ಇನ್ಮುಂದೆ ಮಲೆಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶ?
ಚಾಮರಾಜನಗರ, ಮಾರ್ಚ್ 03: ಈಗಾಗಲೇ ಬಂಡೀಪುರ ಮತ್ತು ಬಿಳಿಗಿರಿರಂಗನಬೆಟ್ಟ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದು, ಇದರ ಜತೆಗೆ ಮೂರನೆಯದಾಗಿ ಜಿಲ್ಲೆಯ ಹನೂರು ತಾಲೂಕು ವ್ಯಾಪ್ತಿಯ ಮಲೆಮಹದೇಶ್ವರ ಬೆಟ್ಟ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಸರ್ವ ಸಿದ್ಧತೆ ನಡೆಸಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಇದು ರಾಜ್ಯದ ಆರನೇ ಹುಲಿ ರಕ್ಷಿತಾರಣ್ಯವಾಗಲಿದೆ. ಈಗಾಗಲೇ ಅರಣ್ಯ ಇಲಾಖೆ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಸಲುವಾಗಿ ಸಲ್ಲಿಸಿರುವ ಪ್ರಸ್ತಾವನೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಶೀಘ್ರವೇ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಇದು ಕಾರ್ಯರೂಪಕ್ಕೆ ಬಂದರೆ ರಾಷ್ಟ್ರದಲ್ಲಿ ಮೂರು ಹುಲಿ ರಕ್ಷಿತಾರಣ್ಯಗಳನ್ನು ಹೊಂದಿದ ಏಕೈಕ ಜಿಲ್ಲೆ ಎಂಬ ಕೀರ್ತಿ ಚಾಮರಾಜನಗರಕ್ಕೆ ದಕ್ಕಲಿದೆ.
ಶೀಘ್ರದಲ್ಲೇ ಕಬ್ಬನ್ ಪಾರ್ಕ್ನಲ್ಲಿ ವಾಹನ ಸಂಚಾರ ನಿಷೇಧ
ಹುಲಿಗಳ ಆವಾಸಸ್ಥಾನವಾಗಿ ಚಾಮರಾಜನಗರ
ಸದ್ಯ ಬಂಡೀಪುರ ಮತ್ತು ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಇದರ ಜತೆಗೆ ಮಲೆಮಹದೇಶ್ವರ ಬೆಟ್ಟ ಪ್ರದೇಶವೂ ಸೇರಿದ್ದೇ ಆದರೆ ಚಾಮರಾಜನಗರ ಜಿಲ್ಲೆಯು ಹುಲಿಗಳ ಆವಾಸ ತಾಣವಾಗಿ ರಾಷ್ಟ್ರದಲ್ಲಿ ಗಮನಸೆಳೆಯಲಿದೆ. ಬಂಡೀಪುರ ಹುಲಿ ರಕ್ಷಿತಾರಣ್ಯ, ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಧಾಮದಿಂದ ವಲಸೆ ಬರುವ ವನ್ಯಜೀವಿಗಳು ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳತೊಡಗಿವೆ.
