ಇನ್ಮುಂದೆ ಬಂಡೀಪುರದ ಹುಲಿಯಮ್ಮನ ದೇಗುಲಕ್ಕೆ ಸಲೀಸಾಗಿ ಹೋಗುವಂತಿಲ್ಲ!
ಚಾಮರಾಜನಗರ, ಸೆಪ್ಟೆಂಬರ್ 13: ಬಂಡೀಪುರ ಅರಣ್ಯ ವಲಯದಲ್ಲಿ ಕೆಲವು ದೇವಾಲಯಗಳಿದ್ದು, ಅವುಗಳ ಪೈಕಿ ಕುಂದಕೆರೆ ಅರಣ್ಯ ವಲಯದಲ್ಲಿರುವ ಹುಲಿಯಮ್ಮನ ದೇವಾಲಯವೂ ಒಂದಾಗಿದೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಬಂಡೀಪುರ ಅರಣ್ಯ ವಲಯವನ್ನು ಘೋಷಣೆ ಮಾಡಲಾಗಿದ್ದು, ಅತಿ ಹೆಚ್ಚಿನ ಹುಲಿಗಳು ಇಲ್ಲಿವೆ. ಇದು ಹುಲಿಯಮ್ಮ ದೇವಿಯ ಕೃಪೆ ಎಂದರೂ ತಪ್ಪಾಗಲಾರದು.
ನಮ್ಮ ಪೂರ್ವಜರು ಪ್ರಕೃತಿಯ ಒಡನಾಟದಲ್ಲಿ ಬದುಕಿದವರು. ಅವರು ಪ್ರಕೃತಿಯನ್ನು ಆರಾಧಿಸುತ್ತಾ ಬಂದಿದ್ದರು. ಹೀಗಾಗಿಯೇ ಇವತ್ತಿಗೂ ಅರಣ್ಯಗಳಲ್ಲಿ ವಿವಿಧ ದೇವರ ಗುಡಿ ಹಾಗೂ ದೇವಾಲಯಗಳಿರುವುದನ್ನು ಕಾಣಬಹುದಾಗಿದೆ. ತಮಗೆ ಅಥವಾ ಊರಿಗೆ ಸಂಕಷ್ಟ ಬಂದಾಗ ಊರಿನ ದೇವಾಲಯಗಳಲ್ಲಿ ಸಂಕಷ್ಟ ನಿವಾರಣೆಗೆ ಬೇಡಿಕೊಳ್ಳುತ್ತಿದ್ದರು. ಇಂತಹ ಸಂಪ್ರದಾಯ ಇಂದಿಗೂ ಮುಂದುವರೆದುಕೊಂಡು ಬಂದಿದೆ.
ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ಖಾಯಂ ಆಗುತ್ತಾ?
ಅದರಂತೆ ಬಂಡೀಪುರದ ಕುಂದಕೆರೆ ಅರಣ್ಯ ವಲಯದಲ್ಲಿರುವ ಹುಲಿಯಮ್ಮ ದೇವಿ ಕೂಡ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡು ಬಂದ ಶಕ್ತಿದೇವತೆಯಾಗಿದ್ದು, ಇಲ್ಲಿಗೆ ಭಕ್ತರು ತೆರಳಿ ಪೂಜೆ ಮಾಡಿಸಿ, ಹರಕೆ ಸಲ್ಲಿಸಿ ಬರುತ್ತಿದ್ದರು. ಆದರೆ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದ ಬಳಿಕ ಇಲ್ಲಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಮುಂದಿನ ದಿನಗಳಲ್ಲಿ ಹಬ್ಬದ ದಿನಗಳನ್ನು ಹೊರತುಪಡಿಸಿ ಇತರೆ ದಿನಗಳಲ್ಲಿ ಇಲ್ಲಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಹಿಂದಿನಿಂದಲೂ ಸುತ್ತಮುತ್ತಲ ಗ್ರಾಮಗಳ ಹುಲಿಯಮ್ಮನ ಆರಾಧಕರು ಇಲ್ಲಿಗೆ ತೆರಳಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಜಾತ್ರೆ ನಡೆಸುತ್ತಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಕೆಲವರು ಪೂಜೆ ಸಲ್ಲಿಸುವ ನೆಪವೊಡ್ಡಿ ಅಲ್ಲಿಗೆ ತೆರಳಿ ಮೋಜು ಮಸ್ತಿ ನಡೆಸುತ್ತಿರುವ ಆರೋಪಗಳು ಕೇಳಿ ಬಂದಿವೆ. ಜತೆಗೆ ಈ ವ್ಯಾಪ್ತಿಯಲ್ಲಿ ನರಭಕ್ಷಕ ಹುಲಿ ಅಡ್ಡಾಡುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ದಿನಗಳನ್ನು ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ಪ್ರವೇಶ ನಿರ್ಬಂಧಿಸಲು ತೀರ್ಮಾನಿಸಲಾಗಿದೆ.
ಬಂಡೀಪುರ ರಾತ್ರಿ ಸಂಚಾರದ ಮೇಲೆ ಮತ್ತೆ ರಾಹುಲ್ ಗಾಂಧಿ ಕಣ್ಣು
ಇನ್ಮುಂದೆ ವರ್ಷಕ್ಕೊಮ್ಮೆ ನಡೆಯುವ ವಿಶೇಷ ಪೂಜೆ ಮತ್ತು ಇತರೆ ಸಂದರ್ಭಗಳಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆದು ವನ್ಯಪ್ರಾಣಿಗಳು ಮತ್ತು ಅರಣ್ಯ ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ಸೀಮಿತ ಸಂಖ್ಯೆಯಲ್ಲಿ ಜನರು ತೆರಳಿ ಪೂಜೆ ಸಲ್ಲಿಸಿ, ನಿಗದಿತ ಸಮಯದೊಳಗೆ ಹಿಂತಿರುಗಬೇಕು. ಅನುಮತಿ ಪಡೆಯದೆ ಹುಲಿಯಮ್ಮನ ದೇಗುಲಕ್ಕೆ ಪ್ರವೇಶಿಸುವಂತಿಲ್ಲ. ಎಸ್ಟಿಪಿಎಫ್ ಎಸಿಎಫ್ ಕೆ.ಪರಮೇಶ್ ಹೇಳುವ ಪ್ರಕಾರ ಇದು ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ಹುಲಿ ಸೇರಿದಂತೆ ಇತರೆ ವನ್ಯಪ್ರಾಣಿಗಳ ಚಲನವಲನ ಹೆಚ್ಚಿರುತ್ತದೆ. ಹೀಗಾಗಿ ಅರಣ್ಯದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ಮತ್ತು ವನ್ಯಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದ್ದು, ಸುತ್ತಮುತ್ತಲ ಗ್ರಾಮಗಳ ಜನರು ಸಹಕರಿಸುವಂತೆ ಮನವಿ ಮಾಡಿದ್ದಾರೆ.