ಬಂಡೀಪುರದಲ್ಲಿ ಮೈಮೇಲೆ ಗಂಟುಗಳುಳ್ಳ ಹೆಣ್ಣಾನೆ ಪತ್ತೆ
ಚಾಮರಾಜನಗರ, ಜೂನ್ 10: ಸುಮಾರು ಎಂಬತ್ತೈದು ದಿನಗಳ ನಂತರ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಮೈಮೇಲೆ ಗಂಟುಗಳುಳ್ಳ ಹೆಣ್ಣಾನೆಯೊಂದು ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
Recommended Video
ಕೊರೊನಾ ವೈರಸ್ ನಿಂದಾಗಿ ಲಾಕ್ ಡೌನ್ ಹೇರಿದ್ದ ಹಿನ್ನೆಲೆ ಸುಮಾರು ಎಂಬತೈದು ದಿನಗಳ ಕಾಲ ಬಂಡೀಪುರಲ್ಲಿ ಸಫಾರಿಯನ್ನು ಬಂದ್ ಮಾಡಲಾಗುತ್ತು, ಜೂನ್ ೮ ರಿಂದ ಸಫಾರಿ ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಗಂಟುಗಳುಳ್ಳ ಹೆಣ್ಣಾನೆಯೊಂದು ಹಿಂಡುಗಳ ನಡುವೆ ಕಂಡು ಬಂದಿದೆ.
ಚಾಮರಾಜನಗರದಲ್ಲಿ ಮರುಕಳಿಸಿದ ಆನೆ ಸಾವಿನ ಪ್ರಕರಣಗಳು
ಸಫಾರಿಯಲ್ಲಿದ್ದ ಪ್ರವಾಸಿಗರು ಇದನ್ನು ನೋಡಿ ಅಚ್ಚರಿಗೊಂಡಿದ್ದಲ್ಲದೆ ಅದರ ಫೋಟೋ ಹಾಗೂ ವಿಡಿಯೋ ತೆಗೆದು ಅರಣ್ಯಾಧಿಕಾರಿಗಳಿಗೆ ಕಳುಹಿಸಿ ಇದೊಂದು ಅಂಟು ರೋಗವಾಗಿರುವ ಸಾಧ್ಯತೆಯಿರುವುದರಿಂದ ಕೂಡಲೇ ಸೂಕ್ತ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.
ಕೀಟ ಬಾಧೆ, ಕಲುಷಿತ ನೀರಿನ ಸೇವನೆ ಅಥವಾ ಅಲರ್ಜಿ ಸಮಸ್ಯೆಯಿಂದ ಈ ರೀತಿಯ ಗಂಟುಗಳು ಆನೆಯ ಮೈಮೇಲೆ ಬಂದಿರಬಹುದು. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಈ ಗಂಟುಗಳು ಗಾಯಗಳಾಗಿ ಹುಳು ಬಿದ್ದು ಸಾವಿಗೀಡಾಗುವ ಸಂಭವವಿದೆ ಎಂಬ ಆತಂಕ ತೋಡಿಕೊಂಡಿರುವ ಪ್ರಾಣಿಪ್ರಿಯರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಮನೆಯೊಳಗೇ ಅಡಗಿ ಕುಳಿತಿದ್ದ ಚಿರತೆ!
ಇನ್ನು ಈ ಕುರಿತಂತೆ ಡಾ.ಎಚ್.ಎಸ್ ಪ್ರಯಾಗ್ ಎಂಬುವರು ಮಾಹಿತಿ ನೀಡಿದ್ದು, ಕಾಡಾನೆಯ ಮೈಮೇಲೆ ಗಂಟುಗಳಾಗಿದ್ದು, ಮೇಲ್ನೋಟಕ್ಕೆ ಇದು ಗ್ಯಾಡ್ ಫ್ಲೈಸ್ ನಿಂದ ಬಳಲುತ್ತಿರುವಂತೆ ಕಂಡುಬರುತ್ತಿದೆ. ಆಗಾಗ್ಗೆ ಆನೆಯು ಮರಕ್ಕೆ ಮೈಉಜ್ಜಿಕೊಳ್ಳುವುದರಿಂದ ಗಂಟುಗಳು ಒಡೆದು ಹುಳಗಳು ಹೆಚ್ಚುತ್ತಾ ಹೋಗುತ್ತವೆ ಎಂದಿದ್ದಾರೆ.
ಹಾಗಾಗಿ ರೋಗಗ್ರಸ್ತ ಕಾಡಾನೆಯನ್ನು ಗುಂಪಿನಿಂದ ಬೇರ್ಪಡಿಸಿ ಸ್ಟ್ಯಾಂಡಿಂಗ್ ಅನೆಸ್ತೇಷಿಯಾ ನೀಡಿ ಒಂದು ಗಂಟನ್ನು ಒಡೆದು ಅದರಲ್ಲಿರುವ ಹುಳಗಳನ್ನು (ಲಾರ್ವಾ) ಪರೀಕ್ಷಿಸಿ, ರೋಗವನ್ನು ಗುರುತಿಸಬಹುದಾಗಿದೆ. ಒಂದು ವೇಳೆ ಇದು ಗ್ಯಾಡ್ ಫ್ಲೈಸ್ ರೋಗ ಎಂಬುದು ಖಚಿತವಾದರೆ ನಂತರ ಆನೆಯನ್ನು ಕ್ಯಾಂಪಿಗೆ ಸ್ಥಳಾಂತರಿಸಿ ಅದರ ವಯಸ್ಸು, ಗಂಟುಗಳ ಪ್ರಮಾಣ ಹಾಗೂ ಹುಳಗಳ ಹರಡುವಿಕೆ ಆಧಾರದ ಮೇಲೆ ಹತ್ತರಿಂದ ಇಪ್ಪತ್ತು ದಿನಗಳ ಕಾಲ ಚಿಕಿತ್ಸೆ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.