2019ರಲ್ಲಿ ಪ್ರಸ್ತಾವ ಸಲ್ಲಿಕೆ
ಮಲೆಮಹದೇಶ್ವರ ವನ್ಯಧಾಮದಲ್ಲಿ 2013ರಲ್ಲಿ 6 ಹುಲಿಗಳಿದ್ದವು. 2018ರಲ್ಲಿ ನಡೆದ ಅಂದಾಜು ಹುಲಿ ಗಣತಿಯಲ್ಲಿ 18 ಹುಲಿಗಳು ಇರುವುದು ಪತ್ತೆಯಾಗಿದೆ. ಸುಮಾರು 906 ಚದರ ಕಿಲೋಮೀಟರ್ ವಿಸ್ತಾರವಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ವರ್ಷದಿಂದ ವರ್ಷಕ್ಕೆ ತಮ್ಮ ಸಂತತಿ ಹೆಚ್ಚಿಸಿಕೊಳ್ಳುತ್ತಿರುವ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅವಶ್ಯಕತೆಯಿರುವುದರಿಂದ ಅರಣ್ಯ ಇಲಾಖೆ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವಂತೆ 2019ರ ಮೇ ತಿಂಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ವಿವರ ನೀಡುವಂತೆ ಸೂಚಿಸಿದ್ದ ಪ್ರಾಧಿಕಾರ
ಇದನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಕೆಲವೊಂದು ಸ್ಪಷ್ಪನೆಯನ್ನು ಕೇಳಿತ್ತು. ಅರಣ್ಯ ವ್ಯಾಪ್ತಿಯಲ್ಲಿ ಬರುವ ಜನವಸತಿ ಪ್ರದೇಶ, ಧಾರ್ಮಿಕ ಹಾಗೂ ಪ್ರವಾಸಿತಾಣಗಳ ವ್ಯಾಪ್ತಿ, ಕೋರ್ ಝೋನ್, ಬಫರ್ ಝೋನ್ಗಳ ವಿವರಗಳನ್ನು ನೀಡುವಂತೆ ಸೂಚಿಸಿತ್ತು. ಅದರಂತೆ ಕಳೆದ ತಿಂಗಳು ಈ ಎಲ್ಲ ಅಂಶಗಳನ್ನು ಒಳಗೊಂಡ ಪರಿಷ್ಕೃತ ಪ್ರಸ್ತಾವನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಹೀಗಾಗಿ ಇದೆಲ್ಲವನ್ನು ಪರಿಗಣಿಸಿರುವ ಪ್ರಾಧಿಕಾರವು ಇನ್ನೆರಡು ವಾರದಲ್ಲಿ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಮಲೆ ಮಹದೇಶ್ವರ ಬೆಟ್ಟ ಹುಲಿಗಳ ಆವಾಸಕ್ಕೆ ಯೋಗ್ಯ
ಹಾಗೆ ನೋಡಿದರೆ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲು ಹಲವು ಕಾರಣಗಳಿವೆ. ಕಾಡುಗಳ್ಳ ವೀರಪ್ಪನ್ ಹತನಾದ ನಂತರ ಕಳ್ಳ ಬೇಟೆ ಕಡಿಮೆಯಾಗಿದ್ದು, ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಹುಲಿ ಸೇರಿದಂತೆ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕೆರೆಗಳ ನಿರ್ಮಾಣ ಮಾಡಲಾಗಿದೆ. ಬೇಟೆಗಾರರು ಮತ್ತು ದನಗಾಹಿಗಳು ಅರಣ್ಯ ಪ್ರವೇಶ ಮಾಡದಂತೆ ಸೋಲಾರ್ ಫೆನ್ಸ್ ಮತ್ತು ಕಂದಕಗಳ ನಿರ್ಮಾಣ ಮಾಡಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮಹದೇಶ್ವರ ವನ್ಯಧಾಮದಲ್ಲಿ ಎವರ್ ಗ್ರೀನ್ ಮತ್ತು ಸೋಲಾರ್ ಫಾರೆಸ್ಟ್ ಇರುವುದು ವನ್ಯಜೀವಿಗಳಿಗೆ ಹೇಳಿ ಮಾಡಿಸಿದಂತೆ ಇದೆ.
ಒಂದು ಕಡೆ ಕಾವೇರಿ ವನ್ಯಧಾಮ, ಇನ್ನೊಂದೆಡೆ ತಮಿಳುನಾಡಿನ ಸತ್ಯಮಂಗಲಂ ಹುಲಿ ರಕ್ಷಿತಾರಣ್ಯ, ಮತ್ತೊಂದೆಡೆ ಬಿ.ಆರ್.ಟಿ. ಹುಲಿ ರಕ್ಷಿತಾರಣ್ಯದೊಂದಿಗೆ ಬೆಸೆದುಕೊಂಡಿರುವ ಮಲೆಮಹದೇಶ್ವರ ಬೆಟ್ಟ ಕಾಡು ಹುಲಿಗಳ ಆವಾಸಕ್ಕೆ ಯೋಗ್ಯವಾದ ವಾತಾವರಣ ಹೊಂದಿದೆ. ಇದೆಲ್ಲವನ್ನು ಗಮನಿಸಿರುವ ಪ್ರಾಧಿಕಾರವು ಹುಲಿಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ.