ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ: ಸರಕಾರಕ್ಕೆ ವಾಟಾಳ್ ನಾಗರಾಜ್ ವಿಶಿಷ್ಟ ಆಗ್ರಹ
ಚಾಮರಾಜನಗರ, ಜೂನ್ 11: ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗೂ ಮುನ್ನ ಕನ್ನಡ ಚಳುವಳಿಗಾರ ಮತ್ತು ಮಾಜಿ ಶಾಸಕ ವಾಟಾಳ್ ನಾಗರಾಜ್ ಸರಕಾರಕ್ಕೆ ವಿಶಿಷ್ಟ ಆಗ್ರಹವೊಂದನ್ನು ನೀಡಿದ್ದಾರೆ.
Recommended Video
"ಪರೀಕ್ಷೆ ನಡೆಸಲೇ ಬೇಕೆನ್ನುವುದು ಸರಕಾರದ ನಿರ್ಧಾರವಾದರೆ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಿತದೃಷ್ಟಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು"ಎಂದು ವಾಟಾಳ್ ಆಗ್ರಹಿಸಿದ್ದಾರೆ.
"ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಪಾಸ್ ಮಾಡಿ"
ಪರೀಕ್ಷೆ ನಡೆಸುವುದರ ವಿರುದ್ದ ಪ್ರತಿಭಟನೆ ನಡೆಸಿದ ವಾಟಾಳ್, "ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಹೆಸರಿನಲ್ಲಿ ಐವತ್ತು ಲಕ್ಷ ಮತ್ತು ಶಿಕ್ಷಕರ ಹೆಸರಿನಲ್ಲಿ 25 ಲಕ್ಷ ರೂಪಾಯಿ ಡೆಪಾಸಿಟ್ ಅನ್ನು ಇಡಬೇಕು"ಎಂದು ವಾಟಾಳ್ ನಾಗರಾಜ್, ಸರಕಾರವನ್ನು ಆಗ್ರಹಿಸಿದ್ದಾರೆ.
"ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆ ನಡೆಸುವುದನ್ನು ತಮ್ಮ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ, ಅದು ತಪ್ಪು" ಎಂದಿರುವ ವಾಟಾಳ್, "ಕೊರೊನಾ ಜೊತೆ ಸರಸ ಬೇಡ" ಎನ್ನುವ ಎಚ್ಚರಿಕೆಯನ್ನು ಸರಕಾರಕ್ಕೆ ನೀಡಿದ್ದಾರೆ.
"ಇದೊಂದು ಅಪರೂಪದ ಸನ್ನಿವೇಶ. ಪರೀಕ್ಷೆಗಿಂತ ವಿದ್ಯಾರ್ಥಿಗಳ ಜೀವ ಮುಖ್ಯ. ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಹಾಗೇ ಪಾಸ್ ಮಾಡಬೇಕು" ಎಂದು ವಾಟಾಳ್ ಡಿಮಾಂಡ್ ಮಾಡಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವುದರಿಂದ ಎಸ್ಎಸ್ಎಲ್ಸಿ, ದ್ವಿತೀಯ, ಅಂತಿಮ ಡಿಗ್ರಿ, ಇಂಜಿನಿಯರಿಂಗ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಲ್ಲದೆ ತೇರ್ಗಡೆ ಮಾಡಿ, ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಎರಡು ದಿನಗಳ ಹಿಂದೆ ಎಚ್ಚರಿಕೆಯನ್ನು ನೀಡಿದ್ದರು.