ಬಿಳಿಗಿರಿ ರಂಗನಬೆಟ್ಟದ ಸೋಲಿಗರ ಸಮಸ್ಯೆ ಕೇಳೋರಿಲ್ಲ
ಚಾಮರಾಜನಗರ, ನವೆಂಬರ್ 27 : ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹಾಡಿ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಜನ ಶಿಲಾಯುಗದವರಂತೆ ಬದುಕ ಬೇಕಾದ ಪರಿಸ್ಥಿತಿ ಬಂದೊದಗಿದೆ.
ಬಿಆರ್ ಹಿಲ್ಸ್ ರಸ್ತೆ ಬದಿಯಲ್ಲಿ ಅಪಾಯ ಕಟ್ಟಿಟ್ಟಬುತ್ತಿ
ಹಾಡಿವಾಸಿಗಳಾಗಿರುವುದರಿಂದ ಮಾಡಬೇಕಾದ ಕೆಲಸವನ್ನು ಕಳಪೆಯಾಗಿ ಮಾಡುವ ಮೂಲಕ ತಿಪ್ಪೆ ಸಾರಿಸಿ ಹೋಗುತ್ತಿದ್ದು, ಇದರಿಂದ ಇಲ್ಲಿನ ಜನರಿಗೆ ಸೌಲಭ್ಯ ಇಲ್ಲದಂತಾಗಿದೆ. ಈಗಾಗಲೇ ಪರಿಶಿಷ್ಟ ಕಲ್ಯಾಣ ಇಲಾಖೆಯು ಗಿರಿಜನ ಅಭಿವೃದ್ಧಿ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಸಿ.ಸಿ. ರಸ್ತೆಗಳು ಹಾಗೂ ಚರಂಡಿ ಕಾಮಗಾರಿಗಳಲ್ಲಿ ಕೆಲವು ಕಳಪೆ ಗುಣಮಟ್ಟದಿಂದ ಕೂಡಿದ್ದರೆ, ವಿವಾದಿತ ಜಮೀನಿನಲ್ಲಿ ಕಾಮಗಾರಿಯನ್ನು ಮಾಡಿದ್ದಾರೆ ಎಂಬ ಆರೋಪಗಳಿವೆ.
ಇಲ್ಲಿನ ಜನತಾ ಕಾಲೋನಿ, ಬಂಗ್ಲೇಪೋಡು, ಕ್ಯಾಣಪೋಡು, ಕೆ.ದೇವರಹಳ್ಳಿ, ಸಿಂಗೇಪೋಡು, ಮುತ್ತುಗನಗದ್ದೆಗಳಲ್ಲಿ ಪರಿಶಿಷ್ಟ ಕಲ್ಯಾಣ ಇಲಾಖೆ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅದರಲ್ಲಿ ಕಲ್ಯಾಣಿ ಪೋಡಿಗೆ ಹೋಗುವ ಸಿ.ಸಿ. ರಸ್ತೆ ಕಾಮಗಾರಿಗಳು ಅಂದಾಜು ಪಟ್ಟಿಯಂತೆ ನಡೆದಿಲ್ಲ. ಹೀಗಾಗಿ ಕಳಪೆ ಕಾಮಗಾರಿ ಎಂಬುದು ಮೇಲ್ನಫಟಕ್ಕೆ ಸಾಭೀತಾಗಿದೆ.
ಇಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆಯಾದರೂ ಇದೀಗ ಜಲ್ಲಿಕಲ್ಲುಗಳು ಎದ್ದು ಹೋಗುತ್ತಿವೆ. ಇನ್ನೊಂದೆಡೆ ಕಳಪಡೆ ಗುಣಮಟ್ಟದ, ಸಿಮೆಂಟ್, ಜಲ್ಲಿಯನ್ನು ಬಳಸುವುದರಿಂದ ಚರಂಡಿಗಳು ಕೂಡ ಹಾಳಾಗಿವೆ.
ಇದೆಲ್ಲದರ ನಡುವೆ ಬಿಳಿಗಿರಿ ರಂಗನಬೆಟ್ಟದ ಕಲ್ಯಾಣಿಪೋಡಿನಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಾರೆ. ಆದರೆ ಪೋಡಿನಮನೆಗಳ ಮುಂದೆ ಇರುವ ಕಲ್ಲು ಬಂಡೆಗಳನ್ನು ತೆರವು ಮಾಡದೇ ಆ ಕಲ್ಲು ಬಂಡೆಗಳನ್ನು ರಸ್ತೆಯ ನಡುವೆ ಬಿಟ್ಟು ರಸ್ತೆಯನ್ನು ನಿರ್ಮಿಸಿರುವುದು ಕಾಟಾಚಾರದ ಕೆಲಸ ಎಂಬುದನ್ನು ಸಾರಿ ಹೇಳುತ್ತದೆ.
ಒಟ್ಟಾರೆ ಇಲ್ಲಿನ ಪೋಡಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಬಡವರ ಉದ್ದಾರದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸುವವರೇ ಎಂಬುದನ್ನು ಕಾದುನೋಡಬೇಕಿದೆ.