ಬತ್ತಿದ ಬಂಡೀಪುರದ ಮೂಲೆಹೊಳೆ: ಜನ-ಜಾನುವಾರು ಪರದಾಟ
ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಜನ ಮಾತ್ರವಲ್ಲದೆ, ವನ್ಯಪ್ರಾಣಿಗಳಿಗೂ ನೀರಿನ ಆಸರೆಯಾಗಿತ್ತು. ಆದರೆ ಮಳೆಯ ಅಭಾವದಿಂದ ಮೂಲೆಹೊಳೆ ಬತ್ತಿದ್ದು, ಈ ಭಾಗದ ಜನ ಪರಿತಪಿಸುವಂತಾಗಿದೆ.
ಚಾಮರಾಜನಗರ, ಮೇ 16: ಇವತ್ತಿಗೂ ಗುಂಡ್ಲುಪೇಟೆಯ ಬಂಡೀಪುರ ಅರಣ್ಯ ವಲಯದ ಕಾಡಂಚಿನ ಜನ ಅರಣ್ಯ ಮಾರ್ಗವಾಗಿ ಹರಿಯುವ ಮೂಲೆಹೊಳೆಯ ನೀರನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ.
ಕುಡಿಯುವುದರಿಂದ ಆರಂಭವಾಗಿ, ಸಣ್ಣಪುಟ್ಟ ಕೃಷಿ ಕಾರ್ಯಕ್ಕೂ ಹೊಳೆಯ ನೀರನ್ನೇ ಬಳಸುತ್ತಾರೆ. ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಹೊಳೆಯಲ್ಲಿ ನೀರು ಬತ್ತಿಹೋಗಿದ್ದು, ಇದನ್ನೇ ನಂಬಿ ಬದುಕುತ್ತಿರುವ ಜನರಿಗೆ ಸಂಕಷ್ಟ ಎದುರಾಗಿದೆ.[ಬರದಲ್ಲೂ ಬಂಡೀಪುರದ ಮೂರು ಕೆರೆಗಳಿಗೆ ನೀರು ಬಂತು!]
ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಜನ ಮಾತ್ರವಲ್ಲದೆ ವನ್ಯಪ್ರಾಣಿಗಳಿಗೂ ನೀರಿನ ಆಸರೆಯಾಗಿತ್ತು. ಕೇರಳ ರಾಜ್ಯದ ಮೂಲಕ ಕರ್ನಾಟಕ ಗಡಿಭಾಗದ ಮಾರ್ಗವಾಗಿ ಕಬಿನಿ ಜಲಾಶಯಕ್ಕೆ ಸೇರ್ಪಡೆಯಾಗುತ್ತಿದ್ದು ಹರಿಯುವ ಮಾರ್ಗದಲ್ಲಿ ಹಲವರಿಗೆ ಆಸರೆಯಾಗಿತ್ತು.
ಕೇರಳದಲ್ಲಿ ಉತ್ತಮ ಮಳೆಯಾಗಿ ಅಂತರ್ಜಲ ಹೆಚ್ಚಳವಾಗಿ ಜಲಹುಟ್ಟಿದರೆ ನೀರು ಬೇಸಿಗೆಯಲ್ಲೂ ಬತ್ತದೆ ಹರಿಯುತ್ತದೆ. ಆದರೆ ಕಳೆದ ಬಾರಿಯ ಮುಂಗಾರಲ್ಲಿ ಕೇರಳದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಸಿಲ್ಲ. ಹೀಗಾಗಿ ಮೂಲೆ ಹೊಳೆಯಲ್ಲೂ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದಿಲ್ಲ ಎನ್ನಬಹುದು.[ಚರಂಡಿ ನೀರನ್ನೇ ಹೊತ್ತೊಯ್ದ ಹಂಗಳ ಗ್ರಾಮಸ್ಥರು!]
ಒಂದು ವೇಳೆ ಈ ವ್ಯಾಪ್ತಿಯಲ್ಲಿ ಇಷ್ಟರಲ್ಲೇ ಮಳೆ ಸುರಿದಿದ್ದರೆ ಮೂಲೆಹೊಳೆಯಲ್ಲಿ ಸ್ವಲ್ಪ ಮಟ್ಟಿಗೆಯಾದರೂ ನೀರು ಹರಿಯುತ್ತಿತ್ತೇನೋ ಆದರೆ ಮಳೆ ಸುರಿಯದ ಕಾರಣ ಬತ್ತಿಹೋಗಿದೆ. ಪರಿಣಾಮ ವನ್ಯ ಪ್ರಾಣಿಗಳಿಂದ ಹಿಡಿದು, ಕಾಡಂಚಿನ ಗ್ರಾಮಗಳ ಜನರು ಕೂಡ ಪರದಾಡುವಂತಾಗಿದೆ.
