷ್ಕರಿಸಿದ ಬಂಟ್ವಾಳದ ಕೃಷಿಕ
ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕಬ್ಬು ಕಟಾವು ಮಾಡುವ ಯಂತ್ರವನ್ನು ತಂದು ಕಬ್ಬು ಕಟಾವು ಮಾಡುವ ಪ್ರಯೋಗ ನಡೆಯುತ್ತಿದೆ. ಕುಂತೂರು ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯವರ ಕೋರಿಕೆ ಮೇರೆಗೆ ಒಪ್ಪಂದ ಮಾಡಿಕೊಂಡು ಬೆಳಗಾವಿ ಜಿಲ್ಲೆಯಿಂದ ಕಬ್ಬನ್ನು ಕಟಾವು ಮಾಡುವ ಯಂತ್ರವನ್ನು ಮಾಲೀಕ ಸುಪ್ರೀತ್ ಗನಿ ಅವರು ತಂದಿದ್ದು, ಈಗಾಗಲೇ ಕಬ್ಬನ್ನು ಕಟಾವು ಮಾಡುತ್ತಿದ್ದಾರೆ.
2016ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇದರ ಪ್ರಥಮ ಪ್ರಯೋಗ ಮಾಡಲಾಗಿದ್ದು, ಯಂತ್ರವು ಕಬ್ಬನ್ನು 8 ಇಂಚುಗಳಷ್ಟು ತುಂಡಾಗಿ ಕತ್ತರಿಸಿಕೊಳ್ಳುತ್ತದೆ. ಇದನ್ನು ತನ್ನೊಡಲಿನಲ್ಲೇ ಸಂಗ್ರಹಿಸುತ್ತದೆ. ಇದರ ಜೊತೆಯಲ್ಲೇ ಎನ್ಫೀಡರ್ ಎಂಬ ಟ್ರ್ಯಾಕ್ಟರ್ ಮಾದರಿಯ ವಾಹನಗಳು ಇದನ್ನು ಸಂಗ್ರಹಿಸಿಕೊಳ್ಳುತ್ತವೆ. ನಂತರ ಇದನ್ನು ತನ್ನ ಹೈಡ್ರಾಲಿಕ್ ಟ್ರಾಲಿಗಳ ಮೂಲಕ 10 ಟನ್ ತುಂಬುವ ಟ್ರ್ಯಾಕ್ಟರ್ ಗೆ ತುಂಬಲಾಗುತ್ತದೆ. ನಂತರ ನೇರವಾಗಿ ಸಕ್ಕರೆ ಕಾರ್ಖಾನೆಗೆ ರವಾನಿಸಲಾಗುತ್ತದೆ.
ಮೈಸೂರು ಪಾಲಿಕೆಯಲ್ಲಿ ಮೂಲೆಗುಂಪಾದ ಶಕ್ತಿಮಾನ್!
ಈ ಯಂತ್ರವು ಕಬ್ಬಿನ ಗದ್ದೆಗೆ ಹೋಗಲು ಗದ್ದೆ ಒಣಗಿರಬೇಕು. ತೇವಾಂಶ ಕಡಿಮೆ ಇರಬೇಕು. ಪ್ರತಿ ಗಂಟೆಗೆ ಇದು 20 ಟನ್ ಕಬ್ಬು ಕತ್ತರಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಪ್ರತಿ ಟನ್ ಕಬ್ಬಿಗೆ 430 ರೂ. ದರವನ್ನು ನಿಗದಿಗೊಳಿಸಲಾಗಿದೆ. ಇದರೊಂದಿಗೆ ಸಾರಿಗೆ ವೆಚ್ಚವಾಗಿ 100 ರೂ. ದರ ನಿಗದಿ ಮಾಡಲಾಗಿದೆ. ಒಟ್ಟು ಪ್ರತಿ ಟನ್ಗೆ 530 ರೂ. ಕಟಾವು ಸಾರಿಗೆ ಸೇರಿ ಖರ್ಚಾಗುತ್ತದೆ. ಇದೇ ಕಬ್ಬನ್ನು ಆಳುಗಳ ಮೂಲಕ ಕತ್ತರಿಸಿದ್ದಲ್ಲಿ ಪ್ರತಿಟನ್ ಗೆ 1000 ರೂ. ಹಣವನ್ನು ವ್ಯಯಿಸಬೇಕು. ಇದರೊಂದಿಗೆ ಕಬ್ಬಿನ ಹಸಿ ಸೋಗೆಯನ್ನು ಪುಡಿ ಮಾಡಿ ಭೂಮಿಯಲ್ಲೇ ಚೆಲ್ಲುವುದರಿಂದ ಇದೂ ಸಾವಯವ ಗೊಬ್ಬರವಾಗುತ್ತದೆ ಎನ್ನುವುದು ಯಂತ್ರ ಹೊಂದಿರುವ ಮಾಲೀಕರು ನೀಡುವ ಮಾಹಿತಿ.
ಆನಂದ ಮಹೀಂದ್ರಾ ಆಕರ್ಷಿಸಿದ ಅಡಿಕೆ ಮರವೇರುವ ಬೈಕ್
ಒಂದು ವೇಳೆ ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದೇ ಆದರೆ ಮುಂದಿನ ದಿನಗಳಲ್ಲಿ ಬೆಳೆಗಾರರಿಗೆ ಭಾರೀ ಪ್ರಮಾಣದಲ್ಲಿ ಅನುಕೂಲವಾಗಲಿದೆ.