ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ ಪರಿಸ್ಥಿತಿ ಹೇಗಿದೆ ಗೊತ್ತಾ?
ಚಾಮರಾಜನಗರ, ಫೆಬ್ರವರಿ 27:ಕಳೆದ ಒಂದು ವಾರದಿಂದ ಬೆಂಕಿಯ ಕೆನ್ನಾಲೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ 10 ಸಾವಿರ ಎಕರೆಗೂ ಹೆಚ್ಚು ಅರಣ್ಯ ಸುಟ್ಟು ಕರಕಲಾಗಿದ್ದು, ಸದ್ಯ ಈ ಕಾಳ್ಗಿಚ್ಚು ಬಹುತೇಕ ನಿಯಂತ್ರಣಕ್ಕೆ ಬಂದಿದೆ.
ಸೇನಾ ಹೆಲಿಕಾಪ್ಟರ್ ಗಳು ಮಂಗಳವಾರವೂ ಏಳು ಸುತ್ತು ಕಾರ್ಯಾಚರಣೆ ನಡೆಸಿದ್ದು, ಬೆಂಕಿ ಕಂಡು ಬಂದ ಕೇರಳ ಹಾಗೂ ತಮಿಳುನಾಡು ಗಡಿ ಭಾಗಗಳಲ್ಲಿ ನೀರು ಸುರಿದು, ಬೆಂಕಿ ಆರಿಸಿವೆ.
ಬಂಡೀಪುರದಲ್ಲಿ ನಿಯಂತ್ರಣದತ್ತ ಕಾಡ್ಗಿಚ್ಚು:ಇಬ್ಬರ ಬಂಧನ, 15 ಮಂದಿ ವಶ
ಬೆಂಕಿ ಅವಘಡ ಸಂಭವಿಸುವ ಮುನ್ನ ನಾವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ, ಜಿಂಕೆಯ ಹಿಂಡುಗಳು ಆತ್ಮೀಯವಾದ ಸ್ವಾಗತ ಕೋರುತ್ತಿದ್ದವು.ಚಿಲಿಪಿಲಿ ಹಕ್ಕಿಗಳ ನಿನಾದ ಕಿವಿಗೆ ಇಂಪನ್ನು ತರುತ್ತಿದ್ದವು. ಗಿಡಮರಗಳು ಲತೆ ತರುಗಳು ಬಾಗಿ ಬಳುಕುತ್ತಾ ತಂಪನ್ನು ಹರಡುತ್ತಿದ್ದವು. ಆದರೆ ಈಗ ಸ್ಮಶಾನ ಮೌನ. ಹಾನಿ ವಿಚಾರವಾಗಿ ಇನ್ನು ಮಾಹಿತಿ ಸಿಕ್ಕಿಲ್ಲ.
ಸತತ ಒಂದು ವಾರದಿಂದ ಬೆಂಕಿಯಲ್ಲಿ ಬೆಂದು ಹೋಗಿದ್ದ ಗೋಪಾಲಸ್ವಾಮಿ ಬೆಟ್ಟದ ವಲಯ ಸಂಪೂರ್ಣ ಸುಟ್ಟು ಹೋಗಿದೆ. ಇತ್ತ ಸಾವಿರಾರು ಹೆಕ್ಟೇರ್ ಪ್ರದೇಶ ಅಗ್ನಿಯ ಜ್ವಾಲೆಗೆ ನಲುಗಿ ಹೋಗಿದೆ. ಹಿಂದೆಂದೂ ಕಂಡರಿಯದ ಕಾಳ್ಗಿಚ್ಚಿನಲ್ಲಿ ಎಷ್ಟು ಎಕರೆ ಕಾಡು ನಾಶವಾಗಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.