ತೀವ್ರ ಬರಗಾಲ
ಮೊದಲೆಲ್ಲ ಹೊಳೆ ತುಂಬಿ ಹರಿಯುತ್ತಿದ್ದರಿಂದ ಜನ ನೆಮ್ಮದಿಯಾಗಿದ್ದರು. ಆದರೆ ಕಳೆದ ಐದು ವರ್ಷಗಳಿಂದ ತಾಲೂಕಿನಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದೆ. ಇದರಿಂದ ವನ್ಯಪ್ರಾಣಿಗಳು ನೀರನ್ನು ಅರಸಿಕೊಂಡು ಬೇರೆಡೆಗೆ ಹೋಗುತ್ತಿವೆ.
ಬೋರ್ ವೆಲ್ ನಿಂದ ನೀರು
ಈ ಹೊಳೆಯ ವ್ಯಾಪ್ತಿಗೆ ಬರುವ ಕಾಡಂಚಿನ ಗ್ರಾಮಗಳಲ್ಲಿ ನೀರಿಗೆ ತೊಂದರೆವುಂಟಾಗಿದೆ. ಇತ್ತೀಚೆಗೆ ಇಲ್ಲೂ ಬೋರ್ವೆಲ್ ಕೊರೆಯಿಸಲಾಗಿದ್ದು ಅದರಿಂದ ನೀರನ್ನು ಬಳಸುತ್ತಿದ್ದಾರೆ.[ನೀರಿಲ್ಲ, ಬಸ್ಸಿಲ್ಲ, ಕಣಿಯನಪುರ ಜನರ ಬವಣೆಗೆ ಕೊನೆಯಿಲ್ಲ!]
ಮೂಲೆ ಹೊಳೆಯಲ್ಲಿ ನೀರಿಲ್ಲ
ಇಲ್ಲಿವರೆಗೆ ಸ್ವಲ್ಪ ಮಟ್ಟಿಗೆಯಾದರೂ ಮೂಲೆ ಹೊಳೆಯಲ್ಲಿ ನೀರು ಕಾಣುತ್ತಿತ್ತು. ಆದರೆ ಇದೀಗ ಕೆಲವು ದಿನಗಳಿಂದ ಸಂಪೂರ್ಣ ಬತ್ತಿಹೋಗಿದ್ದು ಇದರಿಂದ ತೊಂದರೆಯಾಗಿದೆ. ಬೋರ್ವೆಲ್ ಬಹಳಷ್ಟು ದೂರವಿರುವುದರಿಂದ ಅನಿವಾರ್ಯವಾಗಿ ಅದನ್ನು ಬಳಸುವಂತಾಗಿದೆ ಎಂಬುದು ಈ ವ್ಯಾಪ್ತಿಯ ಗ್ರಾಮಸ್ಥರ ಮಾತಾಗಿದೆ.
ದಿನಬಳಕೆಗೂ ನೀರಿಲ್ಲ
ಬಂಡೀಪುರ ಅರಣ್ಯಕ್ಕಾಗಿ ಹರಿಯುವ ಮೂಲೆ ಹೊಳೆಯನ್ನೇ ನಂಬಿ ಕಾಡಂಚಿನ ಗ್ರಾಮಗಳಾದ ಮದ್ದೂರು, ಮೂಲೆಹೊಳೆ. ಗಿರಿಜನಕಾಲೋನಿಯ ಜನತೆಯಿದ್ದಾರೆ. ಅವರಿಗೆ ಇದೇ ಹೊಳೆಯ ನೀರನ್ನು ಬಳಸಿ ಅಭ್ಯಾಸ. ಆದರೆ ಕಳೆದೊಂದು ವಾರದಿಂದ ನೀರು ಹರಿಯುವಿಕೆ ಸಂಪೂರ್ಣ ಕಡಿಮೆಯಾಗಿದ್ದು, ಬಳಕೆಗೆ ನೀರು ದೊರೆಯುತ್ತಿಲ್ಲ. ಆದ್ದರಿಂದ ದೂರದ ಕೊಳವೆ ಬಾವಿಗಳನ್ನು ಆಶ್ರಯಿಸುವಂತಾಗಿದೆ.
ಮಳೆಗಾಗಿ ಹಾಹಾಕಾರ
ಕೇರಳದಲ್ಲಿ ಮುಂಗಾರು ಆರಂಭವಾದರೆ ಮತ್ತೆ ಬತ್ತಿದ ಮೂಲೆಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿ ಜನ - ಜಾನುವಾರುಗಳ ದಾಹ ತಣಿಯಬಹುದೇನೋ?