ನರಭಕ್ಷಕ ಹುಲಿಗಾಗಿ ಅರಣ್ಯ ಸಿಬ್ಬಂದಿಯಿಂದ ಹುಡುಕಾಟ
ಚಾಮರಾಜನಗರ, ಸೆಪ್ಟೆಂಬರ್ 7: ದನ ಮೇಯಿಸುತ್ತಿದ್ದ ರೈತನ ಮೇಲೆ ದಾಳಿ ಮಾಡಿ ಸಾಯಿಸಿದ ನರಭಕ್ಷಕ ಹುಲಿಯ ಸೆರೆಗಾಗಿ ಗುಂಡ್ಲುಪೇಟೆ ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನ ಕೆಬ್ಬೇಪುರ, ಚೌಡಹಳ್ಳಿ ಮತ್ತು ಹುಂಡೀಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಮಾರ್ಗದರ್ಶನದಲ್ಲಿ ವಿಶೇಷ ಹುಲಿ ಸಂರಕ್ಷಣಾ ದಳದ ಎಸಿಎಫ್ ಕೆ.ಪರಮೇಶ್ ಅವರ ನೇತೃತ್ವದಲ್ಲಿ ಎಸ್ಟಿಪಿಎಫ್ ಮತ್ತು ಅರಣ್ಯ ಇಲಾಖೆ ನೌಕರರು ಸಾಕಾನೆಗಳಾದ ಜಯಪ್ರಕಾಶ, ಕೃಷ್ಣ ಮತ್ತು ಗಣೇಶ ಆನೆಗಳನ್ನು ಬಳಸಿಕೊಂಡು ಹುಲಿಗಾಗಿ ಹುಡುಕಾಟ ನಡೆಸಿದರಾದರೂ ಹುಲಿಯ ಸುಳಿವು ಮಾತ್ರ ಗೋಚರವಾಗಿಲ್ಲ.
ಹುಲಿ ದಾಳಿಗೆ ದನ ಮೇಯಿಸುತ್ತಿದ್ದ ರೈತ ಬಲಿ
ಹುಲಿಯು ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ ಅವರು ದನ ಮೇಯಿಸುತ್ತಿದ್ದ ವೇಳೆ ದಿಢೀರ್ ದಾಳಿ ಮಾಡಿ ಕೊಂದು ಪೊದೆಗೆ ಹೊತ್ತೊಯ್ದು ತಿಂದು ಹಾಕಿತ್ತು. ಇದರಿಂದ ಈ ವ್ಯಾಪ್ತಿಯ ಜನರು ಭಯಭೀತರಾಗಿದ್ದರಲ್ಲದೆ, ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಆದ್ದರಿಂದ ರೈತ ಮೃತಪಟ್ಟ ಪ್ರದೇಶದ ಸುತ್ತಲೂ ಹುಲಿಗಾಗಿ ಶೋಧ ಕಾರ್ಯ ನಡೆಸಲಾಯಿತು. ಆದರೂ ಹುಲಿ ಇರುವಿಕೆ, ಸಂಚಾರ ಇತರೆ ಯಾವುದೇ ಸುಳಿವುಗಳು ಕಾರ್ಯಾಚರಣೆ ವೇಳೆ ಅಧಿಕಾರಿಗಳಿಗೆ ಸಿಕ್ಕಿಲ್ಲ.
ಈಗಾಗಲೇ ಆಯಕಟ್ಟಿನ 20 ಕಡೆಗಳಲ್ಲಿ ಹುಲಿಯ ಚಲನವಲನದ ಬಗ್ಗೆ ನಿಗಾಯಿಡಲು ಕ್ಯಾಮರಾ ಅಳವಡಿಸಲಾಗಿದ್ದು, 3 ಕಡೆ ಬೋನ್ ಇರಿಸಲಾಗಿದೆ. ಹುಲಿಯಮ್ಮನ ಗುಡಿ ಮತ್ತು ಕೆಬ್ಬೇಪುರ ಭಾಗದ ಎರಡು ಕಡೆಗಳಲ್ಲಿ ತಾತ್ಕಾಲಿಕ ಕ್ಯಾಂಪ್ ತೆರೆಯಲಾಗಿದೆ. ವಿಶೇಷ ಹುಲಿ ಸಂರಕ್ಷಣಾ ದಳ ಮತ್ತು ಅರಣ್ಯ ಇಲಾಖೆ ನೌಕರರು ಹಗಲು, ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಕಾನೆಗಳಲ್ಲದೆ, ಅಧಿಕಾರಿ ಮತ್ತು ನೌಕರರು ಬೆಟ್ಟ, ಗುಡ್ಡ, ರೈತರ ಜಮೀನುಗಳು, ಮಳೆ ನೀರು ಹಳ್ಳ ಇತರೆ ಕಡೆಗಳಲ್ಲಿ ತಂಡಗಳಾಗಿ ತೆರಳಿ ಹುಡುಕಾಟ ನಡೆಸಿದ್ದಾರೆ.
Infographics: ಹುಲಿಗಳ ಲೆಕ್ಕದಲ್ಲಿ ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2
ಸದ್ಯಕ್ಕೆ ಹುಲಿಯ ಸುಳಿವು ಸಿಗದ ಕಾರಣ ಅರಣ್ಯ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದರೆ, ಗ್ರಾಮಸ್ಥರು ಭಯದಿಂದಲೇ ದಿನ ಕಳೆಯುವಂತಾಗಿದೆ. ಒಟ್ಟಾರೆ ಹೇಳಬೇಕೆಂದರೆ ಹುಲಿ ಸಿಗುವ ತನಕ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ.