ಸರಣಿ ರಜೆಯಿಂದ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ಜಾತ್ರೆ
ಗುಂಡ್ಲುಪೇಟೆ, ಅಕ್ಟೋಬರ್ 2: ಸಾಲು ಸಾಲು ರಜೆಯ ಕಾರಣದಿಂದ ರಾಜ್ಯ ಹಾಗೂ ಹೊರರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರಕ್ಕೆ ಆಗಮಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಯೋಜನೆಯ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟವಿದ್ದು, ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದು ಹಿಂತಿರುಗುತ್ತಿರುತ್ತಾರೆ. ಆದರೆ, ಇದೀಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನೂಕುನುಗ್ಗಲು ಕಂಡು ಬಂದಿತು.
ಇದರಿಂದಾಗಿ ದೇವರ ದರ್ಶನ ಪಡೆಯಲು ದೇವಸ್ಥಾನದ ಬಳಿ ಮೈಲುದ್ದದ ಸರದಿಯಲ್ಲಿ ನಿಂತು ಕಾಯಬೇಕಾಯಿತಲ್ಲದೆ, ವೃದ್ಧರು ಮಹಿಳೆಯರು ಹಾಗೂ ಮಕ್ಕಳು ಪರದಾಡುವಂತಾಯಿತು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಸರ್ಕಾರದಿಂದ ನಿಯೋಜಿಸಿರುವ 5 ಮಿನಿ ಬಸ್ಸುಗಳು ಸಾಲದೆ ಹೆಚ್ಚುವರಿಯಾಗಿ 4ರಿಂದ 5 ಸಾಮಾನ್ಯ ಸಾರಿಗೆ ಬಸ್ಸುಗಳನ್ನು ಬಳಕೆ ಮಾಡುವಂತಾಯಿತು.
ಇತ್ತೀಚೆಗೆ ಬಿದ್ದ ಮಳೆಗೆ ಹಸಿರು ಹೊದ್ದಿರುವ ಬಂಡೀಪುರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಸ್ತೆ ಬದಿಗಳಲ್ಲಿಯೇ ವನ್ಯಜೀವಿಗಳು ದರ್ಶನ ನೀಡುತ್ತಿರುವುದು ಈ ಬಾರಿಯ ವಿಶೇಷ. ಅಲ್ಲದೆ ಸಫಾರಿಗೆ ಹೊರಟ ಪ್ರವಾಸಿಗರಿಗೆ ಚಿರತೆ, ಹುಲಿ, ಆನೆಗಳು ಕಂಡುಬರುತ್ತಿವೆ. ಹವ್ಯಾಸಿ ಛಾಯಾಗ್ರಾಹಕರು ತಾವು ತೆಗೆದ ವನ್ಯಜೀವಿಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವುದು ಹೆಚ್ಚಿನ ಪ್ರವಾಸಿಗರು ಬಂಡೀಪುರದತ್ತ ಬರಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಇಲ್ಲಿರುವ ಅತಿಥಿಗೃಹಗಳು ಈಗಾಗಲೇ ಬುಕ್ಕಿಂಗ್ ಆಗಿದ್ದು, ಸಫಾರಿಗೆ ತೆರಳುವ ಪ್ರವಾಸಿಗರು ಸರದಿ ಸಾಲಿನಲ್ಲಿ ನಿಂತು ಟಿಕೆಟ್ಗಾಗಿ ಕಾಯುವಂತಾಗಿದೆ.
ಸಾರಿಗೆ ಘಟಕದ ವ್ಯವಸ್ಥಾಪಕರು ಹಾಗೂ ಅರಣ್ಯಾಧಿಕಾರಿಗಳೇ ಖುದ್ದಾಗಿ ನಿಂತು ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ದಿನವೂ 4 ಮಿನಿ ಬಸ್ಸುಗಳು ಬೆಟ್ಟಕ್ಕೆ ತೆರಳುತ್ತಿವೆ. ಇತ್ತೀಚೆಗೆ ಬೆಟ್ಟಕ್ಕೆ ಹೋಗುವ ಪ್ರವಾಸಿಗರ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದ್ದು, ಪ್ರವಾಸಿಗರು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲೇ ತೆರಳುವುದು ಅನಿವಾರ್ಯವಾಗಿದೆ.