ಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿಗೆ ಮಠದಿಂದ ಕೊಕ್?
ಚಾಮರಾಜನಗರ, ಆಗಸ್ಟ್ 30: ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ ಜೈಲುಪಾಲಾದ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹಾದೇವಸ್ವಾಮಿ ಜಾಗಕ್ಕೆ ಬೇರೆಯವರನ್ನು ನಿಯೋಜಿಸುವ ಸಂಬಂಧ ಮಠದಲ್ಲಿ ಚರ್ಚೆ ನಡೆದಿದೆ.
ಇನ್ನೂ ತಪ್ಪಿಲ್ಲ ಸುಳ್ವಾಡಿ ವಿಷ ಪ್ರಕರಣದ ಸಂತ್ರಸ್ತರ ಪರದಾಟ
ಮಠದ ಹಿರಿಯ ಸ್ವಾಮೀಜಿ ಗುರುಸ್ವಾಮಿ ಅವರಿಗೆ ವಯಸ್ಸಾದ ಕಾರಣ ಹಾಗೂ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆ ಸಾಲೂರು ಬೃಹನ್ಮಠದಲ್ಲಿ ಪೂಜಾ ಕೈಂಕರ್ಯ ನಿರ್ವಹಣೆಗಾಗಿ ಸ್ವಾಮೀಜಿಯನ್ನು ನಿಯೋಜಿಸಬೇಕು ಎಂಬ ಮಾತು ಕೇಳಿ ಬಂದಿದೆ. ಈ ವಿಚಾರವಾಗಿ ಗುಂಡೇಗಾಲ ಮಠದಲ್ಲಿ ಪೂರ್ವಭಾವಿ ಸಭೆ ನಡೆದು ಉತ್ತರಾಧಿಕಾರಿ ನಿಯೋಜಿಸುವ ಬಗ್ಗೆ ತೀರ್ಮಾನ ಸಹ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಸಾಲೂರು ಮಠದಲ್ಲಿ ಲಿಂಗಾಯತ ಸಮುದಾಯದ ಮುಖಂಡರು, ಭಕ್ತರು ಹಾಗೂ ಬೇಡಗಂಪಣ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಇಮ್ಮಡಿ ಮಹಾದೇವ ಸ್ವಾಮೀಜಿ ವಿಷ ಪ್ರಸಾದದ ದುರಂತದ ಪ್ರಮುಖ ಆರೋಪಿಯಾಗಿ ಜೈಲುವಾಸದಲ್ಲಿರುವುದರಿಂದ ಮಠದ ಧಾರ್ಮಿಕ ಕಾರ್ಯಕ್ಕೆ ಅನರ್ಹರಾಗಿರುತ್ತಾರೆ. ಹಾಗಾಗಿ ಮಠದ ಎಲ್ಲ ಜವಾಬ್ದಾರಿಗಳನ್ನು ಅವರಿಂದ ಬಿಡುಗಡೆಗೊಳಿಸಬೇಕು, ಮಠದ ಧಾರ್ಮಿಕ ಕಾರ್ಯಗಳನ್ನು ನಡೆಸಲು ಇಬ್ಬರ ಬದಲಾಗಿ ಒಬ್ಬ ಸ್ವಾಮೀಜಿಯನ್ನು ನೇಮಿಸಬೇಕೆಂಬ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಮೂಲಕ ಇಮ್ಮಡಿ ಮಹದೇವಸ್ವಾಮಿಗೆ ಮಠದಿಂದ ಕೋಕ್ ನೀಡಿರುವುದಾಗಿ ತಿಳಿದುಬಂದಿದೆ.