ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ ಸಾಧ್ಯತೆ; ಸುರೇಶ್ ಕುಮಾರ್
ಚಾಮರಾಜನಗರ, ಮೇ 15: ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಗೊಳಿಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ ಶಿಕ್ಷಣ ಸಚಿವ ಸುರೇಶ್ ಕುಮಾರ್.
ಇಂದು ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಈ ಕುರಿತು ಮಾತನಾಡಿ, "ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಹಿರಿಯರೊಂದಿಗೆ ಚರ್ಚಿಸಲಾಗಿದೆ. ಪರೀಕ್ಷೆ ನಡೆಸಬೇಕು ಎನ್ನುವುದು ಸರ್ಕಾರದ ಅಭಿಪ್ರಾಯ. ಕೊರೊನಾದಿಂದಾಗಿ ಶಿಕ್ಷಣ ಇಲಾಖೆಗೂ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ತರಗತಿಗಳು ಹೇಗಿರಬೇಕು ಎಂದು ಚರ್ಚೆ ನಡೆಸುತ್ತಿದ್ದೇವೆ. ನಾಳೆ ಶಿಕ್ಷಕರ ಮತ್ತು ಪದವೀದರ ಕ್ಷೇತ್ರದ ಪರಿಷತ್ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದೇನೆ" ಎಂದು ಹೇಳಿದರು.
ಒಬ್ಬ ಸೋಂಕಿತನ ಚಿಕಿತ್ಸೆಗೆ ಸರ್ಕಾರಕ್ಕೆ ಎಷ್ಟು ಖರ್ಚಾಗಲಿದೆ?
"ಈ ಕಾನ್ಫರೆನ್ಸ್ ನಲ್ಲಿ ಎಲ್ಲರ ಸಲಹೆಗಳನ್ನು ಪಡೆಯಲಾಗುತ್ತದೆ. ನಂತರ ಪರೀಕ್ಷೆ ನಡೆಸುವುದರ ಬಗ್ಗೆ ಶಿಕ್ಷಣ ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕಟ ಮಾಡಲಾಗುತ್ತದೆ. ಹಲವರು ಪರೀಕ್ಷೆ ನಡೆಸಿ ಎನ್ನುತ್ತಿದ್ದಾರೆ. ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಿ, ಕೊಠಡಿಯಲ್ಲಿ ಕಡಿಮೆ ಸಂಖ್ಯೆಯ ಮಕ್ಕಳನ್ನ ಕೂರಿಸಿ, ಮಾಸ್ಕ್ ಕಡ್ಡಾಯ ಮಾಡಿ ಪರೀಕ್ಷೆ ನಡೆಸುವುದು ಸರ್ಕಾರದ ಅಭಿಪ್ರಾಯವಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸೋಮವಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.
ಕ್ವಾರಂಟೈನ್ ಕೇಂದ್ರದಲ್ಲಿದ್ದವರ ಕ್ಷೇಮ ವಿಚಾರಿಸಿದ ಸಚಿವ: ಇದೇ ಸಂದರ್ಭ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕ್ವಾರಂಟೈನ್ ಕೇಂದ್ರಕ್ಕೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದರು. ಕೂಲಿಗಾಗಿ ಕೇರಳ, ತಮಿಳುನಾಡಿನ ಊಟಿಗೆ ತೆರಳಿದ್ದು, ರಾಜ್ಯಕ್ಕೆ ವಾಸಪ್ ಬಂದ ಜನರ ನಿಗಾವಣೆಗಾಗಿ ಈ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಕ್ವಾರಂಟೈನ್ ಅವಧಿ ಮುಗಿಸುವುದು ಕಡ್ಡಾಯವೆಂದು ಅವರಿಗೆ ಹೇಳಿ, ಅವರ ಕ್ಷೇಮ ಕುಶಲ ವಿಚಾರಿಸಿದರು ಸುರೇಶ್ ಕುಮಾರ್.
ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಗಳಿಗೂ ಪುನರ್ಮನನ ತರಗತಿ
ನಿಯಮ ಉಲ್ಲಂಘಿಸಿದ ಜನ: ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಲು ಸಚಿವ ಸುರೇಶ್ ಕುಮಾರ್ ಬಂದಿದ್ದರು. ಅಷ್ಟೇ ಅಲ್ಲದೇ ಸಾಮಾಜಿಕ ಅಂತರ ಮರೆತು, ಮಾಸ್ಕ ಧರಿಸದೇ ಸಾವಿರಾರು ಕೂಲಿ ಕಾರ್ಮಿಕರು ತೊಡಗಿದ್ದು ಕಂಡುಬಂದಿತು.