ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ತಾರೆ, ಆದರೆ ವರುಣದಲ್ಲೆ ನಿಲ್ಲಬೇಕು : ಧ್ರುವನಾರಾಯಣ್
ಚಾಮರಾಜನಗರ, ಆಗಸ್ಟ್ 9: ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲೇ ಮುಂದಿನ ಚುನಾವಣೆಯಲ್ಲಿ ನಿಲ್ಲಬೇಕು ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
Recommended Video
ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, "ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲೇ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ. ಆದರೆ, ಅಭಿಮಾನಿಗಳು, ಸ್ವತಃ ಅವರ ಮಗ ಯತೀಂದ್ರ ಮತ್ತು ನಾನು ವೈಯಕ್ತಿಕವಾಗಿ ಸಿದ್ದರಾಮಯ್ಯ ಈ ಬಾರಿ ವರುಣ ಕ್ಷೇತ್ರದಲ್ಲಿ ನಿಲ್ಲಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಗಾಗಿ ಅವರು ವರುಣಾ ಕ್ಷೇತ್ರ ಬಿಟ್ಟು ಬೇರೆ ಯಾವ ಕ್ಷೇತ್ರಕ್ಕೂ ಹೋಗಬಾರದರು. ವರುಣಾ ಕ್ಷೇತ್ರ ಅವರನ್ನು ಸಿಎಂ ಮಾಡಿದ ಪುಣ್ಯಕ್ಷೇತ್ರ. ಹೀಗಾಗಿ ಮತ್ತೆ ವರುಣಾದಿಂದಲೇ ಸ್ಪರ್ದೆ ಮಾಡಬೇಕೆಂದು" ಎಂದು ಧ್ರುವನಾರಾಯಣ್ ತಿಳಿಸಿದ್ದಾರೆ.
ಸಿದ್ದರಾಮೋತ್ಸವದ ನಂತರ ರಾಜಕೀಯವಾಗಿ ಪುಟಿದೆದ್ರಾ ಸಿದ್ದರಾಮಯ್ಯ?
ಇದೇ ವೇಳೆ, ಬಾವುಟದ ಬಣ್ಣವನ್ನು ಕೆಂಪು ಎಂದು ಹೇಳಿ ಟ್ರೋಲ್ ಗೆ ಒಳಗಾಗಿರುವ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿ, ಬಾಯಿತಪ್ಪಿ ಸಿದ್ದರಾಮಯ್ಯ ಕೆಂಪು ಎಂದಿರಬಹುದು, ಅದನ್ನು ದೊಡ್ಡುವ ಮಾಡುವ ಅಗತ್ಯವಿಲ್ಲ ಎಂದ ಅವರು ರಾಷ್ಟ್ರಧ್ವಜದ ಬಗ್ಗೆ ಕಿಂಚಿತ್ತು ಗೌರವವಿಲ್ಲದ ಬಿಜೆಪಿಗೆ ದಿಢೀರನೇ ದೇಶಭಕ್ತಿ ಹುಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವ್ಯಂಗ್ಯವಾಡಿದರು.
ಬಿಜೆಪಿಗೆ ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ
ಇದುವರೆಗೂ ಆರ್ಎಸ್ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಾಡಿಸಿಲ್ಲ, ತಿರಂಗದ ಬಗ್ಗೆ ಆರ್ಎಸ್ಎಸ್ ಆಕ್ಷೇಪ ವ್ಯಕ್ತಪಡಿಸಿರುವುದು ದಾಖಲೆಯಲ್ಲಿದೆ. ಆದರೀಗ, ಇದ್ದಕ್ಕಿದ್ದಂತೆ ದೇಶಪ್ರೇಮ ಬಂದು ಹರ್ ಘರ್ ತಿರಂಗ ಎನ್ನುತ್ತಿದ್ದಾರೆ, ರಾಷ್ಟ್ರಧ್ವಜದ ಬಗ್ಗೆ ಅಪಮಾನ ಮಾಡಿರುವ ಬಿಜೆಪಿಗರಿಗೆ ರಾಷ್ಟ್ರ ಧ್ವಜ, ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ, ಹರ್ ಘರ್ ತಿರಂಗ ಬಿಜೆಪಿ ಬೂಟಾಟಿಕೆ ಕಾರ್ಯಕ್ರಮ ಎಂದು ಲೇವಡಿ ಮಾಡಿದರು.
ಸ್ವಾತಂತ್ರ್ಯ ಹೋರಾಟಕ್ಕೆ ಹಾಗೂ ಸ್ವಾತಂತ್ರ್ಯದ ನಂತರದ ಭಾರತಕ್ಕೆ ಬಿಜೆಪಿ, ಆರ್ಎಸ್ಎಸ್ ಕೊಡುಗೆ ಏನು..? ಖಾದಿ ಧ್ವಜ ಬಳಸಲಾಗುತ್ತಿತ್ತು, ಆದರೀಗ ಚೀನಾದಿಂದ ಪಾಲಿಮರ್ ತರಿಸಿಕೊಂಡು ಬಾವುಟ ರೂಪುಗೊಳ್ಳುತ್ತಿದೆ. ಆತ್ಮನಿರ್ಭರ ಭಾರತ ಎಂದು ವಿದೇಶದಿಂದ ಬಾವುಟದ ಬಟ್ಟೆ ಆಮದಾಗುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಕೊಡುಗೆ ತಿಳಿಸಲು ಪಾದಾಯಾತ್ರೆ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ನಾವು ಪಾದಯಾತ್ರೆ ಮಾಡುತ್ತಿರುವ ಉದ್ದೇಶ ಸ್ವಾತಂತ್ರ್ಯ ಚಳವಳಿಗೆ, ಸ್ವಾತಂತ್ರ್ಯ ನಂತರದ ಭಾರತಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಜನರಿಗೆ ತಿಳಿಸುವುದಾಗಿದೆ. ಆಗಸ್ಟ್ 15 ರಂದು ಬೆಂಗಳೂರಿನಲ್ಲಿ 1 ಲಕ್ಷ ಕಾರ್ಯಕರ್ತರು ಬರಲಿದ್ದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬರುವ ಸಾಧ್ಯತೆ ಹೆಚ್ಚಿದೆ ಎಂದರು.
ಡಿಕೆಶಿ-ಸಿದ್ದು ಒಗ್ಗಟ್ಟಾಗಿದ್ದಾರೆ
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕೃತಕವಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂಬ ಬಿಜೆಪಿಗರ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿ, ಹಗ್ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರಷ್ಟೇ, ಇದರಲ್ಲಿ ಕೃತಕ ಒಗ್ಗಟ್ಟು ಪ್ರದರ್ಶನವಿಲ್ಲ, ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ, ಇದೆಲ್ಲಾ ಕೆಲ ಮಾಧ್ಯಮಗಳ ಸೃಷ್ಟಿ ಎಂದರು.
ಚಾಮರಾಜನಗರದಲ್ಲಿ ಪಾದಯಾತ್ರೆ
ಮಂಗಳವಾರ ಗುಂಡ್ಲುಪೇಟೆ ಡಿ.ದೇವರಾಜು ಅರಸು ಕ್ರೀಡಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ 75 ಕಿಮೀ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಬುಧವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಪಾದಾಯಾತ್ರೆ ನಡೆಯಲಿದೆ. ಈ ಕುರಿತು ಈಗಾಗಲೆ ಸಭೆ ನಡಿದ್ದು, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಪಾದಯಾತ್ರೆಯಲ್ಲಿ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಬೇಕೆಂದರು ಮನವಿ ಮಾಡಿದ್ದಾರೆ.