ಸುಟ್ಟು ಹೋದ ಹಾವುಗಳ ದೃಶ್ಯ
ಅರಣ್ಯ ಇಲಾಖೆ ಅಧಿಕಾರಿಗಳು ದೊಡ್ಡ ಸಂಖ್ಯೆಯನ್ನು ಹೇಳುತ್ತಿಲ್ಲ. 10 ಸಾವಿರ ಎಕರೆಗಿಂತ ಹೆಚ್ಚಿನ ಕಾಡು ನಾಶವಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪರಿಸರ ತಜ್ಞರು 15 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೂದಿಯಾಗಿದೆ ಎನ್ನುತ್ತಿದ್ದಾರೆ. ಅರಣ್ಯ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಕಾಡಿನೊಳಗೆ ಬೂದಿ ಬಿಟ್ಟರೆ ಮತ್ತೇನೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಂಕೆಗಳು, ಮಂಗಗಳು ಆಹಾರಕ್ಕಾಗಿ ರಸ್ತೆ ಬದಿಗೆ ಬರುತ್ತಿರುವ ದೃಶ್ಯ ಕಂಡುಬಂದಿದೆ. ರಸ್ತೆಯ ಸಮೀಪವೇ ಹಾವುಗಳು ಬೆಂಕಿಯ ತೀವ್ರತೆಗೆ ಸುಟ್ಟು ಹೋಗಿರುವ ದೃಶ್ಯಗಳು ಕಂಡುಬರುತ್ತಿದೆ.
ಎಷ್ಟು ಪ್ರಾಣಿಗಳು ಮೃತಪಟ್ಟಿವೆ?
ಗುಂಡ್ಲುಪೇಟೆಯ ಮೇಲುಕಾಮನಗಳ್ಳಿ ಗೇಟಿನಿಂದ ಬಂಡೀಪುರದಲ್ಲಿರುವ ಅರಣ್ಯ ಇಲಾಖೆಯ ಕಚೇರಿವರೆಗೆ, ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯ ಬಲ ಭಾಗದ ಕಾಡು ಸಂಪೂರ್ಣ ಸುಟ್ಟು ಕರಕಲಾಗಿದೆ. ನೆಲ ಬಿಳಿ-ಕರಿ ಬೂದಿಯ ಹಾಸಿಗೆಯಾಗಿ ಮಾರ್ಪಾಡಾಗಿದೆ. ಬೆಂಕಿಗೆ ಸಿಲುಕಿ ಎಷ್ಟು ಪ್ರಾಣಿಗಳು ಮೃತಪಟ್ಟಿವೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ದೊಡ್ಡ ದೊಡ್ಡ ಪ್ರಾಣಿಗಳು ಸಿಲುಕುವ ಸಾಧ್ಯತೆ ತುಂಬಾ ಕ್ಷೀಣ. ಬೆಂಕಿ ಬಿದ್ದ ತಕ್ಷಣ ಅವು ಬೇರೆಗೆ ಓಡುತ್ತವೆ. ಆದರೆ, ಮೊಲ, ಅಳಿಲು, ಕಾಡು ಕೋಳಿ ಹಾವುಗಳಂತಹ ಪ್ರಾಣಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಬಹುದು ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.
ಬಂಡೀಪುರದಲ್ಲಿ ಬೆಂಕಿ ನಂದಿಸುತ್ತಿರುವ ಸಿಬ್ಬಂದಿಗಳಿಗೆ ನೀರು, ಹಣ್ಣು ಕೊಡಿ: ಅರಣ್ಯ ಇಲಾಖೆ ಮನವಿ
ಯಾವುದೇ ಪ್ರಾಣಿಗಳ ಸುಳಿವಿಲ್ಲ
