ಚಾಮರಾಜನಗರ ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಣಿಕೆಗೆ ಕಡಿವಾಣ ಇಲ್ಲವೆ?
ಚಾಮರಾಜನಗರ, ಜನವರಿ 01: ರಾಜ್ಯ ಸರ್ಕಾರದ ಅನ್ನಭಾಗ್ಯದ ಅಕ್ಕಿಯನ್ನು ಕಳ್ಳಸಾಗಾಣಿಕೆ ಮಾಡುವ ಜಾಲ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಆಗಾಗ್ಗೆ ಪ್ರಕರಣಗಳು ನಡೆಯುತ್ತಿರುವುದು ಸಂಶಯಕ್ಕೆಡೆ ಮಾಡಿಕೊಡುತ್ತಿದೆ.
ಚಾಮರಾಜನಗರದಿಂದ ಅನ್ನಭಾಗ್ಯದ ಅಕ್ಕಿಯನ್ನು ತಮಿಳುನಾಡಿಗೆ ಸಾಗಿಸುವ ಕೃತ್ಯಗಳು ನಡೆಯುತ್ತಿದ್ದು ಸಾವಿರಾರು ಕೆಜಿ ಅಕ್ಕಿಯನ್ನು ಸಂಗ್ರಹಿಸಿ ಬಳಿಕ ಅದನ್ನು ತಮಿಳುನಾಡು ಅಥವಾ ಕೇರಳಕ್ಕೆ ಸಾಗಿಸಲಾಗುತ್ತಿದೆ. ಪೊಲೀಸರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರೂ ಕೆಲವೊಮ್ಮೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ವಾಹನಗಳಲ್ಲಿ ಕರ್ನಾಟಕದ ಗಡಿದಾಟಿ ಹೋಗುತ್ತಿವೆ.
ಮಂಗಳೂರಿನಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ: ಅಕ್ರಮ ಸಾಗಾಟ ಬಯಲು
ಸಿದ್ದರಾಮಯ್ಯ ಅವರು ಐದು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ಎಂಬ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಇದು ಬಡವರ ಹಸಿವು ನೀಗಿಸುವ ಮಹತ್ವದ ಯೋಜನೆಯಾಗಿತ್ತು. ಆದರೆ ಇದರ ದುರುಪಯೋಗವೂ ಆಯಿತು ಎನ್ನುವುದು ಕೂಡ ಅಷ್ಟೇ ಸತ್ಯ.
ಇವತ್ತು ನ್ಯಾಯಬೆಲೆ ಅಂಗಡಿಯಿಂದ ಈ ಅಕ್ಕಿಯನ್ನು ಪಡೆದುಕೊಳ್ಳುವ ಕೆಲವು ಕುಟುಂಬಗಳು ಬಳಿಕ ಅದನ್ನು ಬೇರೆಯವರಿಗೆ ಅಥವಾ ಅಂಗಡಿಗಳಿಗೆ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. ಕೆಲವು ವ್ಯಕ್ತಿಗಳು ಮನೆಮನೆಗೆ ಬಂದು ಅನ್ನಭಾಗ್ಯದ ಅಕ್ಕಿಯನ್ನು ಹತ್ತೋ ಹದಿನೈದೋ ರೂಪಾಯಿಗೆ ಖರೀದಿಸುತ್ತಿದ್ದು ಬಳಿಕ ಸಂಗ್ರಹಿಸಿ ಬೇರೆಡೆಗೆ ಸಾಗಿಸುವ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅನ್ನಭಾಗ್ಯದ ಅಕ್ಕಿ ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿ ಬೀಳುವ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದರೆ ಹಿಂದಿನ ರಹಸ್ಯಗಳು ಬಯಲಾಗಲಿದೆ.
ಬೇರೆಯವರಿಗೆ ಮಾರಾಟ
ಆರ್ಥಿಕವಾಗಿ ಸದೃಢರಾಗಿರುವವರೇ ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಪಡಿತರ ಹೊಂದಿದ್ದು, ಅದಕ್ಕೆ ಸಿಗುವ ಸರ್ಕಾರದ ಆಹಾರ ಪದಾರ್ಥಗಳನ್ನು ಪಡೆದು ಬಳಿಕ ಬೇರೆಯವರಿಗೆ ಮಾರಾಟ ಮಾಡುವ ಕೃತ್ಯಗಳು ನಡೆಯುತ್ತಿವೆ. ಇದರ ಲಾಭವನ್ನು ಪಡೆಯುವ ಮಧ್ಯವರ್ತಿಗಳು ಅಂಥಹವರಿಂದ ಪದಾರ್ಥಗಳನ್ನು ಖರೀದಿಸಿ ಅದನ್ನು ಬೇರೆಡೆಗೆ ಸಾಗಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ.
