ಬಂಡೀಪುರಕ್ಕೆ ಮತ್ತೆ ಕಂಟಕ; ಹೆದ್ದಾರಿ ಅಗಲೀಕರಣ?
ಚಾಮರಾಜನಗರ, ಆಗಸ್ಟ್ 25; ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಕರ್ನಾಟಕ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ 12 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿದೆ.
ಮೈಸೂರು-ಊಟಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 181 ಅನ್ನು 12 ಕಿ. ಮೀ. ವಿಸ್ತರಣೆ ಮಾಡುವ ಪ್ರಸ್ತಾವನೆಯನ್ನು ಸಿದ್ಧಗೊಳಿಸಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶವಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಯೋಜನೆ ಕೈಗೊಳ್ಳಲು ಪ್ರಸ್ತಾವನೆ ತಯಾರು ಮಾಡಲಾಗಿದೆ.
ಬಂಡೀಪುರ ಸಫಾರಿ, ಪ್ರವೇಶ ಶುಲ್ಕ ಏರಿಕೆ
ಎರಡು ವರ್ಷಗಳ ಹಿಂದೆ ಕೇರಳಕ್ಕೆ ರಾತ್ರಿ ವಾಹನಗಳ ಸಂಚಾರ ನಡೆಸಲು ಅವಕಾಶ ನೀಡಬಾರದು ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ಹೇಳಿತ್ತು. ಹೊಸದಾಗಿ ಕೇರಳ ಸಂಪರ್ಕಿಸಲು ರಸ್ತೆ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಸಹ ತಿರಸ್ಕರಿಸಲಾಗಿತ್ತು. ಈಗ ಇರುವ ರಸ್ತೆಯನ್ನೇ ವಿಸ್ತರಣೆ ಮಾಡುವ ಚಿಂತನೆ ಆರಂಭವಾಗಿದೆ.
ನಾಗರಹೊಳೆಯಲ್ಲಿ ಜಿಂಕೆ, ಸಾರಂಗಗಳ ಕುಣಿದಾಟ!
2012ರಲ್ಲಿ ಹೊರಡಿಸಲಾದ ಅಧಿಸೂಚನೆ ಅನ್ವಯ ಬಂಡೀಪುರದಲ್ಲಿ ರಸ್ತೆಯ ವಿಸ್ತರಣೆಗೆ ಕಠಿಣ ನಿಯಮಗಳಿವೆ. ವನ್ಯ ಜೀವಿ ರಾಷ್ಟ್ರೀಯ ಮಂಡಳಿಯ ಉಪ ಸಮಿತಿ 2014ರಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ. ಆದರೆ ಈಗ ರಸ್ತೆ ವಿಸ್ತರಣೆಯ ಹೊಸ ಪ್ರಸ್ತಾಪ ಸಿದ್ಧವಾಗಿದೆ.
ವನ್ಯ ಜೀವಿಗಳಿಗೆ ಕಾಡಿನಲ್ಲಿ ಆಹಾರ ಬೆಳೆಸಲು ಮುಂದಾದ ಅರಣ್ಯ ಇಲಾಖೆ
ರಸ್ತೆ ಅಗಲೀಕರಣ ಪ್ರಸ್ತಾಪಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ವನ್ಯಜೀವಿ ತಜ್ಞರು ಒತ್ತಾಯಿಸಿದ್ದಾರೆ. ಪ್ರಸ್ತುತ ಯೋಜನೆ ಆರಂಭಿಕ ಹಂತದಲ್ಲಿದ್ದು, ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಲಾಗುತ್ತಿದೆ.
ಊಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮೇಲು ಕಾಮನಹಳ್ಳಿಯಿಂದ ಕೆಕ್ಕನಹಳ್ಳಿ ವರೆಗೆ ವಿಸ್ತರಣೆ ಮಾಡುವುದು ಪ್ರಸ್ತಾಪವಾಗಿದೆ. ವನ್ಯ ಜೀವಿಗಳ ಆವಾಸ ಸ್ಥಾನದಲ್ಲಿ ರಸ್ತೆ ಅಗಲೀಕರಣ ಮಾಡುವುದಕ್ಕೆ ಪರಿಸರವಾದಿಗಳು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 181 ಮತ್ತು 766 ಬಂಡೀಪುರ ಮೂಲಕ ಹಾದು ಹೋಗುತ್ತದೆ. ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಂದ ವನ್ಯ ಜೀವಿಗಳಿಗೆ ತೊಂದರೆಯಾಗುತ್ತಿದೆ. ವಾಹನಗಳ ಓಡಾಟದಿಂದ ಶಬ್ದ ಮತ್ತು ವಾಯು ಮಾಲಿನ್ಯ ವಾಗುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ, ಜಿಂಕೆ, ಚಿರತೆ, ಕಡವೆ ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳಿವೆ. ಇಂತಹ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡುವ ಪ್ರಸ್ತಾವನೆಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಪ್ರಸ್ತಾವಿತ ಯೋಜನೆ 'ಎ' ದರ್ಜೆಯದ್ದು ಆಗಿದ್ದು, ಇದಕ್ಕೆ ಒಪ್ಪಿಗೆ ನೀಡುವ ಮೊದಲು ಪರಿಸರದ ಮೇಲಿನ ಪರಿಣಾಮದ ಅಧ್ಯಯನ ನಡೆಸುವುದು ಕಡ್ಡಾಯವಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಣಾ ಧಾಮಕ್ಕೆ ಹೊಂದಿಕೊಂಡಿದೆ. ಕರ್ನಾಟಕದಲ್ಲಿ ರಸ್ತೆ ವಿಸ್ತರಣೆಯಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಮಿಳುನಾಡಿನಲ್ಲಿಯೂ ರಸ್ತೆ ವಿಸ್ತರಣೆ ಮಾಡುವ ಪ್ರಸ್ತಾಪ ಮಾಡಲಿದೆ. ಅಲ್ಲಿನ ರಾಜ್ಯ ಸರ್ಕಾರ ಈಗಾಗಲೇ ರಸ್ತೆ ಅಗಲೀಕರಣ ಪ್ರಸ್ತಾವಪನ್ನು ಬದಿಗೆ ಸರಿಸಿದೆ. ಆದರೆ ಕರ್ನಾಟಕದ ಲೋಕೋಪಯೋಗಿ ಇಲಾಖೆ ರಸ್ತೆ ವಿಸ್ತರಣೆಯ ಪ್ರಸ್ತಾವನೆ ಸಿದ್ಧಗೊಳಿಸಿದೆ.
ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಹೋಗುವ ರಸ್ತೆಗಳನ್ನು ಇರುವಂತಹ ಸ್ಥಿತಿಯಲ್ಲಿಯೇ ಮುಂದುವರೆಸಬೇಕು. ವಿಸ್ತರಣೆ, ಕ್ರಾಂಕೀಟ್ ಹಾಕುವುದು ಮುಂತಾದ ಕಾಮಗಾರಿ ಮಾಡುವಂತಿಲ್ಲ ಎಂಬ ನಿಯಮವಿದೆ. ಡಾಂಬಾರು ರಸ್ತೆ ಇದ್ದರೆ ಅದನ್ನು ಅದೇ ರೀತಿ ನಿರ್ವಹಣೆ ಮಾಡಬೇಕು ಎಂದಿದೆ. ಆದರೆ ಈಗ ವಿಸ್ತರಣೆಗೆ ಪ್ರಸ್ತಾವನೆ ಸಿದ್ಧಗೊಳಿಸಲಾಗುತ್ತಿದೆ.
ಬಂಡೀಪುರ ಹುಲಿ, ಆನೆ ಸೇರಿದಂತೆ ವಿವಿಧ ಪ್ರಾಣಿಗಳ ಆವಾಸ ಸ್ಥಾನ. ಇಂತಹ ಜೀವವೈವಿದ್ಯತೆ ಶೇ 1ರಷ್ಟು ಮಾತ್ರ ಉಳಿದಿದೆ. ಇಂತಹ ಪ್ರದೇಶದಲ್ಲಿ ಹೊಸ ಕಾಮಗಾರಿ ಕೈಗೊಳ್ಳುವ ಮೂಲಕ ಆವಾಸ ಸ್ಥಾನಕ್ಕೆ ಧಕ್ಕೆ ತರಬಾರದು ಎಂಬುದು ವನ್ಯಜೀವಿ ತಜ್ಞರ ವಾದವಾಗಿದೆ.