ಕಿಡಿಗೇಡಿಗಳ ಕೃತ್ಯದಿಂದ ಕಂಡು ಕೇಳರಿಯದ ಕಾಡ್ಗಿಚ್ಚಿಗೆ ತುತ್ತಾಗಿರುವ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಪ್ರಾಣಿಗಳ ಸುಳಿವು ಕಾಣಿಸುತ್ತಿಲ್ಲ. ಸಾಮಾನ್ಯವಾಗಿ ಹೆದ್ದಾರಿ ಬದಿಯಲ್ಲೇ ಹಿಂಡು ಹಿಂಡು ಜಿಂಕೆಗಳು ಕಾಣಸಿಗುತ್ತಿದ್ದವು. ಸಾರಂಗ ಹಾಗೂ ಇನ್ನಿತರ ಕೆಲವು ಸಸ್ಯಾಹಾರಿ ಜೀವಿಗಳು ಜನರ ಕಣ್ಣಿಗೆ ಬೀಳುತ್ತಿದ್ದವು. ಮೊಲದಂತಹ ಪ್ರಾಣಿಗಳು ಸಾಕಷ್ಟು ಇರುತ್ತಿದ್ದವು. ಆದರೆ, ಈಗ ಅಲ್ಲಿ ಏನೂ ಕಾಣುತ್ತಿಲ್ಲ. ಕಣ್ಣೆತ್ತಿ ನೋಡಿದಲ್ಲೆಲ್ಲ ಹೊಗೆಯಾಡುತ್ತಿರುವ ಮರಗಳು, ಇನ್ನೇನು ಧರೆಗೆ ಅಪ್ಪಳಿಸಲು ಸಿದ್ಧವಾಗಿರುವ ಹೊತ್ತಿ ಉರಿದ ಮರಗಳ ಅವಶೇಷಗಳಷ್ಟೇ. ಬೆಂಕಿಯೇನೋ ನಂದಿದೆ. ಆದರೆ ಇನ್ಮುಂದೆ ಪ್ರಾಣಿ ಪಕ್ಷಿಗಳು ಮತ್ತೆ ಸುತ್ತಮುತ್ತಲಿನ ಹಳ್ಳಿಗಳಿಗೆ ಬರುವ ಹೆದರಿಕೆ ಸುತ್ತಮುತ್ತಲ ಗ್ರಾಮಸ್ಥರಿಗೆ ಶುರುವಾಗಿದೆ.
ಜನರಿಲ್ಲದೆ ಬಿಕೋ ಎನ್ನುತ್ತಿದೆ
ಗುಂಡ್ಲುಪೇಟೆಯಿಂದ ಊಟಿಯತ್ತ ಸಾಗುತ್ತಿದ್ದಂತೆಯೇ ಎಡಗಡೆಯೂ ಬಲಗಡೆಯೂ ಸಾಲು ಸಾಲು ಬೆಟ್ಟಗಳು ಕಾಣ ಸಿಗುತ್ತವೆ. ಈ ಬಾರಿ, ಇದೇ ಬೆಟ್ಟದ ಸಾಲುಗಳಲ್ಲಿ ಬೆಂಕಿ ಕಂಡು ಬಂದಿದ್ದು, ಬಹುತೇಕ ಬೆಟ್ಟಗಳು ಉರಿದು ಸುಟ್ಟಿವೆ. ಕೆಲವು ಬೆಟ್ಟಗಳಲ್ಲಿ ಇನ್ನೂ ಹೊಗೆಯಾಡುತ್ತಿದ್ದರೆ, ಇನ್ನೂ ಹಲವು ಬೆಟ್ಟಗಳು ಬೆಂಕಿಗೆ ಕರಕಲಾಗಿವೆ. ವಾರದ ದಿನಗಳಲ್ಲೂ ಬಂಡೀಪುರ ಸಫಾರಿಗಾಗಿ ನೂರಾರು ಜನರು ಇಲ್ಲಿಗೆ ಬರುತ್ತಿದ್ದರು. ಆದರೆ, ಈಗ ಸಫಾರಿ ಸ್ಥಗಿತಗೊಂಡಿರುವುದರಿಂದ ಜನರು ಯಾರೂ ಕಾಣುತ್ತಿಲ್ಲ. ಯಾವಾಗಲೂ ಪ್ರವಾಸಿಗರಿಂದ ತುಂಬಿರುತ್ತಿದ್ದ ಬಂಡೀಪುರದ ಅರಣ್ಯ ಇಲಾಖೆಯ ಆವರಣ, ಟಿಕೆಟ್ ಕೌಂಟರ್ ಸ್ಥಳಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಸಫಾರಿ ಬಂದ್ ಆಗಿರುವ ಬಗ್ಗೆ ಮಾಹಿತಿ ಇಲ್ಲದೆ ಕೆಲವು ಪ್ರವಾಸಿಗರು ಬಂದು ವಿಚಾರಿಸಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.