ಅಪರೂಪಕ್ಕೊಮ್ಮೆ ಮಾತ್ರ ಬೆಳಕಿಗೆ
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಣಿಕೆ ಮಾಡುವಾಗ ಸಿಕ್ಕಿ ಬಿದ್ದ ಹಲವು ಪ್ರಕರಣಗಳು ನಡೆದಿವೆ. ಇನ್ನು ಯಾರ ಕಣ್ಣಿಗೂ ಸಿಗದೆ ಅದೆಷ್ಟು ಬೇರೆ ರಾಜ್ಯಗಳನ್ನು ಪ್ರವೇಶಿಸಿವೆಯೋ ಗೊತ್ತಿಲ್ಲ. ಅಪರೂಪಕ್ಕೊಮ್ಮೆ ಮಾತ್ರ ಬೆಳಕಿಗೆ ಬರುತ್ತಿದೆ. ಇಷ್ಟಕ್ಕೂ ಚಾಮರಾಜನಗರ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ಮಾಡಿದಾಗ ಸಿಗುತ್ತಿರುವ ಅಕ್ಕಿ ಚಾಮರಾಜನಗರ ಜಿಲ್ಲೆಯಲ್ಲೇ ಸಂಗ್ರಹವಾಗಿದ್ದು ಎನ್ನಲಾಗುತ್ತಿಲ್ಲ.
ಅನ್ನಭಾಗ್ಯದಡಿ 7 ಅಥವ 5 ಕೆಜಿ ಅಕ್ಕಿ?, ಇನ್ನೂ ಗೊಂದಲ
2,650 ಕೆಜಿ ಅಕ್ಕಿ ವಶ
ಸುತ್ತಮುತ್ತಲ ಜಿಲ್ಲೆಯಲ್ಲಿ ಸಂಗ್ರಹಿಸಿ ಅದನ್ನು ತಮಿಳುನಾಡಿಗೋ ಅಥವಾ ಕೇರಳಕ್ಕೋ ಇಲ್ಲವೆ ರಾಜ್ಯದ ಇತರೆ ಜಿಲ್ಲೆಯ ಅಕ್ಕಿಗಿರಣಿಗೆ ಸಾಗಿಸಿ ಅಲ್ಲಿ ಆ ಅಕ್ಕಿಗೆ ಪಾಲಿಶ್ ಮಾಡಿಸಿ ಮಾರಾಟ ಮಾಡುವ ಕೃತ್ಯಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಇದೀಗ ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದ ನಾಗರಾಜು ಎಂಬ ವ್ಯಕ್ತಿಯನ್ನು ಚಾಮರಾಜನಗರ ಜಿಲ್ಲೆಯ ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಿದ್ದು ಆತನಿಂದ ಸುಮಾರು 2,650 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ದುರುಪಯೋಗವಾಗುವುದರಲ್ಲಿ ಸಂಶಯವಿಲ್ಲ
ಬಂಧಿತ ವ್ಯಕ್ತಿ ಪಿಕ್ ಅಪ್ ವಾಹನದಲ್ಲಿ ತಲಾ 50 ಕೆಜಿಯಂತೆ 53 ಮೂಟೆಗಳಲ್ಲಿ ಅಕ್ಕಿಯನ್ನು ತುಂಬಿಸಿ ಸಾಗಾಣಿಕೆ ಮಾಡುತ್ತಿದ್ದನು ಎನ್ನಲಾಗಿದೆ. ಈತ ಈ ಅಕ್ಕಿಯನ್ನು ಜಿಲ್ಲೆಯಿಂದ ಮಂಡ್ಯದ ಕಡೆಗೆ ಸಾಗಿಸುತ್ತಿದ್ದನಂತೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ಹಿಂದಿನ ರಹಸ್ಯವನ್ನು ಬಯಲಿಗೆಳೆಯದೆ ಹೋದರೆ ಸರ್ಕಾರದ ಯೋಜನೆಗಳು ದುರುಪಯೋಗವಾಗುವುದರಲ್ಲಿ ಸಂಶಯವಿಲ್ಲ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು?